
ಮಡಿಕೇರಿ NEWS DESK ಮೇ 18 : ವಾಸ್ತವವಾಗಿ ಭಕ್ತಿ ಆತ್ಮನಿವೇದನೆಗೆ ಮತ್ತು ಸಾಮಾಜಿಕ ಬದುಕಿನಲ್ಲಿ ಸಂಸ್ಕಾರವನ್ನು ಮೂಡಿಸುವುದಕ್ಕೆ ಅಗತ್ಯವಾಗಿದೆ. ಆದರೆ ಇಂದು ಭಕ್ತಿಯನ್ನು ಬೀದಿಯ ಸರಕನ್ನಾಗಿ ನಾವು ನೋಡುತ್ತಿದ್ದೇವೆ ಎಂದು ಸಂತ ಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷ ಕಾ.ತ.ಚಿಕ್ಕಣ್ಣ ಅವರು ಅಭಿಪ್ರಾಯಪಟ್ಟಿದ್ದಾರೆ. ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು, ಬೆಂಗಳೂರಿನ ಸಂತ ಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ ಹಾಗೂ ಕಾಲೇಜಿನ ಕನ್ನಡ ವಿಭಾಗದ ಸಹಯೋಗದಲ್ಲಿ “ಮುತ್ತು ಬಂದಿದೆ ಕೇರಿಗೆ” ಎಂಬ ರಸ ಗ್ರಹಣ ಶಿಬಿರ ಕಾಲೇಜು ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾ.ತ.ಚಿಕ್ಕಣ್ಣ ಅವರು ಕನಕದಾಸರು ಕೇವಲ ಭಕ್ತ ಮಾತ್ರ ಅಲ್ಲ, ಅವರು ಒಬ್ಬ ವಿಚಾರವಾದಿ ಹಾಗೂ ಕವಿಯೂ ಅಗಿದ್ದರು. ಹರಿದಾಸ ಪರಂಪರೆಯಲ್ಲಿ 150 ಹರಿದಾಸರು ಬಂದು ಹೋಗಿದ್ದಾರೆ. ಭಕ್ತಿಯನ್ನು ಸಾಮಾಜಿಕ ಸುಧಾರಣೆಗೆ ಮತ್ತು ಜ್ಞಾನೋಪಾಸನೆಗೆ ಬಳಸಿಕೊಂಡ ಕೀರ್ತನಾಕಾರರಲ್ಲಿ ಮೊದಲು ನಿಲ್ಲುವವರು ಕನಕದಾಸರು ಹಾಗೂ ಪುರಂದರದಾಸರು ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾರ್ಯಪ್ಪ ಕಾಲೇಜು ಪ್ರಾಂಶುಪಾಲ ಮೇಜರ್ ಡಾ.ರಾಘವ ಬಿ. ಅವರು ದಾಸರಲ್ಲಿ ಶ್ರೇಷ್ಠರು ಕನಕದಾಸರು, ಇವರು ಒಬ್ಬ ತತ್ವಜ್ಞಾನಿ, ಕವಿ ಹಾಗೂ ಸಂಗೀತಗಾರರೂ ಆಗಿದ್ದರು. ಮಾನವತಾವಾದಿಯಾದ ಕನಕದಾಸರನ್ನು ಒಂದು ಜಾತಿಗೆ ಸೀಮಿತಗೊಳಿಸಬಾರದು ಎಂದರು. ವಿಶೇಷ ಉಪನ್ಯಾಸಕರಾದ ಡಾ.ಪುರುಷೋತ್ತಮ ಡಿ. ಅವರು ಮಾತನಾಡಿ ಕನಕದಾಸರ ಚಿಂತನೆಗಳ ಜೊತೆಗೆ ನಮ್ಮ ಇಡೀ ಭಾರತದ ಚರಿತ್ರೆಯನ್ನು ಗಮನಿಸಿದಾಗ ಇಬ್ಬರು ನಮಗೆ ಬಹಳ ಮುಖ್ಯವಾಗುತ್ತಾರೆ. ಅಶೋಕ ಯುದ್ಧವನ್ನು ನಿರಾಕರಿಸಿದ ಮಹಾನ್ ಚಕ್ರವರ್ತಿ. ಕಳಿಂಗ ಯುದ್ಧದ ರಕ್ತಪಾತ ನೋಡಿ ಯುದ್ಧ ಬೇಡವೆಂದು ನಿರ್ಧರಿಸಿ ಬೌದ್ಧ ಧರ್ಮದ ಚಿಂತನೆಗಳನ್ನು ಅಳವಡಿಸಿಕೊಂಡು ವಿಶ್ವಕ್ಕೆ ಶಾಂತಿ ಸಂದೇಶ ನೀಡಿದವರು ಅವರು. ರಾಜಮನೆತನದ ವರ್ಚಸ್ಸು, ಅಧಿಕಾರ ಇದ್ದರೂ ದಾಸರಾದ ಕನಕದಾಸರು ಶಾಂತಿಯ ಅನುಭವ ಆಗಬೇಕಾದರೆ ಯುದ್ಧದ ದುಷ್ಪರಿಣಾಮಗಳ ಅರಿವಿರಬೇಕು. ಎಲ್ಲಾ ವೃತ್ತಿಗಳ ಮೂಲ ಉದ್ದೇಶ ಮನುಷ್ಯನ ಮುಲಭೂತ ಆವಶ್ಯಕತೆಗಳಲ್ಲದೆ ಬೇರೇನಿಲ್ಲ. “ಎಲ್ಲಾರು ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ” ಎಂಬ ದಾಸರ ಕೀರ್ತನೆಯ ಸಾರ ಇದು ಎಂದು ತಿಳಿಸಿದರು. ಮಾಹಿತಿ ಇದ್ದರೆ ಸಾಲದು ಜ್ಞಾನ ಇರಬೇಕು, ನಮ್ಮೊಳಗಿನ ನಾನು ಎಂಬುವುದನ್ನು ಕಳೆದುಕೊಳ್ಳುವುದು ಬಹಳ ಮುಖ್ಯ. ನಾನೇ ಎಂಬ ಅಹಂ ಇರಬಾರದು, ನಮ್ಮಲ್ಲಿ ಬಾಗುವ ಗುಣ ಮತ್ತು ಸ್ವೀಕರಿಸುವ ಗುಣ ಇರಬೇಕು ಎಂದು ಕರೆ ನೀಡಿದರು. ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆಯನ್ನು ಏರ್ಪಡಿಸಿ ಬಹುಮಾನ ವಿತರಿಸಲಾಯಿತು. ಕನ್ನಡ ವಿಭಾಗದ ಮುಖ್ಯಸ್ಥ ಪೂಣಚ್ಚ ಸ್ವಾಗತಿಸಿ, ವಿದ್ಯಾರ್ಥಿನಿ ವರ್ಷ ನಿರೂಪಿಸಿ, ಡಾ.ಮಹಾಲಕ್ಷ್ಮಿ ಟಿ.ಎಸ್ ವಂದಿಸಿದರು. ವಿದ್ಯಾರ್ಥಿನಿ ಸಪ್ನ ಎಂ.ಶೇಟ್ ಕೀರ್ತನೆ ಹಾಡಿದರು. ಕನ್ನಡ ವಿಭಾಗದ ಅಧ್ಯಾಪಕರು ಉಪಸ್ಥಿತರಿದ್ದರು.










