
ಕುಶಾಲನಗರ ಮೇ 19 NEWS DESK : ಬಸವಣ್ಣನವರ ವಚನಗಳು ಹಾಗೂ ಶಿವಶರಣೆಯರ ವಚನಗಳು ಜನಸಾಮಾನ್ಯರ ಬದುಕಿಗೆ ಹತ್ತಿರವಾಗಿವೆ.ವಿಶ್ವ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿರುವ ವಚನ ಸಾಹಿತ್ಯವು ಕನ್ನಡ ಸಾಹಿತ್ಯದ ಮಹತ್ವದ ಕೊಡುಗೆ ನೀಡಿದೆ ಎಂದು
ಗುಂಡ್ಲುಪೇಟೆ ತಾಲ್ಲೂಕಿನ ಕಬ್ಬಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಉಪ ಪ್ರಾಂಶುಪಾಲ ಎಸ್.ಎಂ ಸಿದ್ದರಾಜಪ್ಪ ಹೇಳಿದರು.
ಅಖಿಲ ಭಾರತ ವೀರಶೈವ- ಲಿಂಗಾಯತ ಮಹಾಸಭಾ ಕುಶಾಲನಗರ ತಾಲ್ಲೂಕು ಘಟಕದ ವತಿಯಿಂದ ಕುಶಾಲನಗರ ಪಟ್ಟಣದ ಗಾಯತ್ರಿ ಕಲ್ಯಾಣ ಮಂದಿರದಲ್ಲಿ ಶನಿವಾರ ಸಂಜೆ ಏರ್ಪಡಿಸಿದ್ದ ಐದನೇ ವರ್ಷದ ಬಸವ ಜಯಂತಿ ಕಾರ್ಯಕ್ರಮದಲ್ಲಿ 12 ನೇ ಶತಮಾನದ ವಚನ ಸಾಹಿತ್ಯ ಹಾಗೂ ಶಿವ ಶರಣ- ಶರಣೆಯರ ಕೊಡುಗೆ ಕುರಿತು ವಿಶೇಷ ಉಪನ್ಯಾಸ ನೀಡಿದರು. ಭಕ್ತಿ ಭಂಡಾರಿ, ಮಹಾನ್ ಮಾನವತಾವಾದಿ ಹಾಗೂ ಸಾಮಾಜಿಕ ಕ್ರಾಂತಿ ಪುರುಷ
ಜಗಜ್ಯೋತಿ ಬಸವಣ್ಣನವರ ವಚನಗಳು ಸಾರ್ವಕಾಲಿಕ ಸತ್ಯವನ್ನು ಸಾರುತ್ತವೆ. ಬಸವಣ್ಣನವರ ಸಾರಥ್ಯದಲ್ಲಿ 12 ನೇ ಶತಮಾನದಲ್ಲಿ ನಡೆದ ವಚನ ಚಳವಳಿಯು ಸಾಮಾಜಿಕ ಚಳವಳಿಯಾಗಿ ರೂಪುಗೊಂಡಿತ್ತು ಎಂದರು. ‘ಜಾತಿ ರಹಿತ ಮತ್ತು ವರ್ಗರಹಿತ ಸಮಾಜದ ಕಲ್ಪನೆಯನ್ನು ಜಗತ್ತಿಗೆ ತೋರಿಸಿದವರು ಬಸವಣ್ಣನವರು. ಕಾಯಕವೇ ಕೈಲಾಸ ಎಂಬ ತತ್ವದೊಂದಿಗೆ ಆರೋಗ್ಯವಂತ ಸಮಾಜಕ್ಕೆ ಅಡಿಪಾಯ ಹಾಕಿದವರು ಬಸವೇಶ್ವರರು’ ಎಂದು ಸಿದ್ದರಾಜಪ್ಪ ಬಣ್ಣಿಸಿದರು. 12ನೇ ಶತಮಾನದ ಸಮಾಜ ಸುಧಾರಕ ಬಸವಣ್ಣನವರು ವಚನಗಳ ಮೂಲಕ ಹಾಕಿಕೊಟ್ಟ ಭಕ್ತಿ ಮಾರ್ಗ, ಜಾತಿ ವ್ಯವಸ್ಥೆ, ಕಂದಾಚಾರ, ಮೌಢ್ಯ ರಹಿತ ವರ್ಗರಹಿತ ಸಮಾಜ ನಿರ್ಮಾಣಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ ಎಂದರು. 12 ನೇ ಶತಮಾನದಲ್ಲಿ ಬಸವಣ್ಣನವರು ಮಾನವೀಯತೆಗೆ ಮಾರ್ಗದರ್ಶಕ ಬೆಳಕಾಗಿದ್ದರು ಎಂದು ಬಣ್ಣಿಸಿದರು ಮತ್ತು ಅವರ ತತ್ವಶಾಸ್ತ್ರದ ನಿರಂತರ ಪ್ರಸ್ತುತತೆಯನ್ನು ಒತ್ತಿ ಹೇಳಿದರು.
ಮಹಾಪುರುಷರು ಬೌದ್ಧಿಕವಾಗಿ ಬದುಕಿದ್ದಾರೆ. ಆ ಸಾಲಿನಲ್ಲಿ ಬಸವಣ್ಣನವರು ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ ಎಂದರು. ಧಾರ್ಮಿಕ ಸಭೆ ಉದ್ಘಾಟಿಸಿ ಮಾತನಾಡಿದ ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ, ಮಾತನಾಡಿ, ಬಸವಣ್ಣನವರು ಅನುಭವ ಮಂಟಪ ಸ್ಥಾಪಿಸಿ, ಅದರಲ್ಲಿ ಎಲ್ಲಾ ವರ್ಗಗಳ ವಚನಕಾರರ ಕಾಯಕ ಸಮಾಜವನ್ನು ನಿರ್ಮಾಣ ಮಾಡಿದ್ದಾರೆ. ಪ್ರತಿಯೊಬ್ಬರೂ ಬಸವಣ್ಣನವರ ಆದರ್ಶಗಳನ್ನು ತಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ತೊರೆನೂರು ವಿರಕ್ತಮಠದ ಮಲ್ಲೇಶ ಸ್ವಾಮೀಜಿ ಮಾತನಾಡಿ,
ಬಸವಣ್ಣನವರಂತಹ ಪರಮಜ್ಞಾನಿಗಳ ವಚನಗಳನ್ನು ಕೇಳಿ ಪಾಲಿಸಿದರೆ ಪ್ರತಿಯೊಬ್ಬರ ಬದುಕು ಹಸನಾಗುತ್ತದೆ ಎಂದರು. ಮೌಲ್ಯಯುತವಾದ ವಚನ ಸಾಹಿತ್ಯವನ್ನು ಮಕ್ಕಳಿಗೆ ಬಾಲ್ಯದಿಂದಲೇ ಬೋಧಿಸುವ ಕೆಲಸದಲ್ಲಿ ಪೋಷಕರ ಪಾತ್ರವು ಪ್ರಮುಖವಾಗಿದೆ ಎಂದರು. ಶನಿವಾರಸಂತೆ ಶಿಡಿಗಳಲೆ ಮಠ ಇಮ್ಮಡಿ ಶಿವಲಿಂಗ ಸ್ವಾಮೀಜಿ, ಸೋಮವಾರಪೇಟೆ ವಿರಕ್ತ ಮಠದ ನಿಶ್ಚಲ ದೇಶಿ ಕೇಂದ್ರ ಸ್ವಾಮೀಜಿ, ಅರಕಲಗೂಡು ಚಿಲುಮೆ ಮಠದ ಜಯದೇವ ಸ್ವಾಮೀಜಿ, ಮಹಾಸಭಾದ ಜಿಲ್ಲಾಧ್ಯಕ್ಷ ಎಚ್.ವಿ. ಶಿವಪ್ಪ, ಡಿವೈಎಸ್ಪಿ ಆರ್. ವಿ. ಗಂಗಾಧರಪ್ಪ ಮಾತನಾಡಿದರು. ಜಿಲ್ಲಾ ವೀರಶೈವ- ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಸ್ ನಂದೀಶ್ , ಸಮಾಜ ಸೇವಕ ಕೆ.ಎನ್ ವಸಂತ್, ಮಹಾಸಭಾದ ವಿವಿಧ ಘಟಕಗಳ
ಪ್ರಮುಖರಾದ ಎಂ.ಎಸ್.ಶಿವಾನಂದ, ಶುಭಶೇಖರ್, ಧರ್ಮೇಂದ್ರ, ಕೆ.ಯು.ಎಂ ಬಸವರಾಜ್, ಆದರ್ಶ್, ಎನ್ ಎಂ ರಾಜೇಶ್, ರುದ್ರ ಪ್ರಸನ್ನ, ದೀಪಿಕಾ ಕರುಣ್, ಕಮಲಾ ಉದಯಕುಮಾರ್, ಮನು ಜಗದೀಶ್, ಎಂ.ಕೆ.ಧನರಾಜ್, ಸುಶೀಲಮ್ಮ ಬಸವರಾಜ್,, ಬಿ.ಬಿ. ಲೋಕೇಶ್, ವಿ.ಸಿ.ಅಜಿತ್, ವಿಜಯ ಪಾಲಾಕ್ಷ, ಸರೋಜ ಆ ರಾಧ್ಯ, ಇದ್ದರು. ಅಧ್ಯಕ್ಷತೆ ವಹಿಸಿದ್ದ ಮಹಾಸಭಾದ ತಾಲೂಕು ಘಟಕದ ಅಧ್ಯಕ್ಷ ಎಚ್.ಎಂ.ಮಧುಸೂದನ್ ಮಾತನಾಡಿ, ಇಂತಹ ಕಾರ್ಯಕ್ರಮಗಳು ಜನರಲ್ಲಿ ಪರಸ್ಪರ ಪ್ರೀತಿ- ವಿಶ್ವಾಸ ಹಾಗೂ ಸಹಬಾಳ್ವೆಗೆ ಸಹಕಾರಿಯಾಗಿವೆ ಎಂದರು. ಶಿಕ್ಷಕಿ ಎಚ್.ಎಸ್. ಉಮಾದೇವಿ ಸ್ವಾಗತಿಸಿದರು. ಶಿಕ್ಷಕಿಯವರಾದ ಟಿ.ವಿ.ಶೈಲಾ, ಬಿ.ಬಿ.ಹೇಮಲತಾ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕಿ ವಿದ್ಯಾ ಅಜಿತ್ ವಂದಿಸಿದರು.
ಸಂಭ್ರಮದಿಂದ ಸಾಗಿದ ಮೆರವಣಿಗೆ: ಕುಶಾಲನಗರ ಪಟ್ಟಣದಲ್ಲಿ ಬಸವ ಜಯಂತಿ ಅಂಗವಾಗಿ ಶನಿವಾರ ಸಂಜೆ ನಡೆದ ಅದ್ಧೂರಿ ಮೆರವಣಿಗೆಯು ಗಮನ ಸೆಳೆಯಿತು. ಮೆರವಣಿಗೆಯಲ್ಲಿ ವೀರಗಾಸೆ ನೃತ್ಯ, ನಂದಿದ್ವಜ ಕುಣಿತ, ಮತ್ತು ಮಹಿಳೆಯರ ಸಾಂಪ್ರದಾಯಿಕ- ಜಾನಪದ ನೃತ್ಯಗಳು ಮೆರವಣಿಗೆ ಮುಂಭಾಗದಲ್ಲಿದ್ದರೆ, ಹಿಂಭಾಗದ ಅಲಂಕೃತ ರಥದಲ್ಲಿ ಬಸವೇಶ್ವರರ ಭಾವಚಿತ್ರ ಇಟ್ಟು, ಬೈಚನಹಳ್ಳಿ ಮಾರಿಯಮ್ಮ ದೇವಾಲಯದ ಬಳಿಯಿಂದ ಆರಂಭಗೊಂಡ ಮೆರವಣಿಗೆ ನಗರದ ಬಿ.ಎಂ.ರಸ್ತೆ,ರಥಬೀದಿ ಮೂಲಕ ಸಾಗಿ ಗಾಯತ್ರಿ ಕಲ್ಯಾಣ ಮಂದಿರದ ಆವರಣದಲ್ಲಿ ಸಮಾಪನಗೊಂಡಿತು. ಮೆರವಣಿಗೆಯಲ್ಲಿ ಮಳೆಯ ಸಿಂಚನ ಕೆಲಕಾಲ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅಡ್ಡಿ ಉಂಟಾಯಿತು. ಮೆರವಣಿಗೆಯಲ್ಲಿ ಅಕ್ಕನ ಬಳಗದ ಸದಸ್ಯರು, ನೂರಾರು ಭಕ್ತರು ಬಸವಣ್ಣನವರ ವಚನಗಳನ್ನು ಹಾಡಿದರು. ಬಸವ ಜಯಂತಿ ಅಂಗವಾಗಿ ನಗರದ ಮೆರವಣಿಗೆ ಹಾದಿ ಹಸಿರು ತಳಿರು- ತೋರಣ, ಹಾಗೂ ಕೇಸರಿ ಧ್ವಜಗಳಿಂದ ಕಂಗೊಳಿಸಲಾಗಿತ್ತು.









