
ಮಡಿಕೇರಿ ಆ.14 NEWS DESK : ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವಂತೆ ಗೌರಿ- ಗಣೇಶೋತ್ಸವ ಸಂದರ್ಭ ‘ಡಿಜೆ’ ಬಳಸಕೂಡದು. ಸಮುದಾಯದ ಹಿತದೃಷ್ಟಿಯನ್ನು ಗಮನದಲ್ಲಿರಿಸಿಕೊಂಡು ಗಣೇಶೋತ್ಸವ ಸಮಿತಿಗಳು ಶಬ್ದ ಮಿತಿಯ ಮೇಲೆ ನಿಗಾ ಇರಿಸಬೇಕು. ಇಲ್ಲವಾದಲ್ಲಿ ಅಗತ್ಯ ಕ್ರಮಗಳನ್ನು ನಿರ್ದಾಕ್ಷಿಣ್ಯವಾಗಿ ಕೈಗೊಳ್ಳಲಾಗುತ್ತದೆಂದು ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಸ್ಪಷ್ಟಪಡಿಸಿದರು. ನಗರದ ಗೌಡ ಸಮಾಜದ ಸಭಾಂಗಣದಲ್ಲಿ ‘ಗೌರಿ-ಗಣೇಶೋತ್ಸವ ಆಯೋಜಕರ ಸಭೆ’ಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಡಿಜೆಯ ಅತೀ ಹೆಚ್ಚಿನ ಶಬ್ದ ಮಟ್ಟದಿಂದ ಉಂಟಾಗಬಹುದಾದ ಸಮಸ್ಯೆಗಳ ಬಗ್ಗೆ ಜನರಿಗೆ ತಿಳುವಳಿಕೆ ನೀಡುವುದು ನಮ್ಮ ಜವಾಬ್ದಾರಿ. ಇದನ್ನು ಉತ್ಸವ ಆಯೋಜಕರು ಗಮನದಲ್ಲಿರಿಸಿಕೊಳ್ಳಬೇಕು ಮತ್ತು ಶಬ್ದ ಮಿತಿಯ ಮೇಲೆ ನಿಗಾ ಇರಿಸಬೇಕು. ಇಲ್ಲವಾದಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲೆ ಬೇಕಾಗುವುದರಿಂದ ನಮ್ಮ ನಿಮ್ಮಗಳ ಸಂಬಂಧ ಹಾಳಾಗಬಹುದೆಂದು ಸೂಕ್ಷ್ಮವಾಗಿ ನುಡಿದರು. ಪ್ರೆಶರ್ ಮಿಡ್ ಬಳಕೆ ಅಪಾಯಕಾರಿ- ಉತ್ಸವಗಳ ಸಂದರ್ಭ ಬಳಸುವ ಸ್ಪೀಕರ್ಗಳಲ್ಲಿ ‘ಪ್ರ್ರೆಶರ್ ಮಿಡ್’ಗಳನ್ನು ಬಳಸುವುದು ಅತ್ಯಂತ ಅಪಾಯಕಾರಿ. ಒಂದು ಪ್ರ್ರೆಶರ್ ಮಿಡ್ನಿಂದ 110 ಡೆಸಿಬಲ್ ಪ್ರಮಾಣದ ಶಬ್ದ ಹೊರ ಹೊಮ್ಮುತ್ತದೆ. ಮನುಷ್ಯದ ಕಿವಿಗಳು ಗರಿಷ್ಠ 90 ಡೆಸಿಬಲ್ ಶಬ್ದವನ್ನು ಕೇಳಬಹುದು. ಅದಕ್ಕಿಂತ ಹೆಚ್ಚಿನ ಶಬ್ದ ಕಿವುಡು ತನಕ್ಕೆ ಕಾರಣವಾಗಬಹುದೆಂದು ಎಚ್ಚರಿಕೆ ನೀಡಿದರು. ಉತ್ಸವಗಳ ಸಂದರ್ಭ ಸ್ಪೀಕರ್ ಒಂದರಲ್ಲೆ 30 ‘ಪ್ರೆಶರ್ ಮಿಡ್’ಗಳಂತೆ ಆರು ಸ್ಪೀಕರ್ಗಳನ್ನು ಬಳಸಲಾಗುತ್ತದೆ. ಅಂದರೆ 300 ಪ್ರ್ರೆಶರ್ ಮಿಡ್ಗಳ ಬಳಕೆಯಾಗುತ್ತಿದ್ದು, ಇದು ಅಪಾಯಕಾರಿ. ಸಮುದಾಯದ ಹಿತವನ್ನು ಉತ್ಸವ ಸಮಿತಿಯವರು ಗಮನಿಸಬೇಕು. ಅತ್ಯಂತ ಹೆಚ್ಚಿನ ಶಬ್ದದಿಂದ ನಮ್ಮ ನೆರೆ ಕರೆಯಲ್ಲಿರುವ ಹಿರಿಯರು. ಎಳೆಯ ಮಕ್ಕಳು, ಗರ್ಭಿಣಿಯರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಸಾಧ್ಯತೆ ಇದೆ. ಉತ್ಸವದ ಆಯೋಜನೆ ಸಂದರ್ಭ ಸಾಮಾನ್ಯ ಸ್ಪೀಕರ್ ಬಳಸಿ ಮತ್ತು ಶಬ್ದದ ಮಿತಿಯ ಮೇಲೆ ಎಚ್ಚರಿಕೆ ಇರಲಿ ಎಂದು ಸ್ಪಷ್ಟಪಡಿಸಿದರು. :: ಕನಿಷ್ಟ ದಾಖಲೆ ಒದಿಸಿದರಷ್ಟೆ ಸಾಕು :: ಈ ಬಾರಿ ಗಣೇಶೋತ್ಸವ ಆಚರಣೆಗೆ ಸಂಬಂಧಿಸಿದಂತೆ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಸಂಬಂಧ ಕನಿಷ್ಟ ದಾಖಲೆಗಳನ್ನಷ್ಟೆ ಕೇಳಲಾಗುತ್ತದೆ. ಯಾವುದೇ ಖಾಸಗಿ ಜಾಗದಲ್ಲಿ ಮೂರ್ತಿಯನ್ನು ಕೂರಿಸುವುದಾದರೆ, ಖಾಸಗಿ ವ್ಯಕ್ತಿಯ ಅನುಮತಿ, ಪಂಚಾಯ್ತಿ ಜಾಗಗಳಲ್ಲಾದರೆ ಪಂಚಾಯ್ತಿಯ ಒಪ್ಪಿಗೆ ಪತ್ರವನ್ನು ನೀಡಬೇಕು. ಹೆಚ್ಚಿನ ದಿನಗಳ ಕಾಲ ಉತ್ಸವಾಚರಣೆ ಇದ್ದಲ್ಲಿ ಸಿಸಿ ಟಿವಿ ಅಳವಡಿಕೆ ಸೇರಿದಂತೆ ಅಗತ್ಯ ಸೂಚನೆಗಳನ್ನು ಪಾಲಿಸಬೇಕಾಗುತ್ತದೆಂದು ತಿಳಿಸಿದರು. :: ಕಿವುಡು ತನ ಬಂದೀತು ಎಚ್ಚರಿಕೆ :: ಸಭೆಯಲ್ಲಿ ಪಾಲ್ಗೊಂಡಿದ್ದ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಇಎನ್ಟಿ ತಜ್ಞರಾದ ಡಾ. ಶ್ರೀಕಾಂತ್ ಮಾತನಾಡಿ, 120 ಡೆಸಿಬಲ್ ಶಬ್ದ ಕಿವಿಯ ತಮಟೆಯನ್ನು ಹಾಳು ಗೆಡಹುವುದರೊಂದಿಗೆ, ತಮಟೆಯ ಹಿಂಭಾಗದ ಅತ್ಯಂತ ಸೂಕ್ಷ್ಮ ನರತಂತುಗಳಿಗೆ ಶಾಶ್ವತ ಹಾನಿಯನ್ನು ಉಂಟು ಮಾಡುವ ಸಾಧ್ಯತೆಗಳಿದೆ. ಈ ಬಗ್ಗೆ ಅಚ್ಚರಿಕೆ ಅತ್ಯವಶ್ಯ. ಇದರೊಂದಿಗೆ ‘ಬ್ರೈನ್ ಹ್ಯಾಮರೇಜ್’, ಹೃದಯ ಸ್ತಂಭನಕ್ಕೂ ಈ ಶಬ್ದ ಕಾರಣವಾಗಬಹುದು. ಈ ಹಿನ್ನೆಲೆ 90 ಡೆಸಿಬಲ್ ಮಿತಿಯಲ್ಲಿ ಸ್ಪೀಕರ್ ಬಳಕೆ ಯೋಗ್ಯವೆಂದು ತಿಳಿಸಿದರು. :: ಕಾನೂನನ್ನು ಅರ್ಥಮಾಡಿಕೊಳ್ಳಿ :: ಪ್ರಾಸ್ತಾವಿಕವಾಗಿ ಮಾತನಾಡಿದ ಎಎಸ್ಪಿ ಬಾರಿಕೆ ದಿನೇಶ್, ಶಬ್ದ ಮಾಲಿನ್ಯ ನಿಯಂತ್ರಣ ಸೇರಿದಂತೆ ವಿವಿಧ ವಿಚಾರಗಳಿಗೆ ಸಂಬಂಧಿಸಿದಂತೆ ಇರುವ ಕಾನೂನುಗಳಿಂದ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲಾಗುವುದಿಲ್ಲ. ಬದಲಾಗಿ ಇರುವ ಕಾನೂನು ಏತಕ್ಕೆ ಎನ್ನುವ ವಿಚಾರವನ್ನು ಪ್ರತಿಯೊಬ್ಬರು ಅರ್ಥೈಸಿಕೊಂಡು ಮುನ್ನಡೆಯುವ ಅಗತ್ಯವಿದೆ. ಶಬ್ದ ಮಾಲಿನ್ಯಕ್ಕೆ ಕಡಿವಾಣ ಹಾಕಿ ಉತ್ಸವಾಚರಣೆಗೆ ಸಮಿತಿಗಳು ಮುಂದಾಗಬೇಕೆಂದು ತಿಳಿಸಿದರು. ಸಭೆಯಲ್ಲಿ ಡಿವೈಎಸ್ಪಿ ಸೂರಜ್ ಉಪಸ್ಥಿತರಿದ್ದರು. ವೃತ್ತ ನಿರೀಕ್ಷಕ ರಾಜು ಅವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. :: ಪ್ರಾತ್ಯಕ್ಷಿಕೆ :: ಸಭೆಯ ಬಳಿಕ ಸ್ಪೀಕರ್ಗಳಿಂದ ಮತ್ತು ಪ್ರ್ರೆಶರ್ ಮಿಡ್ ಬಳಸಿದ ಸ್ಪೀಕರ್ಗಳಿಂದ ಹೊರ ಹೊಮ್ಮುವ ವಿವಿಧ ಡೆಸಿಬಲ್ ಶಬ್ದಗಳ ಪ್ರಾತ್ಯಕ್ಷಿಕೆಯ ಮೂಲಕ ಉತ್ಸವ ಸಮಿತಿ ಪದಾಧಿಕಾರಿಗಳಿಗೆ ತಿಳಿಸಿಕೊಡಲಾಯಿತು.










