
*ಪೊಲೀಸರ ಮನೆಯಲ್ಲೇ ಕಳ್ಳತನ : ದೇಶದ ವಿವಿಧೆಡೆ ಅಪರಾಧ ಕೃತ್ಯವೆಸಗಿದ್ದ ಆರೋಪಿಗಳ ಬಂಧನ : 500 ಸಿಸಿ ಕ್ಯಾಮರಾ ಪರಿಶೀಲನೆ*
ಮಡಿಕೇರಿ NEWS DESK ಆ.19 : ಕರ್ನಾಟಕ ಸೇರಿದಂತೆ ದೇಶದ ವಿವಿಧೆಡೆ ಅಪರಾಧ ಕೃತ್ಯಗಳನ್ನು ನಡೆಸಿ ಕಾನೂನಿನ ಕಣ್ಣಿನಿಂದ ತಪ್ಪಿಸಿಕೊಳ್ಳುತ್ತಿದ್ದ ಆರೋಪಿಗಳನ್ನು ಸೆರೆಹಿಡಿಯುವಲ್ಲಿ ಕೊಡಗು ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ. ಕೊಡಗು ಜಿಲ್ಲೆಯ ಕೇಂದ್ರ್ರ ಸ್ಥಾನ ಮಡಿಕೇರಿಯಲ್ಲಿ ಪೊಲೀಸ್ ವಸತಿ ಗೃಹದಲ್ಲಿ ಇತ್ತೀಚೆಗೆ ನಡೆದ ಕಳವು ಪ್ರಕರಣದ ತನಿಖೆೆ ಕೈಗೊಂಡ ಪೊಲೀಸರಿಗೆ ಇಬ್ಬರು ಆರೋಪಿಗಳು ಸೆರೆ ಸಿಕ್ಕಿದ್ದಾರೆ. ಕಳೆದ ಎರಡು ತಿಂಗಳಿನಿಂದ ನೂರಕ್ಕೂ ಹೆಚ್ಚಿನ ಪೊಲೀಸ್ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಮಧ್ಯಪ್ರದೇಶದ ಧಾರ್ ಜಿಲ್ಲೆಯ ಇಬ್ಬರು ಆರೋಪಿಗಳನ್ನು ಬಂಧಿಸಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ತಮ್ಮ ಕಛೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಬಂಧಿತ ಆರೋಪಿಗಳನ್ನು ಮಧ್ಯಪ್ರದೇಶದ ಧಾರ್ ಜಿಲ್ಲೆಯ ನಾರ್ವಲ್ಲಿ ಗ್ರಾಮದ ಸುರೇಶ್ ಸೆಂಗಾರ್(23) ಹಾಗೂ ಮಾಲ್ಪುರ ಗ್ರಾಮದ ಮನೀಶ್ ಭಗೇಲ್ (27) ಎಂದು ಗುರುತಿಸಲಾಗಿದೆ. ಸುರೇಶ್ ವಿರುದ್ಧ ಕರ್ನಾಟಕ ಮತ್ತು ಹೊರ ರಾಜ್ಯಗಳಲ್ಲಿ 25 ಕ್ಕೂ ಹೆಚ್ಚಿನ ಅಪರಾಧ ಪ್ರಕರಣಗಳು ದಾಖಲಾಗಿದೆ. ತಲೆ ಮರೆಸಿಕೊಂಡಿರುವ ಉಳಿದ ಆರೋಪಿಗಳ ಸೆರೆಗೆ ಕ್ರಮ ಕೈಗೊಂಡಿರುವುದಾಗಿ ತಿಳಿಸಿದರು. *ಪೊಲೀಸರ ಮನೆಯಲ್ಲೇ ಕಳ್ಳತನ*
ಮಡಿಕೇರಿ ನಗರದ ಓಲ್ಡ್ ರೈಫಲ್ ರೇಂಜ್ ಪೊಲೀಸ್ ವಸತಿ ಗೃಹ ಸಮುಚ್ಛಯದಲ್ಲಿ ಇದೇ ಸಾಲಿನ ಜೂ.17 ರಂದು ರಾತ್ರಿ 8 ಮನೆಗಳ ಬಾಗಿಲನ್ನು ಮುರಿದು ಕಳ್ಳತನ ಮಾಡಲಾಗಿತ್ತು. ಮೂರು ಮನೆಗಳಿಂದ 95 ಸಾವಿರ ರೂ. ನಗದು ಮತ್ತು 5.5 ಗ್ರಾಂ ಚಿನ್ನಾಭರಣಗಳನ್ನು ಕಳವು ಮಾಡಲಾಗಿತ್ತು.
ಈ ಕಳವು ಪ್ರಕರಣವನ್ನು ಪತ್ತೆ ಹಚ್ಚುವ ಸಲುವಾಗಿ ವಿಶೇಷ ತನಿಖಾ ತಂಡವನ್ನು ರಚಿಸಿ ಕಾರ್ಯಾಚರಣೆ ನಡೆಸಲಾಯಿತು. ಬೈಕ್ನಲ್ಲಿ ಬಂದ ಮೂವರು ವ್ಯಕ್ತಿಗಳು ಕಳವು ನಡೆಸಿರುವ ಕುರಿತು ಮಾಹಿತಿ ಲಭ್ಯವಾಗಿತ್ತು. ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯ ಸಿಸಿ ಕ್ಯಾಮೆರಾಗಳ ಮಾಹಿತಿಯನ್ನು ಕಲೆಹಾಕಿ ತನಿಖೆ ನಡೆಸಲಾಯಿತು. *ಕೆರೆಯಲ್ಲಿ ಬೈಕ್ ಪತ್ತೆ* ತನಿಖೆಯ ಹಂತದಲ್ಲಿ ಮಕ್ಕಂದೂರು ಬಳಿಯ ಕಾಂಡನಕೊಲ್ಲಿಯ ಕೆರೆಯಲ್ಲಿ ಮಹಾರಾಷ್ಟ್ರ ನೋಂದಣಿ ಹೊಂದಿದ ಬೈಕ್ ಪತ್ತೆಯಾಗಿತ್ತು. ಈ ಆರೋಪಿಗಳು ತಾವು ದುಷ್ಕೃತ್ಯವೆಸಗುವ ಸಂದರ್ಭಗಳಲ್ಲೆಲ್ಲ ಕಳವು ಮಾಡಿದ ಬೈಕ್ಗಳನ್ನೆ ಬಳಸುತ್ತಿದ್ದರು. ಕೆರೆಗೆ ಹಾಕಿದ್ದ ಬೈಕ್ನ್ನು ಗೋವಾದಿಂದ ಕದ್ದು ಇಲ್ಲಿಗೆ ತರಲಾಗಿತ್ತು. ಬಳಿಕ ಮತ್ತೊಂದು ಬೈಕ್ ಕಳವು ಮಾಡಿ ತೆರಳಿದ್ದರೆಂದು ತನಿಖೆಯ ಸಂದರ್ಭ ತಿಳಿದು ಬಂದಿದೆ.
*500 ಸಿಸಿ ಕ್ಯಾಮರಾ ಪರಿಶೀಲನೆ* ಆರೋಪಿಗಳ ಸುಳಿವಿನ ಜಾಡು ಹಿಡಿದ ಪೊಲೀಸರು ಕೊಡಗು, ಹಾಸನ, ಗೋವಾ ಮೊದಲಾದೆಡೆ ಸುಮಾರು 700 ಕಿ.ಮೀ ವ್ಯಾಪ್ತಿಯ 500 ಕ್ಕೂ ಅಧಿಕ ಸಿಸಿ ಟಿವಿ ಕ್ಯಾಮರಾಗಳನ್ನು ಪರಿಶೀಲನೆಗೆ ಒಳಪಡಿಸಿದರು. ಆರೋಪಿಗಳ ಪತ್ತೆಗೆ ರಚಿಸಲಾಗಿದ್ದ ವಿಶೇಷ ತಂಡ ಮಧ್ಯಪ್ರದೇಶದ ದಾರ್ ಜಿಲ್ಲೆಗೆ ತೆರಳಿ ಅಲ್ಲಿನ ಪೊಲೀಸ್ ಅಧಿಕಾರಿಗಳ ಸಹಕಾರದಿಂದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದರು. ಬಂಧಿತರ ಬಳಿಯಿಂದ 50,480 ರೂ. ನಗದು, 9 ಮೊಬೈಲ್ ಫೋನ್ ಗಳು, ಒಂದು ಬೋಲ್ಟ್ ಕಟ್ಟರ್, ಒಂದು ಕಬ್ಬಿಣದ ರಾಡ್ ಮತ್ತು ಒಂದು ಬ್ಯಾಕ್ ಪ್ಯಾಕ್ ಬ್ಯಾಗ್ ನ್ನು ವಶಪಡಿಸಿಕೊಂಡಿರುವುದಾಗಿ ಎಸ್ಪಿ ಕೆ.ರಾಮರಾಜನ್ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಾರಿಕೆ ದಿನೇಶ್, ಡಿವೈಎಸ್ಪಿ ಸೂರಜ್, ತನಿಖಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
*ಮಡಿಕೇರಿ ನಗರ ಪೊಲೀಸರ ಅಭಿಪ್ರಾಯ ಮತ್ತು ಹರ್ಷ ಹೀಗಿದೆ ನೋಡಿ* >> *ಇದೊಂದು ಕೇಸು ಪತ್ತೆಯಾಗಬೇಕಿತ್ತು…. ಇದೊಂದು ಗೆಲುವು ಕೊಡಗು ಪೊಲೀಸರಿಗೆ ಬೇಕಾಗಿತ್ತು….?!*
ಪೊಲೀಸರ ವಸತಿ ಗೃಹದಲ್ಲೇ ಕಳ್ಳತನ,ರಕ್ಷಣೆ ನೀಡುವ ಆರಕ್ಷಕರಿಗೆ ರಕ್ಷಣೆ ಇಲ್ಲವೇ?…..ಎಂದು ಇತ್ಯಾದಿಯಾಗಿ ಮಡಿಕೇರಿಯ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾದದ್ದು ಕಳೆದ ಜೂನ್ 17ರಂದು ರಾತ್ರಿ ಜಿಲ್ಲಾ ಕೇಂದ್ರ ಮಡಿಕೇರಿಯ ಮೈತ್ರಿ ಹಾಲ್ ಬಳಿ ಇರುವ ಪೊಲೀಸ್ ವಸತಿ ಗೃಹಗಳಲ್ಲಿ ನಡೆದ ಕಳ್ಳತನ ಪ್ರಕರಣಗಳು. ಪೊಲೀಸರ ಮನೆಗಳಿಗೆ ಕನ್ನ ಹಾಕಿದ್ದ ಖದೀಮರು ಸುಮಾರು ಎಂಟು ಮನೆಗಳ ಬೀಗ ಹೊಡೆದು 90,000 ನಗದು ಸೇರಿದಂತೆ ಸ್ವಲ್ಪ ಪ್ರಮಾಣದ ಚಿನ್ನ-ಬೆಳ್ಳಿ ಆಭರಣಗಳನ್ನು ಕಳ್ಳರು ಕಳ್ಳತನ ಮಾಡುವ ಮೂಲಕ ಕೊಡಗು ಪೊಲೀಸರಿಗೆ ಎಸೆದಿದ್ದ ಸವಾಲನ್ನು ನಮ್ಮೆಲ್ಲರ ನೆಚ್ಚಿನ ಎಸ್.ಪಿ. ಸಾಹೇಬರು ಸವಾಲಾಗಿಯೇ ಸ್ವೀಕರಿಸಿ ಪ್ರಕರಣವನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಪೊಲೀಸ್ ಅಧಿಕಾರಿ-ಸಿಬ್ಬಂದಿಗಳ ವಿವಿಧ ತಂಡಗಳನ್ನು ರಚಿಸಿ ಆ ತಂಡಗಳಿಗೆ ಸಿಸಿಟಿವಿ ಪರಿಶೀಲಿಸುವ, ಮೊಬೈಲ್ ಟವರ್ ಡಂಪ್ ಪರಿಶೀಲಿಸುವ, ರಾಜ್ಯ – ಅಂತರ್ ರಾಜ್ಯ MOB ಗಳ ಮಾಹಿತಿ ಸಂಗ್ರಹಿಸುವುದು ಸೇರಿದಂತೆ ವಿವಿಧ ಜವಾಬ್ದಾರಿಗಳನ್ನು ನೀಡಿ ಪ್ರತಿದಿನ ರಾತ್ರಿ ವಿಡಿಯೋ ಕಾನ್ಫರೆನ್ಸ್ ನಲ್ಲಿ ದೈನಂದಿನ ಪ್ರಗತಿಯನ್ನು ಪರಿಶೀಲಿಸಿ ಸಲಹೆ ಸೂಚನೆಗಳನ್ನು ನೀಡುತ್ತಿದ್ದು, ಈ ಬಗ್ಗೆ ರಚಿತವಾದ ಪತ್ತೆ ತಂಡಗಳು ಕೊಡಗು, ಮಂಗಳೂರು, ಉಡುಪಿ, ಹಾಸನ,ಚಿಕ್ಕ ಮಗಳೂರು ಜಿಲ್ಲೆ ಸೇರಿದಂತೆ ಗೋವಾದವರೆಗೂ ಪತ್ತೆ ಕಾರ್ಯದಲ್ಲಿ ತೊಡಗಿಕೊಂಡಿದ್ದವು. ಈ ಎಲ್ಲಾ ಕೆಲಸ ಕಾರ್ಯಗಳಿಗೂ ಸಾಥ್ ನೀಡಿದ್ದು ಅಡಿಷನಲ್ ಎಸ್.ಪಿ. ಸಾಹೇಬರು. ಪೊಲೀಸರಿಗೆ ಸವಾಲಾಗಿದ್ದ ಪೊಲೀಸ್ ಕ್ವಾಟ್ರಸ್ ಕಳ್ಳತನ ಪ್ರಕರಣವು ಪೊಲೀಸರ ನೈತಿಕ ಸ್ಥೈರ್ಯದ ಪ್ರಶ್ನೆಯಾಗಿದ್ದು ಕಬ್ಬಿಣದ ಕಡಲೆಯಾಗಿದ್ದ ಪ್ರಕರಣದ ಪತ್ತೆಯ ಮೂಲ ಮಧ್ಯಪ್ರದೇಶಕ್ಕೆ ತಲುಪಿದ್ದು ರೋಚಕ. ಮಾನ್ಯ ಎಸ್.ಪಿ ಸಾಹೇಬರ ಕಾರ್ಯ ಕುಶಲತೆಯ ಮಾರ್ಗದರ್ಶನದಿಂದ ಪೊಲೀಸ್ ಕ್ವಾಟ್ರಸ್ ನಲ್ಲಿ ಕಳ್ಳತನ ಮಾಡಿದ್ದ ಕಳ್ಳರು ಮಧ್ಯಪ್ರದೇಶದ ಧಾರ್ ಜಿಲ್ಲೆಯ ನಟೋರಿಯಸ್ ಗ್ಯಾಂಗ್ ನವರು ಎಂದು ಪತ್ತೆ ಹಚ್ಚಿದ್ದು ಯಶಸ್ಸಿನ ಮೊದಲ ಹೆಜ್ಜೆ ಆಗಿದ್ದರೂ ಸಹ ದೂರದ ಮಧ್ಯಪ್ರದೇಶದ ಧಾರ್ ಜಿಲ್ಲೆಯ ಕಳ್ಳರನ್ನು ಅಲ್ಲಿಂದ ಪತ್ತೆ ಹಚ್ಚಿ ಕರೆ ತರುವುದು ಸವಾಲಿನ ಸಂಗತಿಯಾಗಿತ್ತು. ಈ ಸವಾಲನ್ನು ಎದುರಿಸಲು ಮಾನ್ಯ ಎಸ್.ಪಿ ಸಾಹೇಬರು ರಚಿಸಿದ ಪಿಎಸ್ಐ ಮಂಜುನಾಥ್ ಹಾಗೂ ಸಿಬ್ಬಂದಿಗಳಾದ ಯೋಗೇಶ್, ನಿರಂಜನ್, ಪ್ರಭಾಕರ್ ಮುನೀರ್ ರವರುಗಳ ತಂಡವು ಸರಿ ಸುಮಾರು 25 ದಿನಗಳ ಕಾಲ ಮಧ್ಯಪ್ರದೇಶದ ಧಾರ್, ಇಂದೋರ್, ರಾಜ್ ಘರ್,ತಾಂಡ ಪ್ರದೇಶಗಳಲ್ಲಿ ಸ್ಥಳೀಯರಂತೆ ಬೆರೆಯಲು ವೇಷ ಮರೆಸಿಕೊಂಡು ಕಾರ್ಯಾಚರಣೆ ಮಾಡಿದ್ದು, ನಿದ್ರೆ ಇಲ್ಲದ ರಾತ್ರಿಗಳನ್ನು ಕಳೆದು ತಿಂಡಿ-ಊಟ ಸರಿ ಹೊಂದದೆ ಎರಡು ಹೊತ್ತಿನ ಸರಳ ಊಟಕ್ಕೆ ತಮ್ಮನ್ನು ಒಗ್ಗಿಸಿಕೊಂಡು ಪ್ರಕರಣದ ಪ್ರಮುಖ ಆರೋಪಿಯಾದ ಆಂಧ್ರಪ್ರದೇಶ, ತೆಲಂಗಾಣ, ಗೋವಾ, ಕರ್ನಾಟಕ, ಗುಜರಾತ್ ,ತಮಿಳು ನಾಡು, ಮಧ್ಯ ಪ್ರದೇಶ ರಾಜ್ಯಗಳಲ್ಲಿ 2020 ನೇ ಇಸವಿಯಿಂದ ಈವರೆಗೆ ಸರಿ ಸುಮಾರು 20 ಕ್ಕೂ ಹೆಚ್ಚು ಕಳ್ಳತನಗಳನ್ನು ಮಾಡಿರುವ ಆರೋಪಿ ಸುರೇಶ್ ಸೇಂಗರ್ ಹಾಗೂ ಆತನಿಗೆ ಸಹಕರಿಸಿದ ಮನೀಶ್ ಎಂಬುವವರನ್ನು ಖಚಿತ ಮಾಹಿತಿಯೊಂದಿಗೆ ದಿನಾಂಕ 16.8.24 ರಂದು ಅಂತಿಮವಾಗಿ ಪಿರಿಯಾಪಟ್ಟಣದಲ್ಲಿ ದಸ್ತಗಿರಿ ಮಾಡುವ ಮೂಲಕ ಕೊಡಗು ಪೋಲಿಸರಿಗೆ ಸವಾಲಾಗಿ ಪರಿಣಮಿಸಿದ್ದ ಪೊಲೀಸ್ ಕ್ವಾಟ್ರರ್ಸ್ ಕಳ್ಳತನ ಪ್ರಕರಣವನ್ನು ಪತ್ತೆ ಹಚ್ಚಿರುತ್ತಾರೆ. ಈ ಪ್ರಕರಣಗಳನ್ನು ಪತ್ತೆಹಚ್ಚಲು ಪೊಲೀಸ್ ತಂಡಗಳಿಗೆ ಪ್ರೇರಣೆಯನ್ನು ನೀಡಿ ಸೂಕ್ತ ಸಲಹೆ -ಮಾರ್ಗದರ್ಶನ, ಅಗತ್ಯವಿರುವ ಅನುಕೂಲತೆಗಳನ್ನು ಕಲ್ಪಿಸಿಕೊಟ್ಟು ಪೊಲೀಸರ ನೈತಿಕ ಸ್ಥೈರ್ಯ ಹೆಚ್ಚಿಸಲು ಕಾರಣಿಕರ್ತರಾದ ಮಾನ್ಯ ಶ್ರೀ ಕೆ.ರಾಮರಾಜನ್, ಐ.ಪಿ.ಎಸ್, ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ ರವರಿಗೆ ಅನಂತ ನಮನಗಳು. ಈ ಕಾರ್ಯಕ್ಕೆ ಒತ್ತಾಸೆಯಾಗಿ ನಿಂತ ಶ್ರೀ ದಿನೇಶ್ ಕುಮಾರ್ ಕೆ.ಎಸ್.ಪಿ.ಎಸ್. ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆರವರಿಗೆ ಹಾಗೂ ಶ್ರೀ ಸೂರಜ್ ಕೆ.ಎಸ್.ಪಿ.ಎಸ್. ಡಿ,ವೈ,ಎಸ್,ಪಿ ಮಡಿಕೇರಿ ಉಪ ವಿಭಾಗ ರವರುಗಳಿಗೆ ಧನ್ಯವಾದಗಳು. ಪೊಲೀಸ್ ಕ್ವಾಟ್ರಸ್ ಕಳ್ಳತನ ಪ್ರಕರಣಗಳನ್ನು ಪತ್ತೆಹಚ್ಚಲು ಜಿಲ್ಲೆಯ ಹಲವಾರು ಪೊಲೀಸ್ ಅಧಿಕಾರಿ-ಸಿಬ್ಬಂದಿಗಳು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಆಹರ್ನಿಶಿ ದಕ್ಷತೆಯಿಂದ ಕರ್ತವ್ಯ ನಿರ್ವಹಿಸಿದ್ದು, ಎಲ್ಲರಿಗೂ ವಿಶೇಷ ಧನ್ಯವಾದಗಳು… ಕೊಡಗು ಪೊಲೀಸರ ದಕ್ಷತೆಗೆ ಸವಾಲು ಎಸೆದಿದ್ದ ಪ್ರಕರಣವನ್ನು ಪತ್ತೆ ಹಚ್ಚಿ ಕೊಡಗು ಪೊಲೀಸರ ಪ್ರತಿಷ್ಠೆಯನ್ನು ಹೆಚ್ಚಿಸಿದ ನಿಮ್ಮೆಲ್ಲರಿಗೂ ಅನಂತ ಆನಂತ ಪ್ರಣಾಮಗಳು – ಮನಪೂರ್ವಕ ನಮನಗಳು…. (ಇಂತಿ …… ಮಡಿಕೇರಿ ನಗರ ಪೊಲೀಸ್)










