
ವಿರಾಜಪೇಟೆ ಅ.8 NEWS DESK : ವಿರಾಜಪೇಟೆ ಕಾವೇರಿ ಪದವಿ ಪೂರ್ವ ಕಾಲೇಜು ವತಿಯಿಂದ ಎನ್ಎಸ್ಎಸ್ ವಿಶೇಷ ಶಿಬಿರ ಅಮ್ಮತ್ತಿಯಲ್ಲಿ ನಡೆಯಿತು. ನಶಾ ಮುಕ್ತ ಭಾರತ ಅಭಿಯಾನ ಭಾಗವಾಗಿ ನಡೆದ ವಿಶೇಷ ಶಿಬಿರದಲ್ಲಿ ಕಾಲೇಜಿನ ಎನ್ಎಸ್ಎಸ್ ಘಟಕದ ವಿದ್ಯಾರ್ಥಿಗಳು ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರು. ಶಿಬಿರದ ಸಮಾರೋಪ ಸಮಾರಂಭ ಅಮ್ಮತ್ತಿ ಪ್ರೌಢಶಾಲೆ ಮುಖ್ಯಶಿಕ್ಷಕಿ ಎ.ಡಿ.ಅಕ್ಕಮ್ಮ ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡಿದ್ದ ಕಾವೇರಿ ಎಜುಕೇಷನ್ ಸೊಸೈಟಿ ಅಧ್ಯಕ್ಷ ಮಂಡೇಪಂಡ ಸುಗುಣ ಮುತ್ತಣ್ಣ ಮಾತನಾಡಿ, ವಿದ್ಯಾರ್ಥಿಗಳು ಭವಿಷ್ಯದಲ್ಲಿ ಶಿಸ್ತು, ಸಮಯ ಪಾಲನೆ, ಸಂಯಮ, ಎಲ್ಲರೊಡನೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು. ಅಮ್ಮತ್ತಿ ಪ್ರೌಢಶಾಲೆ ಅಧ್ಯಕ್ಷ ಕಾವಾಡಿಚಂಡ ಗಣಪತಿ ಮಾತನಾಡಿ, ದಸರ ರಜೆಯಲ್ಲಿ ವಿದ್ಯಾರ್ಥಿಗಳು ಶಿಬಿರದಲ್ಲಿ ಪಾಲ್ಗೊಂಡು ಸಮಾಜಮುಖಿ ಕಾರ್ಯದಲ್ಲಿ ಭಾಗಿಯಾಗಿರುವುದು ಉತ್ತಮ ಬೆಳವಣಿಗೆ. ಸಮಾಜ ಸೇವೆ ಮಾಡಲು ಸಿಗುವ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದರು. ಅಮ್ಮತ್ತಿ ಪ್ರೌಢಶಾಲೆ ನಿರ್ದೇಶಕ ಕೇಚಂಡ ಎಂ.ಕುಶಾಲಪ್ಪ, ಸದಸ್ಯೆ ಬಿ.ನಳಿನಿ, ಕಾವೇರಿ ಪಿಯು ಕಾಲೇಜಿನ ಪ್ರಾಂಶುಪಾಲ ನುಚ್ಚುಮಣಿಯಂಡ ನಾಣಯ್ಯ ಮುಂತಾವದರು ಪಾಲ್ಗೊಂಡಿದ್ದರು. ಶಿಬಿರದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು ಅನಿಸಿಕೆ ಹಂಚಿಕೊಂಡರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ನೀಲಿಮ ಮತ್ತು ತಂಡದವರು ಪ್ರಾರ್ಥಿಸಿದರು. ಶಿಬಿರದ ವರದಿಯನ್ನು ಅಮ್ಮಂಡ ಅನುಪಮ ತಿಮ್ಮಯ್ಯ ವಾಚಿಸಿದರು. ಭೂಮಿಕ ಮತ್ತು ತಂಡದವರು ಎನ್ಎಸ್ಎಸ್ ಗೀತೆ ಹಾಡಿದರು. ಆಲೆಮಾಡ ಗಾಯತ್ರಿ, ಡೋನಾ, ವೀಣಾ ಮುಂತಾದವರು ಇದ್ದರು.









