
ವಿರಾಜಪೇಟೆ ಅ.9 NEWS DESK : ವಿರಾಜಪೇಟೆಯ ಕೊಡಗು ಮಹಿಳಾ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಮಹಿಳಾ ಸಮಾಜದ ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಹಿಳಾ ಸಮಾಜದ ಅಧ್ಯಕ್ಷೆ ಪಟ್ರಪಂಡ ಗೀತಾ ಬೆಳ್ಯಪ್ಪ, ಸಮಾಜದ ಏಳಿಗೆಗೆ ಮಹಿಳಾ ಸಹಕಾರ ಸಂಘದ ಎಲ್ಲ ಸದಸ್ಯರ ಸಹಕಾರ ಮುಖ್ಯ. ಮುಂದಿನ ದಿನಗಳಲ್ಲಿ ಸಮಾಜದ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಹಾಕಿಕೊಂಡಿರುವುದಾಗಿ ತಿಳಿಸಿದರು. ಮಹಿಳಾ ಸಮಾಜಕ್ಕೆ ಸುಸಜ್ಜಿತ ಶೌಚಾಲಯದ ಅವಶ್ಯಕತೆ ಇದ್ದು, ಅದನ್ನು ನಿರ್ಮಾಣ ಮಾಡುವ ಯೋಜನೆಯ ರೂಪುರೇಷೆ ಸಿದ್ದಪಡಿಸಲಾಗುತ್ತಿದೆ. ಇದಕ್ಕೆ ದಾನಿಗಳ ಸಹಕಾರವೂ ಅಗತ್ಯವಿದೆ. ಎಲ್ಲರೂ ಸಹಕಾರ ನೀಡಿದ್ದಲ್ಲಿ ಉತ್ತಮ ಸುಸಜ್ಜಿತ ಶೌಚಾಲಯ ನಿರ್ಮಾಣವಾಗುತ್ತದೆ. ಹಂತ ಹಂತವಾಗಿ ಸಮಾಜದ ಅಭಿವೃದ್ಧಿ ಕಾರ್ಯ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು. ಸಭೆಯಲ್ಲಿ ಸದಸ್ಯತ್ವ ನೋಂದಣಿ ಹಣ ಹೆಚ್ಚಿಸುವಂತೆ ಹಾಗೂ ಇತರ ವಿಚಾರಗಳನ್ನು ಚರ್ಚಿಸಲಾಯಿತು. ಸಭೆಯಲ್ಲಿ ವಾರ್ಷಿಕ ವರದಿ ಹಾಗೂ ಲೆಕ್ಕಪತ್ರ ಮಂಡನೆ ಮಾಡಿ ಅನುಮೋದಿಸಲಾಯಿತು. ಸಭೆ ಪ್ರಾರಂಭದ ಮೊದಲು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಲಾಯಿತು. ಈ ಸಂದರ್ಭ ಸಭೆಯಲ್ಲಿ ಉಪಾಧ್ಯಕ್ಷೆ ಬಿ.ಆರ್. ಸಬಿತ, ನಿರ್ದೆಶಕರಾದ ಆಶಾ ಚಿಣ್ಣಪ್ಪ, ಯು.ಕೆ. ಪೊನ್ನಮ್ಮ, ಕುಸುಮ ಸೋಮಣ್ಣ, ಜಯಲೀಲಾ ಸತೀಶ್, ಪಿ.ಕೆ. ನೀಲಮ್ಮ, ಪ್ರೇಮ ಮಂಜುನಾಥ್, ಬಿ.ಎನ್. ಭಾರತಿ, ಬಿ.ಯಶೋಧ, ಮೆಟಿಲ್ಡಾ ಲೋಬೋ, ಹೆಚ್.ಆರ್. ಪುಷ್ಪವಾಸು, ಪುಷ್ಪ ಐತಪ್ಪ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಜಿ. ಪುಷ್ಪಲತಾ ಇದ್ದರು.









