
ವಿರಾಜಪೇಟೆ ಅ.10 NEWS DESK : ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಕೀರ್ತಿಯು ದಿ. ಎಸ್.ಎಲ್. ಭೈರಪ್ಪ ಅವರಿಗೆ ಸಲ್ಲುತ್ತದೆ ಎಂದು ಪತ್ರಕರ್ತರು ಹಾಗೂ ಬರಹಗಾರರಾದ ಉಷಾ ಪ್ರೀತಂ ಅಭಿಪ್ರಾಯಪಟ್ಟರು. ವಿರಾಜಪೇಟೆಯ ಪುರಭವನದ ಸಭಾಂಗಣದಲ್ಲಿ ವಿರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಪತ್ರಕರ್ತರ ವೇದಿಕೆ ವಿರಾಜಪೇಟೆಯ ಸಹಯೋಗದಲ್ಲಿ ಆಯೋಜಿಸಲಾಗಿದ್ದ ದಿ. ಎಸ್.ಎಲ್. ಭೈರಪ್ಪ ಅವರಿಗೆ ಶ್ರದ್ಧಾಂಜಲಿ ಸಭೆಯನ್ನು ಉದ್ದೇಶಿಸಿ ಮಾತನಾಡುತಿದ್ದರು. ಕನ್ನಡ ಭಾಷೆ ನಾಡು ನುಡಿಗೆ ಸಂಬಂಧಿಸಿದಂತೆ ಕೊಡುಗೆಯನ್ನು ನೀಡಿದವರಲ್ಲಿ ದಿ. ಎಸ್. ಎಲ್. ಭೈರಪ್ಪ ರವರು ಅಗ್ರಗಣ್ಯರು. ಸಾಹಿತ್ಯ ಲೋಕದಲ್ಲಿ ಸದಾ ಅವಿಸ್ಮರಣಿಯವಾಗಿ ಉಳಿದಿದ್ದಾರೆ. ಮಾತ್ರವಲ್ಲದೆ ತಮ್ಮದೇ ಆದ ಶೈಲಿಯಲ್ಲಿ ಕೃತಿಯ ರಚನೆಯನ್ನು ಮಾಡಿರುತ್ತಾರೆ. ಕವಿಗಳು ಹಾಗೂ ಸಾಹಿತಿಗಳನ್ನು ಇಂದಿನ ದಿವಸಗಳಲ್ಲಿ ಜಾತಿಯ ಲೆಕ್ಕಾಚಾರದಲ್ಲಿ ನೋಡುತ್ತಿರುವುದು ವಿಷಾದನೀಯ. ಸಾಹಿತಿಗಳು ಒಂದು ನಿರ್ದಿಷ್ಟ ಜಾತಿಗೆ ಸಂಬಂಧಿಸಿದವರಾಗಿರದೆ ಒಂದು ನಾಡಿಗೆ ಸಂಬಂಧಿಸಿದವರಾಗಿರುತ್ತಾರೆ ಎಂದರು. ಎಸ್. ಎಲ್. ಭೈರಪ್ಪ ಅವರ ಪ್ರಮುಖ ಕೃತಿಗಳನ್ನು ಹಾಗೂ ಅದರಲ್ಲಿ ಅಡಗಿರುವ ಅಂಶಗಳನ್ನುಉದಾಹರಣೆ ಸಮೇತ ವಿವರಿಸಿದರು. ಗೋಣಿಕೊಪ್ಪಲು ಕಾವೇರಿ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಪಟ್ಟಡ ಪೂವಣ್ಣ ರವರು ಮಾತನಾಡುತ್ತಾ ಕನ್ನಡ ಸಾರ ಸ್ವತ ಲೋಕಕ್ಕೆ ಎಸ್. ಎಲ್. ಭೈರಪ್ಪ ಅವರ ಅಗಲಿಕೆಯು ತುಂಬಲಾರದ ನಷ್ಟವಾಗಿದೆ. ಅವರ ಕೃತಿಗಳನ್ನು ಸಂಪೂರ್ಣವಾಗಿ ಓದಿದಾಗ ಮಾತ್ರ ಅದರಲ್ಲಿರುವ ಪ್ರೌಢಿಮೆ ಕಾಣಸಿಗುತ್ತದೆ. ಇಂದಿನ ವಿದ್ಯಾರ್ಥಿಗಳು ಸಾಹಿತ್ಯದ ಪುಸ್ತಕಗಳನ್ನು ಓದಲು ಹಿಂದೇಟು ಹಾಕುತ್ತಿರುವುದು ವಿಷಾದನೀಯ ಎಂದರು. ಎಸ್. ಎಲ್. ಭೈರಪ್ಪ ಅವರ ಕೃತಿಗಳಲ್ಲಿ ರಚಿತವಾಗಿರುವ ಪ್ರಮುಖ ಅಂಶವನ್ನು ವಿವರಿಸಿದರು. ವಿರಾಜಪೇಟೆಯ ಸೆಂಟ್ ಆನ್ಸ್ ಪದವಿ ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕರಾದ ಅರ್ಜುನ್ ಮಾತನಾಡಿ ಎಸ್. ಎಲ್. ಭೈರಪ್ಪ ಅವರ ಕೃತಿಗಳು ವಿಮರ್ಶೆ ಗೆ ಒಳಪಡುವ ವಿಚಾರವನ್ನು ಒಳಗೊಂಡಿದೆ. ಅತ್ಯಂತ ಹೆಚ್ಚು ವಿಮರ್ಶೆಗೆ ಒಳಗಾದ ಕೃತಿಗಳು ಭೈರಪ್ಪರದ್ದಾಗಿವೆ ಎಂದರು.ಸಭೆಯ ಅಧ್ಯಕ್ಷತೆ ವಹಿಸಿದ್ದ ವಿರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷರು ಹಾಗೂ ಪುರಸಭಾ ಸದಸ್ಯರಾದ ರಾಜೇಶ್ ಪದ್ಮನಾಭ್ ಮಾತನಾಡಿ ಎಸ್. ಎಲ್. ಭೈರಪ್ಪ ಅವರು ಕನ್ನಡ ಸಾಹಿತ್ಯ ಲೋಕಕ್ಕೆ ತನ್ನದೇ ಆದಂತಹ ಮೇರು ವ್ಯಕ್ತಿತ್ವದಿಂದ ಗುರುತಿಸಲ್ಪಟ್ಟವರು. ಕನ್ನಡ ಸಾಹಿತ್ಯ ಪ್ರಪಂಚಕ್ಕೆ ಸಾಹಿತ್ಯ ಕೃಷಿಯನ್ನು ಕೊಡುಗೆಯಾಗಿ ನೀಡಿದ್ದಾರೆ. ಕನ್ನಡ ಭಾಷೆ, ಸಾಹಿತ್ಯ ಪರಂಪರೆಗೆ ತಮ್ಮ ಸೇವೆಯನ್ನು ಸಲ್ಲಿಸಿರುವ ಜೊತೆಗೆ ಜನಮಾನಸದಲ್ಲಿ ಹಚ್ಚ ಹಸಿರಾಗಿ ಉಳಿದಿದ್ದಾರೆ ಎಂದರು. ಈ ಸಭೆಯಲ್ಲಿ ನಿವೃತ್ತ ಪ್ರಾಂಶುಪಾಲರಾದ ಪಟ್ಟಡ ಪೂವಣ್ಣ ರವರು ಎಸ್ ಎಲ್ ಭೈರಪ್ಪ ಅವರ ಜ್ಞಾಪಕಾರ್ಥ ಶಾಲೆ ಕಾಲೇಜುಗಳಲ್ಲಿ ಉಪನ್ಯಾಸವನ್ನು ನಡೆಸಲು ಹತ್ತು ಸಾವಿರ ರೂಗಳ ದತ್ತಿನಿದಿಯನ್ನು ನೀಡುವುದಾಗಿ ಘೋಷಿಸಿದರು. ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಾದ ಮಂಜುನಾಥ್, ಸಾವಿತ್ರಿ ಹೆಚ್. ಜಿ., ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ಪತ್ರಕರ್ತರ ವೇದಿಕೆಯ ಸದಸ್ಯರುಗಳು, ಉಪನ್ಯಾಸಕರು ಉಪಸ್ಥಿತರಿದ್ದರು.








