
ಗೋಣಿಕೊಪ್ಪ ಅ.20 NEWS DESK : ಸಮೀಕ್ಷೆ ವಿಸ್ತರಣೆಯ ನೆಪದಲ್ಲಿ ಅಂಗನವಾಡಿ ಕಾರ್ಯಕರ್ತರಿಗೆ ಸಲ್ಲದ ಒತ್ತಡ ಹೇರುತ್ತಿರುವುದನ್ನು ಜಿಲ್ಲಾ ಅಂಗನವಾಡಿ ಕಾರ್ಯಕರ್ತರ ಸಂಘಟನೆ ಖಂಡಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಅಂಗನವಾಡಿ ಕಾರ್ಯಕರ್ತರ ಅಧ್ಯಕ್ಷೆ ಸುಮಿತ್ರ ಸಮೀಕ್ಷೆಯಿಂದ ಕಾರ್ಯಕರ್ತರಿಗೆ ಆಗುತ್ತಿರುವ ಮಾನಸಿಕ ಒತ್ತಡದ ಬಗ್ಗೆ ಅಳಲು ತೋಡಿಕೊಂಡರು. ಪ್ರತಿ ಬಾರಿಯೂ ಅಂಗನವಾಡಿ ಕಾರ್ಯಕರ್ತರು ಸರ್ಕಾರದ ಒಂದಲ್ಲ ಒಂದು ಯೋಜನೆಗಳ ಬಗ್ಗೆ ಜನರಿಗೆ ತಲುಪಿಸುವ ಮತ್ತು ಸರ್ವೆ ಕಾರ್ಯ ಮಾಡುವ ವ್ಯವಸ್ಥೆಯನ್ನು ಪೂರಕವಾಗಿ ನಡೆಸುತ್ತಿದ್ದಾರೆ. ತಮ್ಮ ಹಲವಾರು ಜವಾಬ್ದಾರಿಯುತ ಕರ್ತವ್ಯಗಳ ನಡುವೆ ಇತರ ವ್ಯವಸ್ಥೆಗಳ ಬಗ್ಗೆಯು ಗಮನಹರಿಸಲಾಗುತ್ತಿದೆ ಆದರೂ, ಕಾರ್ಯಕರ್ತರ ಸಂಕಷ್ಟಗಳಿಗೆ ಪರಿಹಾರ ಸಿಗುತ್ತಿಲ್ಲ ಎಂದು ಆರೋಪಿಸಿದರು. ತೀವ್ರ ನಿಧಾನ ಗತಿ ಸಮೀಕ್ಷೆಯಿಂದ ಪ್ರಮಾಣವನ್ನು ಗುರಿಯತ್ತ ಸಾಗಿಸುವ ನಿಟ್ಟಿನಲ್ಲಿ ವಿಸ್ತರಣೆಗೊಂಡ ಸಮೀಕ್ಷೆಗೆ ಸರ್ಕಾರದ ಆದೇಶವಿಲ್ಲದಿದ್ದರೂ, ಅಂಗನವಾಡಿ ಕಾರ್ಯಕರ್ತರನ್ನ ಒತ್ತಾಯ ಪೂರಕವಾಗಿ ಸಮೀಕ್ಷೆ ನಡೆಸಲು ಹೇಳುತ್ತಿರುವುದು ಖಂಡನೀಯ ಎಂದರು. ಮೇಲಾಧಿಕಾರಿಗಳ ಸೂಚನೆಯನ್ನು ಉಲ್ಲೇಖಿಸಿ ಪೊನ್ನಂಪೇಟೆ ತಾಲ್ಲೂಕು ಮಹಿಳಾ ಮತ್ತು ಮಕ್ಕಳ ಇಲಾಖಾಧಿಕಾರಿ ಕಾರ್ಯಕರ್ತರ ಮೇಲೆ ಒತ್ತಡ ಹೇರುತ್ತಿದ್ದಾರೆ. ಕಳೆದ ಒಂದು ತಿಂಗಳನಿಂದ ಸಮೀಕ್ಷೆ ನಡೆಯುತ್ತಿದ್ದು 19 ರಂದು ಶಿಕ್ಷಕರನ್ನು ಸಮೀಕ್ಷೆ ಕಾರ್ಯದಿಂದ ಬಿಡುಗಡೆಗೊಳಿಸಿ ಇತರ ಸಿಬ್ಬಂದಿಗಳಿಂದ ಸಮೀಕ್ಷೆ ಪೂರ್ಣಗೊಳಿಸುವ ಆದೇಶವನ್ನು ಮುಖ್ಯಮಂತ್ರಿಗಳು ಜಿಲ್ಲಾಧಿಕಾರಿಗಳಿಗೆ ನೀಡಿದ್ದಾರೆ. ಆದರೆ ಎಲ್ಲಿಯೂ ಮುಖ್ಯಮಂತ್ರಿಗಳು ಅಂಗನವಾಡಿ ಕಾರ್ಯಕರ್ತರನ್ನ ಬಳಸಿಕೊಳ್ಳುವಂತೆ ಆದೇಶ ನೀಡಿರುವುದಿಲ್ಲ. ಆದರೂ, ಮೇಲಾಧಿಕಾರಿಗಳು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗೆ ಕಾರ್ಯಕರ್ತರನ್ನು ಸಮೀಕ್ಷೆಗೆ ಬಳಸಿಕೊಳ್ಳುವಂತೆ ಒತ್ತಡ ಹೇರುತ್ತಿದ್ದಾರೆ. ಈ ನಡೆಯಿಂದ ಮಾನಸಿಕವಾಗಿ ಕಾರ್ಯಕರ್ತರು ಕುಗ್ಗಿ ಹೋಗುತ್ತಿದ್ದಾರೆ ಎಂದು ತಮ್ಮ ಅಳಲನ್ನು ತೋಡಿಕೊಂಡರು. ನಮ್ಮದಲ್ಲದ ತಪ್ಪಿಗೆ ಯಾಕೆ ಶಿಕ್ಷೆ, ಹಿಂದುಳಿದ ವರ್ಗಗಳ ಶೈಕ್ಷಣಿಕ ಮತ್ತು ಸಾಮಾಜಿಕ ಸಮೀಕ್ಷೆ ಶುರುವಾಗಿ ಸರಿ ಸುಮಾರು ತಿಂಗಳಾಯಿತು. ಕೊನೆ ಎರಡು ದಿನಗಳಲ್ಲಿ ಅಂಗನವಾಡಿ ಮಕ್ಕಳನ್ನು ಸೇರ್ಪಡೆ ಮಾಡಬೇಕು ಅನ್ನೋ ಉದ್ದೇಶದಿಂದ ಅಂಗನವಾಡಿ ಶಿಕ್ಷಕರಿಗೆ ತೊಂದರೆ ನೀಡುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಯಾವುದೇ ಗೌರವ ಸಂಭಾವನೆ ಇಲ್ಲದೆ ರಜಾ ದಿನಗಳಲ್ಲಿಯೂ ಕೆಲಸ ಮಾಡಿ ಎಂದರೆ ಅದನ್ನು ಹೇಗೆ ಒಪ್ಪಿಕೊಳ್ಳಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಈ ಮೊದಲೇ ಅಂಗನವಾಡಿ ಶಿಕ್ಷಕರಿಗೆ ಸಮೀಕ್ಷೆ ಜವಾಬ್ದಾರಿ ನೀಡಿದ್ದರೆ ಎಲ್ಲ ಕಾರ್ಯವನ್ನು ಮುಗಿಸುತ್ತಿದ್ದವು. ಕೊನೆಗಳಿಗೆಯ ದಿನಗಳಲ್ಲಿ ಅಂಗನವಾಡಿ ಕಾರ್ಯಕರ್ತರು ಸಮೀಕ್ಷೆಯಲ್ಲಿ ಭಾಗವಹಿಸುವಂತೆ ಮೌಖಿಕವಾಗಿ ಹೇಳುತ್ತಿರುವುದು ಎಷ್ಟರಮಟ್ಟಿಗೆ ನ್ಯಾಯ ಪರವಾಗಿದೆ. ಈ ವ್ಯವಸ್ಥೆಯ ಬಗ್ಗೆ ತೀವ್ರ ಆಕ್ಷೇಪವಿದೆ ಎಂದು ಹೇಳಿದರು. ದೊಡ್ಡ ಮೊತ್ತದ ವೇತನ ಪಡೆದುಕೊಳ್ಳುವ ಶಿಕ್ಷಕರು ಸಮೀಕ್ಷೆಗೆ ಒಂದು ಮನೆಗೆ ನೂರು ರೂಪಾಯಿಯಂತೆ ಮತ್ತು ಗೌರವಧನವಾಗಿ ಐದು ಸಾವಿರ ರೂಪಾಯಿ ಪಡೆದುಕೊಂಡಿದ್ದಾರೆ. ಆದರೆ, ಅಂಗಾರವಾಡಿ ಶಿಕ್ಷಕರಿಗೆ ಗೌರವಧನವನ್ನು ನೀಡದೆ ಉಚಿತವಾಗಿ ದುಡಿಸಿಕೊಳ್ಳುವ ಅಧಿಕಾರಿಗಳ ಚಿಂತನೆ ಪಡುತ್ತಿರುವುದು ಶೋಷಣೆಯಾಗಿದೆ ಎಂದು ಆರೋಪಿಸಿದರು. ಆರು ವರ್ಷದ ಒಳಗಿನ ಮಕ್ಕಳ ಮಾಹಿತಿ ನೀಡಬೇಕೆಂದು ತಿಳಿಸಲಾಗಿದೆ. ಅವುಗಳ ಮಾಹಿತಿಯನ್ನು ಪೂರ್ಣ ಪ್ರಮಾಣದಲ್ಲಿ ಒದಗಿಸಿಕೊಡುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸುತ್ತೇವೆ. ಆದರೆ ಶಿಕ್ಷಕರು ಉಳಿಸಿದ ಸಮೀಕ್ಷೆಯನ್ನು ಪೂರ್ಣಗೊಳಿಸಲು ಕಷ್ಟವಾಗಲಿದೆ ಎಂದು ಹೇಳಿದರು. ಈ ವಿಚಾರವಾಗಿ ಅಧಿಕಾರಿಗಳು ವಿನಾಕಾರಣವಿಲ್ಲದೆ ನಮಗೆ ತೊಂದರೆ ನೀಡುತ್ತಿದ್ದಾರೆ. ಹೀಗೆ ಮುಂದುವರೆದರೆ ನಾವು ಪ್ರತಿಭಟನೆಯ ಹಾದಿ ತುಳಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಒಂದು ಪಕ್ಷ ಸಮೀಕ್ಷೆ ನಡೆಸಲು ಸರ್ಕಾರ ನಮಗೆ ಗೌರವ ಸಂಭಾವನೆ ಮತ್ತು ಮನೆಗೆ ಇಂತಿಷ್ಟು ಎಂದು ಹಣ ನಿಗದಿಪಡಿಸಿದರೆ ಸಮೀಕ್ಷೆಗೆ ಸಹಕಾರ ನೀಡುವ ಆಲೋಚನೆ ಮಾಡುತ್ತೇವೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ, ಕಾರ್ಯದರ್ಶಿ ನಳಿನಾಕ್ಷಿ, ಕೋಶಾಧಿಕಾರಿ ರಾಜೇಶ್ವರಿ ಉಪಸ್ಥಿತರಿದ್ದರು.









