
ಮಡಿಕೇರಿ NEWS DESK ಅ.20 : ರಾಷ್ಟ್ರೀಯ ಸ್ವಯಂ ಸೇವಕ ಸಂಘ ವಿಶಾಲವಾಗಿ ಬೆಳೆದಿದ್ದು, ಇದರ ಪ್ರಗತಿಯನ್ನು ಸಹಿಸಲಾಗದ ರಾಜ್ಯ ಕಾಂಗ್ರೆಸ್ ಸರ್ಕಾರ ಸಂಘಟನೆಯ ಮೇಲೆ ನಿರ್ಬಂಧ ಹೇರಲು ಮುಂದಾಗಿದೆ ಎಂದು ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್ ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್ಎಸ್ಎಸ್ ಎನ್ನುವುದು ಯಾವುದೇ ಒಂದು ವರ್ಗಕ್ಕೆ ಸೀಮಿತವಾದ ಸಂಘಟನೆಯಲ್ಲ. ಇದರಲ್ಲಿ ರಾಷ್ಟ್ರಭಕ್ತರು ಯಾರು ಬೇಕಾದರು ಪಾಲ್ಗೊಳ್ಳ್ಳಬಹುದಾಗಿದೆ. ಆರ್ಎಸ್ಎಸ್ ನಲ್ಲಿ ಮುಸ್ಲಿಂ ರಾಷ್ಟ್ರೀಯ ಮಂಚ್ ಎನ್ನುವ ಶಾಖೆಯೂ ಇದೆಯೆಂದು ತಿಳಿಸಿದರು. ಸಂಘದ ಬೆಳವಣಿಗೆಯನ್ನು ಸಹಿಸಲಾಗದೆ ಸಚಿವ ಪ್ರಿಯಾಂಕ ಖರ್ಗೆಯವರ ಪತ್ರದ ಆಧಾರದಲ್ಲಿ ಆರ್ಎಸ್ಎಸ್ ಮೇಲೆ ನಿರ್ಬಂಧ ಹೇರಲು ಮುಂದಾಗಿರುವ ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ‘ಧಮ್’ ಇದ್ದಲ್ಲಿ ಸಂಘವನ್ನು ಬ್ಯಾನ್ ಮಾಡಲಿ ಎಂದು ಸವಾಲು ಹಾಕಿದರು. ಆರ್ಎಸ್ಎಸ್ ಸಂಘಟನೆಯನ್ನು 1979 ಮತ್ತು 1992 ರಲ್ಲಿ ಬ್ಯಾನ್ ಮಾಡಲಾಗಿತ್ತು, ಆದರೆ ನಂತರದ ದಿನಗಳಲ್ಲಿ ದೇಶಭಕ್ತ ಸಂಘಟನೆಗೆ ಮತ್ತೆ ಅವಕಾಶವನ್ನು ಮಾಡಿಕೊಡಲಾಗಿತ್ತು ಎಂದರು. ಖರ್ಗೆಯವರ ಸ್ವ ಕ್ಷೇತ್ರವೆ ಆಗಿರುವ ಗುಲ್ಬರ್ಗ ಜಿಲ್ಲೆಯಲ್ಲಿ ಕನಿಷ್ಟ ನೂರು ಕಿ.ಮೀ. ರಸ್ತೆಸಮರ್ಪಕವಾಗಿಲ್ಲ. ಶಿಕ್ಷಣ ವ್ಯವಸ್ಥೆ ಎನ್ನುವುದು ಅಲ್ಲಿ ಸಂಪೂರ್ಣ ಹದತಪ್ಪ್ಪಿದ್ದು, ಯಾವುದೇ ಪರೀಕ್ಷೆಗಳಲ್ಲಿ ಗುಲ್ಬರ್ಗ ಎನ್ನುವುದು ಕೊನೆಯ ಸ್ಥಾನದಲ್ಲಿರುತ್ತದೆ. ಜನರಿಗೆ ಯೋಗ್ಯ ಶಿಕ್ಷಣವನ್ನು ನೀಡಿದಲ್ಲಿ ತಮಗೇ ಕುತ್ತು ಎನ್ನುವುದು ಖರ್ಗೆಯವರಿಗೆ ತಿಳಿದಿದೆಯೆಂದು ಟೀಕಿಸಿದರು. ಕೊಡಗು ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಅವರು ಮಾತನಾಡಿ, ಆರ್ಎಸ್ಎಸ್ ನಿರ್ಬಂಧಕ್ಕೆ ಮುಖ್ಯಮಂತ್ರಿಗಳು, ರಾಜ್ಯ ಸರ್ಕಾರಕ್ಕೆ ಕುಮ್ಮಕ್ಕು ನೀಡುತ್ತಿರುವವರಿಗೆ, ನಿರ್ಬಂಧದ ಬಗ್ಗೆ ಯಾವುದೇ ಸ್ಪಷ್ಟ ಕಾರಣಗಳಿಲ್ಲ. ವೈಯಕ್ತಿಕ ದ್ವೇಷದಿಂದಷ್ಟೆ ಪ್ರಿಯಾಂಕ ಖರ್ಗೆ ಅವರು ಆರ್ಎಸ್ಎಸ್ ಮೇಲೆ ನಿರ್ಬಂಧ ಹೇರುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ ಎಂದು ಆರೋಪಿಸಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ವಯಂ ಸೇವಕರು ದೇಶಕ್ಕೆ ಗಂಡಾಂತರಗಳು ಎದುರಾದ ಯಾವುದೇ ಹಂತಗಳಲ್ಲಿರಬಹುದು, ಪ್ರಾಕೃತಿಕ ವಿಕೋಪಗಳ ಸಂದರ್ಭವಿರಬಹುದು ತಮ್ಮ ಜೀವವನ್ನು ಲೆಕ್ಕಿಸದೆ ನೆರವಿಗೆ ಧಾವಿಸಿದ ಹಲವಾರು ಸಂದರ್ಭಗಳಿವೆ. ಇಂತಹ ದೇಶಭಕ್ತ ಆರ್ಎಸ್ಎಸ್ಗೆ ನಿರ್ಬಂಧ ಹೇರುವಂತೆ ಒತ್ತಡ ಹೇರುತ್ತಿರುವುದು ಖಂಡನೀಯವೆಂದರು. *ಗೋಸಾಗಾಟ-ಗೋಹತ್ಯೆ* ಕೊಡಗಿನಲ್ಲಿ ಗೋಹತ್ಯೆ ಸಾಗಾಟ ನಿರಂತರವಾಗಿ ನಡೆಯುತ್ತಿದ್ದು, ಇದನ್ನು ನಿಯಂತ್ರಿಸುವಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಜುಇಲ್ಲಾ ಬಿಜೆಪಿ ವಕ್ತಾರ ತಳೂರು ಕಿಶೋರ್ ಕುಮಾರ್, ಪ್ರಧಾನ ಕಾರ್ಯದರ್ಶಿಗಳಾದ ಮಹೇಶ್ ಜೈನಿ, ವಿ.ಕೆ.ಲೋಕೇಶ್ ಹಾಗೂ ನೆಲ್ಲೀರ ಚಲನ್ ಉಪಸ್ಥಿತರಿದ್ದರು.








