
ನಾಪೋಕ್ಲು ಡಿ.24 NEWS DESK : ಗ್ರಾಮಗಳು ಅಭಿವೃದ್ಧಿ ಹೊಂದಿದರೆ ದೇಶ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಮಾಜಿ ಶಾಸಕ ಕೊಂಬಾರನ ಜಿ.ಬೋಪಯ್ಯ ಹೇಳಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೆಟ್ಟಗೇರಿ ವಲಯದ ವತಿಯಿಂದ ಮೇಕೇರಿ ಗೌರಿ ಶಂಕರ ದೇವಾಲಯದಲ್ಲಿ ಆಯೋಜಿಸಿದ ಸಾಮೂಹಿಕ ಶ್ರೀ ಸತ್ಯ ನಾರಾಯಣ ಪೂಜೆ ಮತ್ತು 1500 ಹೊಸ ಸದಸ್ಯರ ಸೇರ್ಪಡೆ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಫಲಾನುಭವಿಗಳಿಗೆ ಮಂಜೂರಾತಿ ಪತ್ರ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸದೃಢ ಸಮಾಜ ನಿರ್ಮಾಣವಾಗಬೇಕಾದರೆ ಎಲ್ಲರ ಸಹಕಾರ ಅವಶ್ಯಕ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಆಯೋಜಿಸಲಾಗುತ್ತಿರುವ ಜನಪರ ಕಾರ್ಯಕ್ರಮಗಳಿಂದಾಗಿ ಗ್ರಾಮೀಣ ಜನರು ಸದೃಢರಾಗಲು ಸಹಕಾರಿಯಾಗಿದೆ. ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳುವಂತಾಗಬೇಕೆಂದು ಯೋಜನೆಯ ಬಗ್ಗೆ ಬೆಳಕು ಚೆಲ್ಲಿ ಶುಭ ಹಾರೈಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉಡುಪಿ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಆನಂದ ಸುವರ್ಣ ಅವರು ಮಾತನಾಡಿ, ನಮ್ಮ ಕೊಡಗು ಬಹಳ ಪ್ರಸಿದ್ಧವಾದದ್ದು, ಇಲ್ಲಿಯ ಸಂಸ್ಕೃತಿ ವಿಶೇಷ, ಇಲ್ಲಿಯ ಪ್ರಕೃತಿ ವಿಶೇಷ ಬಹಳ ದೊಡ್ಡ ಮಟ್ಟದಲ್ಲಿ ಸೈನಿಕರನ್ನು ಕೊಟ್ಟ ಪ್ರದೇಶ ಕೊಡಗು ಎಂಬುವುದು ಒಂದು ಹೆಮ್ಮೆ. ಅಂತಹ ಒಂದು ನಾಡಿನಲ್ಲಿ ನಾವಿದ್ದೇವೆ ನಮ್ಮ ಬದುಕಿನ ಜೊತೆಗೆ ನಮ್ಮ ಊರಿನ ಸಂಸ್ಕೃತಿಯನ್ನು ನಮ್ಮ ಮಕ್ಕಳಿಗೆ ತಿಳಿಸಿ ಹೇಳುವ ಅಗತ್ಯವಿದೆ. ಧರ್ಮದಿಂದ ಕೊಡಿದ ಪ್ರಗತಿ ಮಾತ್ರ ಶಾಶ್ವತ ವಾಗಿರುತ್ತದೆ. ಸ್ವಾಭಿಮಾನದ ಬದುಕನ್ನು ನಡೆಸಲು ನಾವು ಹೇಗೆ ಇರಬೇಕು ನಮ್ಮ ಸಂಸ್ಕಾರವನ್ನು ಹೆಚ್ಚಿಸಿಕೊಳ್ಳಲು ಇಂತಹ ಪೂಜಾ ಕಾರ್ಯಕ್ರಮಗಳನ್ನು ಸಂಸ್ಥೆ ಮಾಡುತ್ತದೆ ಹಾಗೂ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರಾದ ಬೆಳ್ಯನ ಚಂದ್ರ ಪ್ರಕಾಶ್ ಕಾರ್ಯಕ್ರಮವನ್ನು ಸದುಪಯೋಗ ಪಡಿಸಿಕೊಳ್ಳುವ ಬಗ್ಗೆ ತಿಳಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಶ್ರೀ ಗೌರಿ ಶಂಕರ ದೇವಾಲಯದ ಕಾರ್ಯದರ್ಶಿ ಟಿ.ವಿ.ಲೋಕೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀ ಗೌರಿ ಶಂಕರ ದೇವಾಲಯದ ಅಧ್ಯಕ್ಷರಾದ ಕೆ.ಕೆ.ಪೂರ್ಣಯ್ಯ, ಉಪಾಧ್ಯಕ್ಷರಾದ ಕೆ.ಆರ್.ಬೆಳ್ಯಪ್ಪ, ಮೇಕೇರಿ ಗ್ರಾಮ ಪಂಚಾಯತ್ ಸದಸ್ಯರಾದ ಹನೀಫ್, ಸುಶೀಲ, ಪ್ರಗತಿ ಜಿಲ್ಲಾ ಜನಜಾಗೃತಿ ವೇದಿಕೆಯ ಉಪಾಧ್ಯಕ್ಷರಾದ ಧನಂಜಯ ಅಗೋಳಿಕಜೆ, ಗಣೇಶ ಸೇವಾಸಮಿತಿಯ ಗೌರವಧ್ಯಕ್ಷರು ಕುಮಾರ್ ಟಿ.ಎ, ಸ್ವಾಗತ್ ಯುವಕ ಸಂಘದ ಅಧ್ಯಕ್ಷ ಉಮೇಶ್ ಟಿ., ಬಂಧು ಸ್ವ ಸಹಾಯ ಸಂಘದ ಒಕ್ಕೂಟದ ಅಧ್ಯಕ್ಷರಾದ ನಳಿನಿ ಎನ್, ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳು, ಸರ್ವ ಸದಸ್ಯರು ಭಾಗವಹಿಸಿದ್ದರು. ವೇದಿಕೆಯಲ್ಲಿದ್ದ ಗಣ್ಯರು ಯೋಜನೆಯ ವಿವಿಧ ಕಾರ್ಯಕ್ರಮಗಳ ಮಂಜೂರಾತಿ ಪತ್ರ ಹಾಗೂ ಸಲಕರಣೆಗಳನ್ನು ವಿತರಿಸಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಜಯಂತಿ ಪ್ರಾರ್ಥಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಡಿಕೇರಿ ತಾಲೂಕಿನ ಯೋಜನಾಧಿಕಾರಿ ಪುರುಷೋತ್ತಮ್ ಎನ್ ಸ್ವಾಗತಿಸಿದರು, ಮೇಲ್ವಿಚಾರಕಿ ವಿನೋದ ನಿರೂಪಿಸಿದರು, ಮೇಲ್ವಿಚಾರಕಿ ವಿದ್ಯಾ ವಂದಿಸಿದರು.
ವರದಿ : ದುಗ್ಗಳ ಸದಾನಂದ.









