
ಮಡಿಕೇರಿ ಜ.19 NEWS DESK : ಆಟೋ ಮಾಲೀಕ ಚಾಲಕರ ಸಂಘದ ವತಿಯಿಂದ ಗಣರಾಜ್ಯೋತ್ಸವ ಪ್ರಯುಕ್ತ ಸಂಘದ ಸದಸ್ಯರಿಗೆ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾವಳಿಯನ್ನು ಏ.5ರಿಂದ 7ರವರೆಗೆ ನಗರದಲ್ಲಿ ಆಯೋಜಿಸಲಾಗಿದ್ದು, ಏ.12ರಂದು ಸಾರ್ವಜನಿಕರಿಗೆ ಹಾಗೂ ಆಟೋ ಚಾಲಕರಿಗೆ ಆಟೋಟ ಸ್ಪರ್ಧೆ ಮತ್ತು ಡ್ಯಾನ್ಸ್ ಮೇಳವನ್ನು ಆಯೋಜಿಸಲಾಗಿದೆಯೆಂದು ಸಂಘದ ಜಿಲ್ಲಾಧ್ಯಕ್ಷ ಡಿ.ಹೆಚ್. ಮೇದಪ್ಪ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿ ಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಜಿಲ್ಲಾ ವ್ಯಾಪ್ತಿಯಲ್ಲಿ ಆಟೋ ಮಾಲೀಕ ಚಾಲಕರ ಸಂಘದೊಂದಿಗೆ ನೋಂದಾಯಿಸಿಕೊಂಡ 37 ಸ್ಥಾನೀಯ ಸಮಿತಿಗಳಿವೆ. ಈ ಸಮಿತಿಗಳಲ್ಲಿ ಸದಸ್ಯರಾಗಿರುವ ಆಟೋ ಚಾಲಕರಿಗಾಗಿ ಏ.5ರಿಂದ ಮೂರು ದಿನಗಳ ಕಾಲ ನಗರದ ಜನರಲ್ ಕೆ.ಎಸ್.ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆಯೆಂದು ತಿಳಿಸಿದರು. ಈ ಕ್ರಿಕೆಟ್ ಪಂದ್ಯಾವಳಿಯಲ್ಲಿ 25 ರಿಂದ 30 ತಂಡಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿಚ್ಛಿಸುವ ತಂಡಗಳಿಗೆ 5ಸಾವಿರ ರೂ. ಮೈದಾನ ಶುಲ್ಕವನ್ನು ನಿಗದಿಪಡಿಸಲಾಗಿದೆ. ಆಸಕ್ತ ತಂಡಗಳು ಮಾ.25ರ ಒಳಗಾಗಿ ತಮ್ಮ ತಂಡದ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ತಂಡಗಳಿಗೆ ಜೆರ್ಸಿಯನ್ನು ಕಡ್ಡಾಯಗೊಳಿಸಿರುವುದಾಗಿ ಮಾಹಿತಿ ನೀಡಿದರು. ಪಂದ್ಯಾವಳಿ ವಿಜೇತ ತಂಡಕ್ಕೆ 30 ಸಾವಿರ ರೂ. ನಗದು ಬಹುಮಾನ ಮತ್ತು ರನ್ನರ್ಸ್ ಅಪ್ ತಂಡಕ್ಕೆ 20 ಸಾವಿರ ನಗದು ಬಹುಮಾನವನ್ನು ನೀಡಲಾಗುತ್ತದೆಂದು ತಿಳಿಸಿದರು. :: ಡ್ಯಾನ್ಸ್ ಮೇಳ-ಆಟೋಟ ಸ್ಪರ್ಧೆ :: ಏ.12ರಂದು ನಗರದ ಗಾಂಧಿ ಮೈದಾನದಲ್ಲಿ ಮಹಿಳೆಯರು, ಮಕ್ಕಳು, ಸಾರ್ವಜನಿಕರು ಹಾಗೂ ಆಟೋ ಚಾಲಕರಿಗಾಗಿ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಅಂದು ಸಂಜೆ 6 ಗಂಟೆಯ ನಂತರ ‘ಡ್ಯಾನ್ಸ್ ಮೇಳ’ವನ್ನು ಆಯೋಜಿಸಲಾಗಿದೆ. ಇದರಲ್ಲಿ 5 ರಿಂದ 6 ಮಂದಿಯನ್ನು ಒಳಗೊಂಡ ತಂಡಗಳು ಇಲ್ಲವೆ ವೈಯಕ್ತಿಕವಾಗಿಯೂ ಪಾಲ್ಗೊಳ್ಳಲು ಅವಕಾಶವನ್ನು ಕಲ್ಪಿಸಲಾಗಿದೆ.ಈ ಡ್ಯಾನ್ಸ್ ಮೇಳ ಸಾರ್ವಜನಿಕರಿಗೆ ಮುಕ್ತವಾಗಿದೆ. ಆಸಕ್ತರು ಏ.5ರ ಒಳಗಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ಮನವಿ ಮಾಡಿದರು. :: ದೇಣಿಗೆ ಪುಸ್ತಕ ಬಿಡುಗಡೆ :: ಸಂಘದಿಂದ ಆಯೋಜಿಸುವ ಕಾರ್ಯಕ್ರಮಕ್ಕೆ ದೇಣಿಗೆ ಸಂಗ್ರಹಿಸುವ ನಿಟ್ಟಿನಲ್ಲಿ ದೇಣಿಗೆ ಪುಸ್ತಕದ ಉದ್ಘಾಟನಾ ಕಾರ್ಯಕ್ರಮವನ್ನು ಜ.20 ರಂದು ನಗರದ ಬಾಲ ಭವನದಲ್ಲಿ ಬೆ.11 ಗಂಟೆಗೆ ಆಯೋಜಿಸಲಾಗಿದೆಯೆಂದು ಡಿ.ಹೆಚ್.ಮೇದಪ್ಪ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಆಟೋ ಮಾಲೀಕ ಚಾಲಕರ ಸಂಘದ ಮಡಿಕೇರಿ ನಗರಾಧ್ಯಕ್ಷ ಎ.ಸಮ್ಮದ್, ನಗರ ಪ್ರಧಾನ ಕಾರ್ಯದರ್ಶಿ ದಿನೇಶ್ ಬಾರನ, ಖಜಾಂಚಿ ಹೆಚ್.ಎಸ್.ನಾಗರಾಜು, ಸಂಘಟನಾ ಕಾರ್ಯದರ್ಶಿಗಳಾದ ಪ್ರವೀಣ್ ಮುದ್ದಿಯನ ಮತ್ತು ಕೆ.ಕೆ.ಸುಕುಮಾರ್ ಉಪಸ್ಥಿತರಿದ್ದರು.









