
NEWS DESK *ಹಸಿದವನಿಗೆ ಅನ್ನ ಕೊಡುವುದೇ ದೇವರ ಪೂಜೆ* ನಾಡು ಕಂಡ ಮಹಾಯೋಗಿ ಮಹಾ ದಾಸೋಹಿ, ನೆಡೆದಾಡುವ ದೇವರೆಂದೇ ಖ್ಯಾತರಾಗಿದ್ದ ಡಾ. ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯವರು ಲಿಂಗೈಕ್ಯರಾದ ದಿನವಾದ ಜನವರಿ 21ನ್ನು ರಾಜ್ಯ ಸರ್ಕಾರವು ‘ದಾಸೋಹ ದಿನ’ ಎಂದು ಆಚರಿಸಲು ಘೋಷಿಸಿದೆ.! ಈ ದಾಸೋಹ ದಿನ ಒಂದು ಸ್ಮರಣೆ ಮತ್ತು ಉತ್ತಮ ಸೇವಾ ಸಂದೇಶದ ಆಚರಣೆ. ಹಾಗಾಗಿ ಸ್ವಾಮೀಜಿಯವರ ಅಮೂಲ್ಯ ಸಾಮಾಜಿಕ, ಧಾರ್ಮಿಕ ಮತ್ತು ಶೈಕ್ಷಣಿಕ ಸೇವೆಯನ್ನು ಸ್ಮರಿಸುವ ದಿನವಾಗಿ ಈ ದಿನವನ್ನು ಕರುನಾಡಿನಾದ್ಯಂತ ದಾಸೋಹ ದಿನವನ್ನಾಗಿ ಆಚರಿಸುವ ಮೂಲಕ ಅಗಲಿದ ಆ ಮಹಾ ಚೈತನ್ಯಕ್ಕೆ ಧನ್ಯತಾ ನಮನವನ್ನು ಸಲ್ಲಿಸಲಾಗುತ್ತದೆ.! ಬಸವಣ್ಣನವರ ಆದರ್ಶಗಳನ್ನು ನುಡಿಗಳಲ್ಲಿ ಮಾತ್ರವಲ್ಲದೆ ನಡೆಯಲ್ಲಿ ಅನುಸರಿಸಿದ ಡಾ. ಶಿವಕುಮಾರ ಸ್ವಾಮೀಜಿ ಅವರು ಒಬ್ಬ ವ್ಯಕ್ತಿಯಾಗಿ ಅಲ್ಲ ಸಮಾಜಕ್ಕೆ ದೊಡ್ಡ ಶಕ್ತಿಯಾಗಿ ನಿಂತು ತಮ್ಮ ಜೀವನ ಮತ್ತು ಅವರ ಸೇವಾ ತತ್ತ್ವದ ಮೂಲಕ ದಾಸೋಹ ಎಂಬ ಪದಕ್ಕೆ ಜೀವಂತ ರೂಪ ನೀಡಿದವರು.! ಸಿದ್ಧಗಂಗಾ ಮಠದ ಮೂಲಕ “ಹಸಿದವನಿಗೆ ಅನ್ನ ಕೊಡುವುದೇ ದೇವರ ಪೂಜೆ” ಎಂಬ ನಂಬಿಕೆಯನ್ನು ಕಾರ್ಯರೂಪಕ್ಕೆ ತಂದು ಜಾತಿ, ಧರ್ಮ, ಭಾಷೆ ಎಂಬ ಯಾವುದೇ ಭೇದವಿಲ್ಲದೆ ಲಕ್ಷಾಂತರ ಮಕ್ಕಳಿಗೆ ಅನ್ನ, ಆಶ್ರಯ ಮತ್ತು ಶಿಕ್ಷಣ ನೀಡಿದ ಅವರ ಬದುಕಿನ ಮೂಲಕ ನಿಜವಾದ ದಾಸೋಹದ ಉದಾಹರಣೆ ಆದವರು.! ಹಸಿದವನು ಕಲಿಯಲಾರನು ಎಂಬ ಅಸಲಿ ಸತ್ಯವನ್ನು ಅರಿತಿದ್ದ ಸ್ವಾಮೀಜಿಯವರು, ಅನ್ನ ದಾಸೋಹದ ಜೊತೆಗೆ ಜ್ಞಾನ ದಾಸೋಹವನ್ನೂ ಸಮಾಜಕ್ಕೆ ನೀಡಿದರು. ಅವರ ದಾಸೋಹ ಕೇವಲ ಆಹಾರಕ್ಕೆ ಸೀಮಿತವಾಗಿರಲಿಲ್ಲ. ಅದು ಮಾನವೀಯತೆ, ಶಿಸ್ತು, ಶ್ರಮ ಮತ್ತು ಸೇವೆಯ ಮೌಲ್ಯಗಳನ್ನು ಬೆಳೆಸುವ ಮಹಾ ಚಳವಳಿ ಆಗಿತ್ತು. ಸರಳ ಜೀವನ, ಉನ್ನತ ಚಿಂತನೆ ಅವರ ವ್ಯಕ್ತಿತ್ವದ ಆಭರಣವಾಗಿತ್ತು. ಶತಮಾನ ಪೂರ್ತಿ ಬದುಕಿ ಕೊನೆಯವರೆಗೂ ಸಮಾಜದ ಬಗ್ಗೆ ಕಾಳಜಿ ತೋರಿದ ಅವರ ಜೀವನವೇ ಸಮಾಜಕ್ಕೆ ಒಂದು ಪಾಠ.! ಡಾ. ಶಿವಕುಮಾರ ಸ್ವಾಮೀಜಿಯವರು ಹೇಳುತ್ತಿದ್ದಂತೆ, “ಸಮಾಜಕ್ಕೆ ಒಳಿತನ್ನು ಕೊಡುವುದೇ ಜೀವನದ ಅರ್ಥ” ಈ ಮಾತು ಅವರು ಬದುಕಿನ ಪ್ರತಿಯೊಂದು ಕ್ಷಣದಲ್ಲೂ ಅನುಸರಿಸಿದ ಫಲ ಸಿದ್ಧಗಂಗಾ ಮಠವು ಕೇವಲ ಒಂದು ಧಾರ್ಮಿಕ ಕೇಂದ್ರವಾಗಿರದೆ, ಲಕ್ಷಾಂತರ ಬಡಮಕ್ಕಳ ಬದುಕನ್ನು ಬೆಳಗಿದ ವಿದ್ಯಾಲಯವಾಗಿ ರೂಪುಗೊಂಡಿತು. ಅವರ ಆಶ್ರಯದಲ್ಲಿ ಬೆಳೆದ ಅನೇಕ ವಿದ್ಯಾರ್ಥಿಗಳು ಇಂದು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿ, ಮತ್ತೆ ಸಮಾಜಕ್ಕೇ ಸೇವೆ ಸಲ್ಲಿಸುತ್ತಿದ್ದಾರೆ.! ಸ್ವಾಮೀಜಿಯವರ ದಾಸೋಹದ ಚಿಂತನೆ ಇಂದಿನ ಯುಗಕ್ಕೂ ಅತ್ಯಂತ ಪ್ರಸ್ತುತವಾಗಿದೆ. ಹೆಚ್ಚುತ್ತಿರುವ ಅಸಮಾನತೆ, ಬಡತನ ಮತ್ತು ನಿರ್ಲಕ್ಷ್ಯದ ನಡುವೆ, ಅವರ ಸೇವಾ ಮಾದರಿ ನಮಗೆ ದಾರಿದೀಪವಾಗಿದೆ. ದಾಸೋಹ ಎಂದರೆ ಕೇವಲ ದೊಡ್ಡ ಕಾರ್ಯಗಳೇ ಬೇಕೆಂದಿಲ್ಲ ಒಬ್ಬ ಹಸಿದವನಿಗೆ ಒಂದು ಊಟ,ಒಬ್ಬ ನಿರಾಶ್ರಿತನಿಗೆ ಒಂದು ನೆರವು, ಒಬ್ಬ ಮಗುವಿಗೆ ಒಂದು ಅವಕಾಶ ನೀಡುವುದೂ ದಾಸೋಹವೇ ಆಗಿದೆ. ಖಾವಿ ವಸ್ತ್ರವನ್ನು ಧರಿಸುವುದು ಕೇವಲ ಒಂದು ಬಣ್ಣದ ಆಯ್ಕೆಯಲ್ಲ ಅದು ತ್ಯಾಗ, ಶಿಸ್ತು ಮತ್ತು ಸಮಾಜಸೇವೆಯ ಸಂಕಲ್ಪದ ಸಂಕೇತ. ಡಾ. ಶಿವಕುಮಾರ ಸ್ವಾಮೀಜಿಯವರು ಖಾವಿ ತೊಟ್ಟ ಕ್ಷಣದಿಂದಲೇ ತಮ್ಮ ಬದುಕನ್ನು ಸಂಪೂರ್ಣವಾಗಿ ಸಮಾಜಕ್ಕೆ ಅರ್ಪಿಸಿದರು. ವೈಯಕ್ತಿಕ ಸುಖ ಸೌಕರ್ಯಗಳನ್ನು ತ್ಯಜಿಸಿ, ಧರ್ಮವನ್ನು ಕೇವಲ ಪೂಜೆ, ಪಠಣಕ್ಕೆ ಸೀಮಿತಗೊಳಿಸದೆ, ಅದನ್ನು ಮಾನವಸೇವೆಯ ಮಾರ್ಗವಾಗಿ ರೂಪಿಸಿದರು. ಸ್ವಾಮೀಜಿಯವರ ಧಾರ್ಮಿಕತೆ ಹೊರಂಗಣ ಆಚರಣೆಗಳಲ್ಲಿ ಅಲ್ಲ, ಒಳಗಿನ ಕಾರ್ಯಕ್ಷಮತೆ ಮತ್ತು ಸತ್ಕರ್ಮದಲ್ಲಿ ಕಾಣಿಸಿಕೊಂಡಿತು. “ಹಸಿವಿಗೆ ಅನ್ನವೇ ಮೊದಲ ಔಷಧ”ಎಂಬ ನಂಬಿಕೆಯನ್ನು ಅವರು ತಮ್ಮ ಜೀವನದ ಧ್ಯೇಯವನ್ನಾಗಿಸಿಕೊಂಡರು. ಖಾವಿ ವಸ್ತ್ರ ಧರಿಸಿ ಅವರು ಸಮಾಜಕ್ಕೆ ನೀಡಿದ ಮೊದಲ ಬೆಳಕು ಎಂದರೆ ಅನ್ನ ದಾಸೋಹ. ಯಾರೂ ಹಸಿವಿನಿಂದ ಬಳಲಬಾರದು ಎಂಬ ಸಂಕಲ್ಪದೊಂದಿಗೆ, ಸಿದ್ಧಗಂಗಾ ಮಠವನ್ನು ಅನ್ನದ ಮಂದಿರವನ್ನಾಗಿ ರೂಪಿಸಿದರು. ಸಾಧನೆಗೆ, ಶ್ರೀಮಂತಿಕೆ ಡಿಗ್ರಿಗಳೇ ಬೇಕೆಂದೇನಿಲ್ಲ ನಿಸ್ವಾರ್ಥ ಸೇವಾಮನೋಭಾವ ಇದ್ದರೆ ಸಾಕೆಂದು, ಖಾವಿಗೆ ಅದರ್ಶರಾಗಿ ಬಾಳಿ ಬದುಕಿ ತೋರಿದವರು, ಇಂದಿನ ಯುವಪೀಳಿಗೆ ಸ್ವಾಮೀಜಿಯವರ ಜೀವನದಿಂದ ಪ್ರೇರಣೆ ಪಡೆದು, ಸ್ವಾರ್ಥವನ್ನು ಬದಿಗಿಟ್ಟು ಸಮಾಜಮುಖಿ ಚಿಂತನೆ ಬೆಳೆಸಬೇಕು. ತ್ಯಾಗ, ಶಿಸ್ತು ಮತ್ತು ಶ್ರಮದ ಮೌಲ್ಯಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ಅವರ ಕನಸಿನ ಸಮಾನತೆಯ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ.! ದಾಸೋಹ ದಿನದಂದು ಡಾ. ಶಿವಕುಮಾರ ಸ್ವಾಮೀಜಿಯವರ ಪುಣ್ಯಸ್ಮರಣೆ ಕೇವಲ ಮಾತಿನ ಮಟ್ಟಕ್ಕೆ ಸೀಮಿತವಾಗದೇ, ನಮ್ಮ ನಡವಳಿಕೆಯಲ್ಲಿ ಪ್ರತಿಬಿಂಬಿಸಬೇಕು. ಅವರ ದಾಸೋಹದ ದೀಪವನ್ನು ನಮ್ಮ ಮನಗಳಲ್ಲಿ ಹೊತ್ತಿಸಿಕೊಂಡು ಪುಣ್ಯಸ್ಮರಣೆ ಮಾಡುವುದರ ಮೂಲಕ, ಅವರ ತತ್ತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪ ಮಾಡಬೇಕು. ಹಸಿದವರಿಗೆ ಅನ್ನ ನೀಡುವುದು ಅಗತ್ಯ ಇರುವವರಿಗೆ ಸಹಾಯ ಮಾಡುವುದು, ಶಿಕ್ಷಣಕ್ಕೆ ಬೆಂಬಲ ನೀಡುವುದು ಇವೇ ಅವರಿಗೆ ಸಲ್ಲಿಸುವ ನಿಜವಾದ ಗೌರವ.! *ಬರಹ : ಗೀತಾಂಜಲಿ ಎನ್.ಎಮ್* ಸೋಮವಾರಪೇಟೆ*









