
ನಾಪೋಕ್ಲು ಜ.27 NEWS DESK : ಶಿಕ್ಷಣ ಇಲಾಖೆಯು ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಪೂರಕ ಕಲಿಕೆಗೆ ಸಿದ್ಧಗೊಳಿಸುವ ಸಲುವಾಗಿ ಕಲಿಕಾಹಬ್ಬವನ್ನು ಆಯೋಜಿಸುತ್ತಿದ್ದು ಇದರಲ್ಲಿ 1 ರಿಂದ 5ನೇ ತರಗತಿಯ ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಿದ್ದಾರೆ ಎಂದು ನಾಪೋಕ್ಲು ಗ್ರಾಮ ಪಂಚಾಯತಿಯ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್ ಹೇಳಿದರು. ಕರ್ನಾಟಕ ಪಬ್ಲಿಕ್ (ಕೆಪಿಎಸ್) ಶಾಲೆಯಲ್ಲಿ ಆಯೋಜಿಸಲಾಗಿದ್ದ ನಾಪೋಕ್ಲು ಕ್ಲಸ್ಟರ್ ನ ಕಲಿಕಾ ಹಬ್ಬವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಬಿಆರ್ ಪಿ.ಮಂಜುಳ ಚಿತ್ರಾಪುರ ಮಾತನಾಡಿ ಎಫ್ಎಲ್ಎನ್ ಚಟುವಟಿಕೆಗಳ ಬಲವರ್ಧನೆಗೆ ಕಲಿಕಾ ಹಬ್ಬವು ಸಂತೋಷದಾಯಕ ಹಾಗೂ ಅನುಭವಯುಕ್ತ ಕಲಿಕೆಯ ವಾತಾವರಣವನ್ನು ಪ್ರೇರೇಪಿಸುತ್ತದೆ. ಮಕ್ಕಳ ಕಲಿಕೆಯ ಒತ್ತಡವನ್ನು ಕಡಿಮೆಗೊಳಿಸಲು ಹಾಗೂ ಎಫ್.ಎಲ್.ಎನ್ ನಲ್ಲಿ ಮಕ್ಕಳು ಸಾಧಿಸಿರುವ ಕಲಿಕಾ ಫಲಗಳನ್ನು ತಿಳಿಯಲು ಇದು ವೇದಿಕೆಯನ್ನು ಒದಗಿಸುತ್ತದೆ ಎಂದರು. ಕಾರ್ಯಕ್ರಮದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಯ ಅಭಿವೃದ್ಧಿ ಸಮಿತಿಯ ಸದಸ್ಯರಾದ ಕೆಟೋಳಿರ ರಾಜ ಗಣಪತಿ, ಇತರ ಸದಸ್ಯರು, ಕಕ್ಕಬೆ ಸಿ.ಆರ್.ಪಿ ಕಲ್ಪನಾ, ಶಿಕ್ಷಕರು, ಸಿಬ್ಬಂದಿಗಳು ಹಾಗೂ ಪೋಷಕರು ಹಾಜರಿದ್ದರು. ಶಾಲೆಯ ಕೆಪಿಎಸ್ ಶಾಲೆಯ ಮುಖ್ಯ ಶಿಕ್ಷಕಿ ನಳಿನಿ ಸ್ವಾಗತಿಸಿ, ವಂದಿಸಿದರು.
ವರದಿ : ದುಗ್ಗಳ ಸದಾನಂದ.









