
ಮಡಿಕೇರಿ NEWS DESK ಫೆ.5 : ಮಡಿಕೇರಿ ಕ್ಷೇತ್ರದ ಜನಸ್ನೇಹಿ ಶಾಸಕ ಡಾ.ಮಂತರ್ ಗೌಡ ಅವರು ಇತ್ತೀಚೆಗೆ ಹಿಂದೂ ಶೋಭಾಯಾತ್ರೆಯಲ್ಲಿ ಪಾಲ್ಗೊಂಡ ವಿಚಾರವನ್ನು ಕೆಲವರು ದೊಡ್ಡದು ಮಾಡಿ ಕ್ಷುಲ್ಲಕ ರಾಜಕಾರಣ ಮಾಡುತ್ತಿರುವುದು ಸರಿಯಲ್ಲವೆಂದು ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ಪ್ರಧಾನ ಕಾರ್ಯದರ್ಶಿ ಎಂ.ಎ.ಉಸ್ಮಾನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ವಿವಿಧತೆಯಲ್ಲಿ ಏಕತೆ ಮತ್ತು ಸಮಾನತೆಯ ಆಶಯಕ್ಕೆ ಬದ್ಧರಾಗಿ ಕಾರ್ಯನಿರ್ವಹಿಸುತ್ತಿರುವ ಶಾಸಕ ಡಾ.ಮಂತರ್ ಗೌಡ ಅವರು ಸರ್ವಧರ್ಮೀಯರ ನೆಚ್ಚಿನ ಜನಪ್ರತಿನಿಧಿಯಾಗಿದ್ದಾರೆ. ಶಾಸಕರಾದವರು ಒಂದು ಧರ್ಮ ಅಥವಾ ಒಂದು ಸಮುದಾಯಕ್ಕೆ ಸೀಮಿತವಾಗಿರುವುದಿಲ್ಲ. ಅವರು ಪ್ರತಿಯೊಬ್ಬರನ್ನೂ ಪ್ರತಿನಿಧಿಸಬೇಕಾಗುತ್ತದೆ, ಆ ಕೆಲಸವನ್ನು ಮಡಿಕೇರಿ ಶಾಸಕರು ಉತ್ತಮ ರೀತಿಯಲ್ಲಿ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಓಲೈಕೆ ರಾಜಕಾರಣಕ್ಕಾಗಿ ತಮ್ಮತನವನ್ನು ಬಿಟ್ಟು ಮುಖವಾಡದ ರಾಜಕಾರಣವನ್ನು ಡಾ.ಮಂತರ್ ಗೌಡ ಅವರು ಎಂದಿಗೂ ಮಾಡಿಲ್ಲ. ಅಭಿವೃದ್ಧಿ ಕಾರ್ಯಗಳಲ್ಲಿ ಕೂಡ ತಾರತಮ್ಯ ಮಾಡದೆ ಪ್ರತಿಯೊಂದು ಜನಾಂಗಕ್ಕೂ ಮತ್ತು ಪ್ರತಿಯೊಂದು ಕ್ಷೇತ್ರಕ್ಕೂ ಸಮಾನ ಆದ್ಯತೆ ನೀಡುತ್ತಿದ್ದಾರೆ. ಮಡಿಕೇರಿ ಶಾಸಕರ ಸರಳತೆ ಮತ್ತು ಘನತೆಯ ಕುರಿತು ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಅಪಾರ ಅಭಿಮಾನ ಹೊಂದಿದ್ದಾರೆ. ಇದನ್ನು ಸಹಿಸದ ಕೆಲವು ಪಟ್ಟಭದ್ರಹಿತಾಸಕ್ತಿಗಳು ಮೊಸರನ್ನದಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಇಬ್ಬರು ಕಾಂಗ್ರೆಸ್ ಶಾಸಕರ ಗೆಲುವಿನ ನಂತರ ಕೊಡಗು ಸರ್ವ ಜನಾಂಗದ ಶಾಂತಿಯ ತೋಟವಾಗಿದೆ. ಎಲ್ಲರೂ ನೆಮ್ಮದಿಯಿಂದ ಬದುಕುತ್ತಿದ್ದಾರೆ, ಎಲ್ಲಾ ಧರ್ಮದವರೂ ಒಗ್ಗೂಡಿ ಮುನ್ನಡೆಯುತ್ತಿದ್ದಾರೆ. ಇದಕ್ಕೆ ಶಾಸಕರುಗಳ ಇಚ್ಛಾಶಕ್ತಿ ಮತ್ತು ಸರ್ವಧರ್ಮೀಯರೊಂದಿಗೆ ಸಮಾನ ಮನೋಭಾವದಲ್ಲಿ ಬೆರೆಯುತ್ತಿರುವುದೇ ಕಾರಣವಾಗಿದೆ. ಕುಶಾಲನಗರದ ಮುಖ್ಯ ಬೀದಿಯಲ್ಲಿ ಹಿಂದೂ ಶೋಭಾಯಾತ್ರೆ ಸಾಗುತ್ತಿದ್ದಾಗ ಅದೇ ಮಾರ್ಗದಲ್ಲಿ ಪ್ರಯಾಣ ಬೆಳೆಸುತ್ತಿದ್ದ ಶಾಸಕ ಡಾ.ಮಂತರ್ ಗೌಡ ಅವರು ಕಾರಿನಿಂದಿಳಿದು ಶುಭ ಹಾರೈಸಿ, ಹಿರಿಯರಿಂದ ಆಶೀರ್ವಾದ ಪಡೆದಿರುವುದು ಕೊಡಗಿನ ಸಂಸ್ಕೃತಿಯ ಒಂದು ಭಾಗವಾಗಿದೆ.
ಶೋಭಾಯಾತ್ರೆಯಲ್ಲಿ ಹೆಜ್ಜೆ ಹಾಕಿದ ತಕ್ಷಣ ಶಾಸಕರು ದೊಡ್ಡ ತಪ್ಪು ಮಾಡಿದ್ದಾರೆ ಎಂದು ಪ್ರತಿಬಿಂಬಿಸುವ ಮೂಲಕ ಸಣ್ಣತನವನ್ನು ಕೆಲವರು ಪ್ರದರ್ಶಿಸುತ್ತಿರುವುದು ಸರಿಯಲ್ಲ ಮತ್ತು ರಾಜಕೀಯ ಲಾಭ, ನಷ್ಟದ ಕುರಿತು ಲೆಕ್ಕಾಚಾರವೂ ಅರ್ಥಹೀನವೆಂದು ಎಂ.ಎ.ಉಸ್ಮಾನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಪಾರ ಅಭಿವೃದ್ಧಿ ಕಾರ್ಯ ಮತ್ತು ಜನಸ್ನೇಹಿ ಗುಣದ ಮೂಲಕ ಸಮಾಜದಲ್ಲಿ ಸಾಮರಸ್ಯವನ್ನು ಮೂಡಿಸುತ್ತಾ ಮುನ್ನಡೆಯುತ್ತಿರುವ ಡಾ.ಮಂತರ್ ಗೌಡ ಅವರ ಕೈಬಲ ಪಡಿಸುವ ಕಾರ್ಯವನ್ನು ಪ್ರತಿಯೊಬ್ಬರು ಮಾಡಬೇಕಾಗಿದೆ ಎಂದು ತಿಳಿಸಿದ್ದಾರೆ.









