ಕುಶಾಲನಗರ : ವಿದ್ಯಾರ್ಥಿಗಳು ವ್ಯಾಸಂಗದಲ್ಲಿ ಏಕಾಗ್ರತೆ, ಸಮಯ ಪಾಲನೆ ಹಾಗೂ ನಿರಂತರ ಅಧ್ಯಯನ ದಿಂದ ಮಾತ್ರ ಶೈಕ್ಷಣಿಕವಾಗಿ ಗುರಿ ಸಾಧಿಸಲು ಸಾಧ್ಯ ಎಂದು ಕೂಡಿಗೆಯ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ದೀಪಿಕಾ ಮೂರ್ತಿ ಹೇಳಿದರು.
ಬಸವನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ದ್ವಿತೀಯ ಪಿಯು ಹಾಗೂ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ವಿಜ್ಞಾನ ಹಾಗೂ ತಂತ್ರಜ್ಞಾನದ ಯುಗದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಪೈಪೋಟಿ ಹೆಚ್ಚಿದೆ.
ಆದರೆ, ಅಧ್ಯಯನದ ಮೂಲಕ ಜ್ಞಾನ ಸಂಪಾದಿಸಿದರೆ ನಮ್ಮ ಗುರಿ ಈಡೇರುತ್ತದೆ ಎಂದು ಹೇಳಿದ ಡಾ.ದೀಪಿಕಾ ಹದಿ ಹರೆಯದ ವಿದ್ಯಾರ್ಥಿನಿಯರು ವಯುಕ್ತಿಕ ಸ್ವಚ್ಛತೆಯತ್ತ ಹೆಚ್ಚು ಒತ್ತು ನೀಡಲು ಕರೆ ಕೊಟ್ಟರು.
ಮತ್ತೋರ್ವ ಅತಿಥಿ ಸಂಪನ್ಮೂಲ ಶಿಕ್ಷಕ ಉ.ರಾ.ನಾಗೇಶ್ ಮಾತನಾಡಿ, ವಿದ್ಯಾರ್ಥಿಗಳು ನಕಾರಾತ್ಮಕ ವಿಚಾರಗಳನ್ನು ದೂರ ಮಾಡಿ ಸಕಾರಾತ್ಮಕ ಚಿಂತನೆಗಳತ್ತ ಗಮನಹರಿಸಬೇಕು.
ವಾಲ್ಮೀಕಿ, ಕನಕದಾಸ, ಬುದ್ದ, ಬಸವೇಶ್ವರರ ಚಿಂತನೆಗಳನ್ನು ಅರಿಯಿರಿ.

ಪೋಷಕರನ್ನು ಸಮಾಜ ನಿಮ್ಮ ಮೂಲಕ ಗುರುತಿಸುವ ಮಟ್ಟಕ್ಕೆ ಸಾಧನೆಯ ಶಿಖರ ಏರಬೇಕು. ಶಿಕ್ಷಕರು ತೋರಿಸಿದ ಬೆಳಕಿನ ಸನ್ನಡತೆಯ ಮಾರ್ಗದಲ್ಲಿ ವಿದ್ಯಾರ್ಥಿಗಳು ನಡೆಯಬೇಕು ಎಂದು ಕರೆಕೊಟ್ಟರು.
ವಿದ್ಯಾರ್ಥಿಗಳಾದ ವಿನುತಾ, ಸಿಂಚನಾ, ಅಭಿ, ಶ್ವೇತ, ದಿಗಂತ್ ಮೊದಲಾದ ವಿದ್ಯಾರ್ಥಿಗಳು ಶಾಲೆಯ ಅನುಭವಗಳನ್ನು ಹಂಚಿಕೊಂಡರು.
ಶಾಲಾ ಪ್ರಾಂಶುಪಾಲೆ ಶ್ರೀದೇವಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶಿಕ್ಷಕರಾದ ಕೆ.ಆರ್.ರಮೇಶ್, ಪುಟ್ಟರಾಜು, ಶಿವಕುಮಾರ, ಮಹೇಶ್, ಶಭರಿ ಗಿರೀಶ್,
ಪೋಷಕ ಸಮಿತಿ ಪದಾಧಿಕಾರಿಗಳಾದ ನಾಗೇಶ್, ಪ್ರಮೋದ್, ಪುಷ್ಪಲತಾ, ಲಕ್ಷ್ಮಿ, ತುಳಸಿ, ಅನಿತಾ ಇದ್ದರು.








