
ಮಡಿಕೇರಿ NEWS DESK ಫೆ.18 : ಭಾಷೆ ಯಾವುದೇ ಇರಲಿ, ಕೃತಿ ರಚನೆಕಾರರು ತಪ್ಪುಗಳು ನುಸುಳದಂತೆ ಎಚ್ಚರ ವಹಿಸಬೇಕು ಮತ್ತು ಭಾಷಾ ಪರಿಣಿತರಿಂದ ಪುಸ್ತಕದ ಕುರಿತು ಮೊದಲು ಅಭಿಪ್ರಾಯ ಸಂಗ್ರಹಿಸಬೇಕು ಎಂದು ಹಿರಿಯ ಸಾಹಿತಿ ಹಾಗೂ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಬಾಚರಣಿಯಂಡ ಅಪ್ಪಣ್ಣ ಅವರು ಕಿವಿಮಾತು ಹೇಳಿದ್ದಾರೆ. ಕೊಡವ ಮಕ್ಕಡ ಕೂಟದ 13ನೇ ವಾರ್ಷಿಕೋತ್ಸವದ ಪ್ರಯುಕ್ತ ನಗರದ ಪತ್ರಿಕಾ ಭವನದಲ್ಲಿ 124 ಮತ್ತು 125ನೇ ಪುಸ್ತಕದ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಮೂಕೋಂಡ ಪುಷ್ಪ ದಮಯಂತಿ ಪೂಣಚ್ಚ ಅವರು ರಚಿಸಿರುವ 4ನೇ ಪುಸ್ತಕ ‘ನೆನಪಿನ ಅಲೆ’ ಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಬಾಚರಣಿಯಂಡ ಅಪ್ಪಣ್ಣ ಅವರು ಇತ್ತೀಚಿನ ದಿನಗಳಲ್ಲಿ ಪತ್ರಿಕೆ ಹಾಗೂ ಪುಸ್ತಕಗಳಲ್ಲಿ ಹೆಚ್ಚು ತಪ್ಪುಗಳು ನುಸುಳುತ್ತಿರುವ ಕುರಿತು ಬೇಸರ ವ್ಯಕ್ತಪಡಿಸಿದರು. ಬರಹಗಾರರು ತಾವು ಬರೆದ ಪುಸ್ತಕದಲ್ಲಿನ ತಪ್ಪುಗಳನ್ನು ಪರಿಶೀಲಿಸಲು ತಮಗೆ ವಿಶ್ವಾಸ ಇರುವವರಿಗೆ ಮೊದಲು ಓದಲು ನೀಡಬೇಕು. ತಪ್ಪುಗಳನ್ನು ಸರಿಪಡಿಸಿದ ನಂತರವೇ ಪುಸ್ತಕಗಳನ್ನು ಬಿಡುಗಡೆಗೊಳಿಸಿ ಓದುಗರಿಗೆ ಅರ್ಪಿಸಬೇಕು. ಓದುಗರ ಅಭಿಪ್ರಾಯವನ್ನು ಕೂಡ ಸಂಗ್ರಹಿಸಬೇಕು ಎಂದು ಸಲಹೆ ನೀಡಿದರು. ಸಾಹಿತಿಗಳು ತಮ್ಮ ಕೃತಿಗಳನ್ನು ಹೊರ ತರಲು ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಹಿಂದೆ ಕೊಡಗಿನಲ್ಲಿ ದಾನಿಗಳ ಕೊರತೆ ಇದ್ದ ಪರಿಣಾಮ ಹೆಚ್ಚಿನ ಬರಹಗಾರರಿಗೆ ತಮ್ಮ ಕೃತಿಗಳನ್ನು ಪ್ರಕಟಿಸಲು ಸಾಧ್ಯವಾಗುತ್ತಿರಲಿಲ್ಲ. ಉತ್ಸಾಹಿ ಬರಹಗಾರರಿಗೆ ಪ್ರೋತ್ಸಾಹ ನೀಡಲು ಸಹೃದಯಿ ದಾನಿಗಳು ಮುಂದೆ ಬರಬೇಕು. ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ ಅವರು ಸಾಹಿತ್ಯ ಲೋಕದ ನಾವಿಕನಂತೆ ಕಾರ್ಯನಿರ್ವಹಿಸುತ್ತಿದ್ದು, ಬರಹಗಾರರನ್ನು ಬೆಳಕಿಗೆ ತರುತ್ತಿದ್ದಾರೆ. ಕೊಡಗಿನಲ್ಲಿ ಎಲ್ಲಾ ಭಾಷೆಗಳ ಸಾಹಿತ್ಯ ಪ್ರಜ್ವಲಿಸಲಿ, ಸಾಹಿತ್ಯ ಕ್ಷೇತ್ರ ಶ್ರೀಮಂತವಾಗಲಿ ಎಂದು ಬಾಚರಣಿಯಂಡ ಅಪ್ಪಣ್ಣ ತಿಳಿಸಿದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಅವರು ಸಾಹಿತ್ಯ, ಸಂಸ್ಕೃತಿಯ ಬೆಳವಣಿಗೆ ಮತ್ತು ಸಾಮಾಜಿಕ ಕಳಕಳಿಯ ಉದ್ದೇಶದಿಂದ 2013ರಲ್ಲಿ ಕೊಡವ ಮಕ್ಕಡ ಕೂಟವನ್ನು ಸ್ಥಾಪಿಸಲಾಗಿದ್ದು, ಇಂದು 13ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿದೆ. 2016ರಿಂದ ಪುಸ್ತಕಗಳನ್ನು ಬಿಡುಗಡೆ ಮಾಡುವ ಮೂಲಕ ಬರಹಗಾರರನ್ನು ಪ್ರೋತ್ಸಾಹಿಸುತ್ತಾ ಬರಲಾಯಿತು. ಸರಕಾರದ ಅನುದಾನವಿಲ್ಲದೆ ಕೇವಲ 9 ವರ್ಷಗಳಲ್ಲಿ ದಾಖಲೆಯ 125 ಪುಸ್ತಕಗಳನ್ನು ಸಾಹಿತ್ಯ ಲೋಕಕ್ಕೆ ಸಮರ್ಪಿಸಿದ ಹೆಗ್ಗಳಿಕೆ ನಮ್ಮದು ಎಂದು ಹರ್ಷ ವ್ಯಕ್ತಪಡಿಸಿದರು.2024ರಲ್ಲಿ 27 ಪುಸ್ತಕ, 2025ರಲ್ಲಿ 17 ಮತ್ತು 2026ರ ಜನವರಿಯಿಂದ ಇಲ್ಲಿಯವರೆಗೆ 4 ಪುಸ್ತಕಗಳನ್ನು ಬಿಡುಗಡೆಗೊಳಿಸಲಾಗಿದೆ. “ಆಟ್ಪಾಟ್ ಪಡಿಪು” ನಾಲ್ಕು ಸಾವಿರ ಪುಸ್ತಕವನ್ನು ಮಕ್ಕಳಿಗೆ ಉಚಿತವಾಗಿ ನೀಡಲಾಗಿದೆ. 123 ಪುಸ್ತಕಗಳಲ್ಲಿ ಐದು ಪುಸ್ತಕಗಳಿಗೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದ್ದು, ಚಿಗುರೆಲೆಗಳು ಪುಸ್ತಕಕ್ಕೆ ರಾಜ್ಯ ಪ್ರಶಸ್ತಿ, ಅಗ್ನಿಯಾತ್ರೆ ಪುಸ್ತಕಕ್ಕೆ “ಗೌರಮ್ಮ ದತ್ತಿ ನಿಧಿ “ಪ್ರಶಸ್ತಿ ಲಭಿಸಿದೆ. ಐದು ಪುಸ್ತಕಗಳು ಕೊಡವ ಸಿನಿಮಾವಾಗಿದೆ. ಚೆಪ್ಪುಡಿರ ಎ.ಕಾರ್ಯಪ್ಪ ಅವರು ಬರೆದ ಕೊಡಗಿನ ಕ್ರೀಡಾಪಟುಗಳ ಜೀವನ ಚರಿತ್ರೆ ಎಂಬ ದಾಖಲೀಕರಣ ಪುಸ್ತಕವನ್ನು 1500 ಪ್ರತಿಗಳನ್ನು ಮುದ್ರಿಸಿ ಕೊಡಗಿನಾದ್ಯಂತ ಶಾಲಾ-ಕಾಲೇಜು ಮತ್ತು ಗ್ರಂಥಾಲಯಗಳಿಗೆ ಉಚಿತವಾಗಿ ನೀಡಿದೆ. ಅಲ್ಲದೆ ಕೊಡವರು ಹಾಗೂ ಕಾವೇರಿ, ಮಾವೀರ ಅಚ್ಚುನಾಯಕ, ಕೊಡಗಿನ ಗಾಂಧಿ ಪಂದ್ಯಂಡ ಐ.ಬೆಳ್ಯಪ್ಪ, 1965ರ ಯುದ್ಧ ಹಾಗೂ ಕೊಡಗಿನ ಮಹಾವೀರ, ಕೊಡವ ಕ್ರೀಡಾ ಕಲಿಗಳು, ಪುಣ್ಯಕ್ಷೇತ್ರ ಪರಿಚಯ ಸೇರಿದಂತೆ ಹಲವು ದಾಖಲೀಕರಣ ಪುಸ್ತಕ, ಸಾಧಕರ ವಿವರದ ಪುಸ್ತಕ, ಕೊಡಗಿನ ಎರಡು ಮಹಾವೀರ ಚಕ್ರ ಪುರಸ್ಕೃತ ವೀರ ಯೋಧರ ಪುಸ್ತಕಗಳನ್ನು ಲೋಕಾರ್ಪಣೆ ಮಾಡಲಾಗಿದೆ.
ಕೊಡವ ಮಕ್ಕಡ ಕೂಟವು ಪುಸ್ತಕವನ್ನು ಪ್ರಕಟಣೆಗೊಳಿಸುವುದರ ಜೊತೆಯಲ್ಲಿ ಹಲವು ಸಮಾಜಮುಖಿ ಕೆಲಸದಲ್ಲಿ ಸಹ ತೊಡಗಿಸಿಕೊಂಡಿದೆ. ಕೊಡವ ಸಂಸ್ಕೃತಿಯ ಬಗ್ಗೆ ಯುವಕರಲ್ಲಿ ಜಾಗೃತಿ ಹಾಗೂ ಆಸಕ್ತಿಯನ್ನು ನಿರಂತರವಾಗಿ ಮೂಡಿಸುತ್ತಾ ಬರುತ್ತಿದೆ. ಮಡಿಕೇರಿಯ ಹಳೇ ಖಾಸಗಿ ಬಸ್ ನಿಲ್ದಾಣದಲ್ಲಿ “ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ” ಅವರ ವೃತ್ತವನ್ನ ನಿರ್ಮಿಸಿ, ಅದೇ ಜಾಗದಲ್ಲಿ ಅಜ್ಜಮಾಡ ಕುಟುಂಬಸ್ಥರ ಸಹಕಾರದೊಂದಿಗೆ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಅವರ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸುವ ಮೂಲಕ ಅವರ ನೆನಪನ್ನು ಚಿರಾಯುವಾಗಿಸಿರುವ ಹೆಗ್ಗಳಿಕೆ ಕೊಡವ ಮಕ್ಕಡ ಕೂಟಕ್ಕಿದೆ ಎಂದು ಬೊಳ್ಳಜಿರ ಅಯ್ಯಪ್ಪ ತಿಳಿಸಿದರು. ಮೂಕೋಂಡ ಪುಷ್ಪ ದಮಯಂತಿ ಪೂಣಚ್ಚ ಅವರೇ ರಚಿಸಿರುವ 5ನೇ ಕೃತಿ ‘ಕೊಡಗಿನ ವಿಶೇಷತೆಯ ಸಮಗ್ರ ಸಿರಿ’ ಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಸಮಾಜ ಸೇವಕ ಮಂಡೇಪಂಡ ರತನ್ ಕುಟ್ಟಯ್ಯ ಅವರು ಇಂದಿನ ಡಿಜಿಟಲ್ ಯುಗದಲ್ಲಿ ಸಾಹಿತ್ಯದ ಬೆಳವಣಿಗೆ ಕಷ್ಟ ಸಾಧ್ಯವಾಗಿದೆ ಎಂದು ಅಭಿಪ್ರಾಯಪಟ್ಟರು. ದಾಖಲೆಯ 125 ಪುಸ್ತಕಗಳನ್ನು ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಕೊಡವ ಮಕ್ಕಡ ಕೂಟ ಇಡೀ ಜಿಲ್ಲೆಗೆ ಮಾದರಿಯಾಗಿದೆ. ಪ್ರಕಟಗೊಂಡಿರುವ ಪುಸ್ತಕಗಳನ್ನು ಮುಂದಿನ ಪೀಳಿಗೆಗೆ ಉಳಿಸಿಕೊಳ್ಳಲು ಡಿಜಿಟಲೀಕರಣಗೊಳಿಸುವಂತೆ ಸಲಹೆ ನೀಡಿದರು. ‘ನೆನಪಿನ ಅಲೆ’ ಮತ್ತು ‘ಕೊಡಗಿನ ವಿಶೇಷತೆಯ ಸಮಗ್ರ ಸಿರಿ’ ಪುಸ್ತಕಗಳ ಲೇಖಕಿ ಮೂಕೋಂಡ ಪುಷ್ಪ ದಮಯಂತಿ ಪೂಣಚ್ಚ ಅವರು ಮಾತನಾಡಿ ಜನ್ಮಭೂಮಿ ಎನ್ನುವುದು ಸ್ವರ್ಗಕ್ಕಿಂತ ಹೆಚ್ಚು, ಕೊಡಗಿನ ಮೂಲನಿವಾಸಿಗಳು ಮೂಲನೆಲೆಯನ್ನು ಮರೆಯಬಾರದು. ಇಲ್ಲಿನ ಪರಿಸರ, ಆಚಾರ, ವಿಚಾರ, ಸಂಸ್ಕೃತಿ, ಪದ್ಧತಿ ಹಾಳಾಗಬಾರದು ಎಂದರು. ಬರಹಗಾರರಿಗೆ ಪುಸ್ತಕ ಬರೆಯುವುದು ಸುಲಭ, ಆದರೆ ಪ್ರಕಟಿಸುವುದು ಕಷ್ಟ. ಕೊಡವ ಮಕ್ಕಡ ಕೂಟ ಸಂಘಟನೆ ಬಹಗಾರರಿಗೆ ಪ್ರೋತ್ಸಾಹ ನೀಡುವ ಮೂಲಕ ಸಾಹಿತ್ಯ ಕ್ಷೇತ್ರವನ್ನು ಬೆಳಗಿಸುತ್ತಿದೆ ಎಂದು ಶ್ಲಾಘಿಸಿದರು. ಬಾಲ್ಯದಲ್ಲಿ ತಾವು ಓದಿದ ರಾಮಾಯಣ, ಮಹಾಭಾರತ ಮತ್ತು ಪಂಚತಂತ್ರ ಕಥೆಗಳು ನನ್ನ ಬರವಣಿಗೆಗೆ ಸ್ಫೂರ್ತಿಯಾಯಿತು. ಕನ್ನಡ ಭಾಷೆಗೆ ಆದ್ಯತೆ ನೀಡಬೇಕು, ಪ್ರತಿಯೊಬ್ಬರು ಕನ್ನಡ ಕಲಿಯಬೇಕು, ಮಾತನಾಡಬೇಕು. ಆ ನಿಟ್ಟಿನಲ್ಲಿ ನಾನು ಕಾರ್ಯನಿರ್ವಹಿಸುತ್ತಿದ್ದೇನೆ. ನಿಸ್ವಾರ್ಥ ಮನಸ್ಸಿನಿಂದ ಸನ್ಮಾರ್ಗದಲ್ಲಿ ಯಾವುದೇ ಕಾರ್ಯವನ್ನು ನಿರ್ವಹಿಸಿದರೆ ಯಶಸ್ಸು ಸಾಧ್ಯ ಮತ್ತು ತತ್ವಜ್ಞಾನಿಯಾಗಬಹುದು ಎಂದು ಪುಷ್ಪ ದಮಯಂತಿ ಪೂಣಚ್ಚ ಅಭಿಪ್ರಾಯಪಟ್ಟರು. ಸಾಹಿತಿ ಬಾಚರಣಿಯಂಡ ರಾಣು ಅಪ್ಪಣ್ಣ ಅವರು ಮಾತನಾಡಿ ಕೊಡವ ಮಕ್ಕಡ ಕೂಟ ಹಾಗೂ ಲೇಖಕರಿಗೆ ಶುಭ ಹಾರೈಸಿದರು. ಸಮಾಜ ಸೇವಕಿ ಕೊಳುವಂಡ ಅನಿತಾ ಸುಬ್ಬಯ್ಯ, ಕೊಳುವಂಡ ಸುಬ್ಬಯ್ಯ, ಮೂಕೋಂಡ ಪೂಣಚ್ಚ, ಮೂಕೋಂಡ ನಿತಿನ್ ಕುಶಾಲಪ್ಪ, ಲೇಖಕಿ ಐಚಂಡ ರಶ್ಮಿ ಮೇದಪ್ಪ, ಮುಕ್ಕಾಟಿರ ವಿನಯ್ , ಕುಲ್ಲೇಟಿರ ಅಜಿತ್ ನಾಣಯ್ಯ ಹಾಗೂ ಕೊಡವ ಮಕ್ಕಡ ಕೂಟದ ಕಾರ್ಯದರ್ಶಿ ಪುತ್ತರಿರ ಕರುಣ್ ಕಾಳಯ್ಯ ಉಪಸ್ಥಿತರಿದ್ದರು. *ಮೂಕೋಂಡ ಪುಷ್ಪ ದಮಯಂತಿ ಪೂಣಚ್ಚ ಅವರ ಪರಿಚಯ* ಇವರ ಮೂಲ ಹೆಸರು ದಮಯಂತಿ, ಇವರು ಹುಟ್ಟಿ ಬೆಳೆದ ಊರು ಕೊಡಗು ಜಿಲ್ಲೆಯ ವಿರಾಜಪೇಟೆಯ ಅಮ್ಮತಿ ಒಂಟಿಯಂಗಡಿ, ಇವರ ತಂದೆ ಮುಕ್ಕಾಟಿರ ಬಿ.ಮೇರಿ ಮಂದಣ್ಣ ಹಾಗೂ ತಾಯಿ ಬೋಜಮ್ಮ. ಪುಷ್ಪ ದಮಯಂತಿ ಪೂಣಚ್ಚ ಅವರು ಮಡಿಕೇರಿಯ ಸಂತ ಜೋಸೆಫ್ ಕಾನ್ವೆಂಟ್ ನಲ್ಲಿ ಹೈಸ್ಕೂಲ್ ವಿದ್ಯಾಭ್ಯಾಸವನ್ನು ಮುಗಿಸಿ, ಮಡಿಕೇರಿಯ ಸೀನಿಯರ್ ಕಾಲೇಜ್ ನಲ್ಲಿ ಬಿ.ಎಸ್ಸಿ. ಡಿಗ್ರಿಯನ್ನು ಪಡೆದರು. ನಂತರ ವಿರಾಜಪೇಟೆಯ ಸರ್ವೋದಯ ವಿಲೇಜ್ನಲ್ಲಿ ಬಿ.ಎಡ್. ಮುಗಿಸಿದರು. ಇತ್ತೀಚೆಗೆ 2024ರಲ್ಲಿ ಮೈಸೂರಿನ ಕುವೆಂಪು ಮುಕ್ತ ವಿಶ್ವ ವಿದ್ಯಾಲಯದಿಂದ ಕನ್ನಡ ಎಂ.ಎ. ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪುಸ್ತಕಗಳನ್ನು ಓದುವುದು ಹಾಡುಗಳನ್ನು ಕೇಳುವುದು, ಕತೆ, ಕವನಗಳನ್ನು ಬರೆಯುವುದು, ವರ್ಣಚಿತ್ರಗಳನ್ನು ರಚಿಸುವುದು ಮತ್ತು ಪರಿಸರದ ಬಗ್ಗೆ ಕಾಳಜಿ ವಹಿಸುವುದು ಇವರ ಹವ್ಯಾಸ. ಪುಷ್ಪ ದಮಯಂತಿ ಪೂಣಚ್ಚ ಅವರು ಮೂಕೋಂಡ ಪೂಣಚ್ಚ ಅವರನ್ನು ವಿವಾಹವಾಗಿ ಬೆಂಗಳೂರಿನಲ್ಲಿ ನೆಲಸಿದ್ದಾರೆ. ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿ ಪ್ರಸ್ತುತ ನಿವೃತ್ತಿ ಜೀವನ ಸಾಗಿಸುತ್ತಿದ್ದಾರೆ. ಇವರು ಹಲವು ಪತ್ರಿಕೆಗಳಿಗೆ ಕವನ, ಕಥೆಗಳನ್ನು ಬರೆದಿದ್ದಾರೆ, ಅಲ್ಲದೆ ಕೆಲವು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಇವರಿಗೆ ಪುತ್ರ ಮೂಕೋಂಡ ನಿತಿನ್ ಕುಶಾಲಪ್ಪ ಹಾಗೂ ಪುತ್ರಿ ನಿಲನ್ ಸೋಮಯ್ಯ (ಚಕ್ಕೇರ) ಇದ್ದಾರೆ. ‘ನೆನಪಿನ ಅಲೆ’ ಯಲ್ಲಿ ಮಾನವ ಧರ್ಮ, ಮಾನವ ಕರ್ಮಫಲ, ಅತಿಯಾಸೆ, ವಂಚನೆ, ಕರ್ಮ ಫಲದ ಮೇಲೆ ಹಕ್ಕು ಸಾಧನೆ ಮುಂತಾದ ವಿಚಾರಗಳನ್ನು ಅಳವಡಿಸಿಕೊಳ್ಳಲಾಗಿದೆ. ‘ಕೊಡಗಿನ ವಿಶೇಷತೆಯ ಸಮಗ್ರ ಸಿರಿ’ ಯಲ್ಲಿ ಹಚ್ಚ ಹಸಿರಿನ ಬೆಟ್ಟ ಗುಡ್ಡದಿಂದ ಕೂಡಿದ ಸಮೃದ್ಧಿಯ ನಾಡು ಕೊಡಗು, ಕೊಡಗಿನ ಸಂಸ್ಕೃತಿ ಆಚಾರ, ವಿಚಾರ ಮತ್ತು ವಿಶಿಷ್ಟತೆ, ಪ್ರಕೃತಿ ಸೌಂದರ್ಯ, ಪದ್ಧತಿ, ಹಬ್ಬ, ಸಾಧನೆ, ಶೌರ್ಯ ಮುಂತಾದ ವಿಷಯಗಳ ಮೇಲೆ ಬೆಳಕು ಚೆಲ್ಲಲಾಗಿದೆ.









