ಮಡಿಕೇರಿ, NEWS DESK ಫೆ.19 : ಹೊದ್ದೂರು ಗ್ರಾಮದ ಕಬಡಗೇರಿಯ ನಿವೇಶನ ರಹಿತ 47 ಕುಟುಂಬಗಳಿಗೆ ಶಾಸಕರಾದ ಡಾ.ಮಂತರ್ ಗೌಡ ಅವರು ಹಕ್ಕುಪತ್ರ ವಿತರಿಸಿದರು. ಹಾಗೆಯೇ ಹೊದ್ದೂರು ಗ್ರಾಮದ ಪಾಲೆಮಾಡಿನ 14 ಕುಟುಂಬಗಳಿಗೆ 94ಸಿ ರಡಿ ಹಕ್ಕುಪತ್ರವನ್ನು ಶಾಸಕರು ವಿತರಿಸಿದರು. ಹೊದ್ದೂರು ಗ್ರಾ.ಪಂ.ವ್ಯಾಪ್ತಿಯಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ನಿವೇಶನ ಹಕ್ಕುಪತ್ರವನ್ನು ವಿತರಿಸಿದರು. ಹೊದವಾಡ ಗ್ರಾಮದ ಅಂಬಲ ಅಂಗನವಾಡಿ ಕೇಂದ್ರವನ್ನು ಇದೇ ಸಂದರ್ಭದಲ್ಲಿ ಶಾಸಕರು ಉದ್ಘಾಟಿಸಿದರು. ಹಾಗೆಯೇ ಹೊದ್ದೂರು ಗ್ರಾ.ಪಂ.ವ್ಯಾಪ್ತಿಯಲ್ಲಿ ವಿವಿಧ ಸಂಪರ್ಕ ರಸ್ತೆಗೆ ಭೂಮಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರಾದ ಡಾ.ಮಂತರ್ ಗೌಡ ಅವರು ನಿವೇಶನ ನೀಡಲಾಗಿರುವ ಕುಟುಂಬಗಳಿಗೆ ಮನೆ ನಿರ್ಮಿಸಿಕೊಡಲು ಪ್ರಯತ್ನಿಸಲಾಗುವುದು ಎಂದರು.

ಹೊದ್ದೂರಿನ ಕಬಡಗೇರಿಗೆ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೆಸರನ್ನು ಇಡುವಂತಾಗಬೇಕು ಎಂದು ಸಲಹೆ ಮಾಡಿದ ಶಾಸಕರು ಬಡವರ ಶ್ರೇಯೋಭಿವೃದ್ಧಿಗೆ ಇನ್ನಷ್ಟು ಅಭಿವೃದ್ಧಿ ಕೆಲಸ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಬಡಾವಣೆ ಸಮಗ್ರ ಅಭಿವೃದ್ಧಿಗೆ ವಿವಿಧ ಇಲಾಖೆಗಳ ಮೂಲಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು. ಆ ನಿಟ್ಟಿನಲ್ಲಿ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಂಡು ಮುಂದೆ ಬರಲು ಪ್ರಯತ್ನಿಸಬೇಕು ಎಂದು ಶಾಸಕರು ನುಡಿದರು. ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಮಾತನಾಡಿ ಶಾಸಕರ ನಿರಂತರ ಪ್ರಯತ್ನದಿಂದ ನಿವೇಶನ ಹಕ್ಕುಪತ್ರ ದೊರೆತಿದೆ. ಆ ನಿಟ್ಟಿನಲ್ಲಿ ಸರಿಯಾಗಿ ಬಳಸಿಕೊಂಡು ಅಭಿವೃದ್ಧಿಯತ್ತ ಮುನ್ನಡೆಯಬೇಕು ಎಂದರು.

ಗ್ರಾ.ಪಂ.ಸದಸ್ಯರಾದ ಪಾಲೆಮಾಡು ಪೊಣ್ಣಪ್ಪ ಅವರು ಮಾತನಾಡಿ ಶಾಸಕರು ನುಡಿದಂತೆ ನಡೆದಿದ್ದಾರೆ ಎಂದು ಅವರು ಹೇಳಿದರು. ಗ್ರಾ.ಪಂ.ಅಧ್ಯಕ್ಷರಾದ ಹಂಸ, ತಹಶೀಲ್ದಾರ್ ಶ್ರೀಧರ, ತಾ.ಪಂ.ಇಒ ಶೇಖರ್, ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷರಾದ ಮಂದ್ರೀರ ಮೋಹನ್ ದಾಸ್, ಗ್ರಾ.ಪಂ.ಉಪಾಧ್ಯಕ್ಷರಾದ ಅನುರಾಧ, 15 ಅಂಶಗಳ ಕಾರ್ಯಕ್ರಮದ ಸದಸ್ಯರಾದ ಹನೀಫ್, ಗ್ರಾ.ಪಂ.ಪಿಡಿಒ ವತ್ಸಲ, ಅಬ್ದುಲ್ಲಾ, ಗ್ರಾಮ ಆಡಳಿತ ಅಧಿಕಾರಿ ಸಂತೋಷ್ ಕುಮಾರ್ ಪಾಟೀಲ್, ಪ್ರಮುಖರಾದ ತೆನ್ನಿರಾ ಮೈನಾ, ಮೋಹನ್, ಅಫ್ರು ರವೀಂದ್ರ, ರಫೀಕ್, ಚೌರೀರ ಅನಿತಾ, ಹಮೀದ್, ಕುಸುಮಾವತಿ, ಲಕ್ಷ್ಮಿ, ಕಡ್ಲೇರ ಟೈನಿ, ಮೊಯಿದು, ಕೆ.ಆರ್.ಅನಿತಾ, ಇತರರು ಇದ್ದರು.








