
ಕುಶಾಲನಗರ ಫೆ.25 NEWS DESK : ಕುಶಾಲನಗರ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಭಾಗಗಳಲ್ಲಿ ಅನಗತ್ಯ ವಿದ್ಯುತ್ ಕಡಿತ ಗೊಳಿಸಲಾಗುತ್ತಿದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ (KRS) ಪಕ್ಷದ ಕೊಡಗು ಜಿಲ್ಲಾ ಸಂಚಾಲಕರಾದ ಎಂ.ಕೆ.ಆಶಿಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು, ವಿದ್ಯುತ್ ಕಡಿತದಿಂದ ಕಂಗೆಟ್ಟ ಸಾರ್ವಜನಿಕರು ಕಾರಣ ಕೇಳಲು ಸೆಸ್ಕ್ ಕಚೇರಿಗೆ ಅಥವಾ ಅಧಿಕಾರಿಗಳಿಗೆ ಕರೆ ಮಾಡಿದರೆ ಸರಿಯಾಗಿ ಪ್ರತಿಕ್ರಿಯಿದಿರುವುದು ಖಂಡನೀಯ ಎಂದರು. ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಗಳು ಹೊಸ್ತಿಲಲ್ಲಿವೆ. ಇಂತಹ ಸೂಕ್ಷ್ಮ ಸಮಯದಲ್ಲಿ ರಾತ್ರಿ ಮತ್ತು ಮುಂಜಾನೆ ವೇಳೆಯಲ್ಲಿ ದಿಢೀರ್ ವಿದ್ಯುತ್ ಕಡಿತ ಮಾಡುತ್ತಿರುವುದು ವಿದ್ಯಾರ್ಥಿಗಳ ಏಕಾಗ್ರತೆಯನ್ನು ಹಾಳುಗೆಡವುತ್ತಿದೆ. ಅಧಿಕಾರಿಗಳ ಈ ಅವೈಜ್ಞಾನಿಕ ನಡೆಯಿಂದ ವಿದ್ಯಾರ್ಥಿಗಳ ಭವಿಷ್ಯ ಕತ್ತಲಿಗೆ ತಳ್ಳಲ್ಪಡುತ್ತಿದೆ. ಪ್ರಸ್ತುತ ಪವಿತ್ರ ರಂಜಾನ್ ಮಾಸ ನಡೆಯುತ್ತಿದ್ದು, ಮುಸ್ಲಿಂ ಬಾಂಧವರ ಉಪವಾಸದ ಸಮಯ ಹಾಗೂ ಸಂಜೆ ಇಫ್ತಾರ್ ಪ್ರಾರ್ಥನಾ ವೇಳೆಯಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗುತ್ತಿರುವುದು ಜನರ ಧಾರ್ಮಿಕ ಆಚರಣೆಗಳಿಗೆ ತೀವ್ರ ತೊಂದರೆ ಉಂಟುಮಾಡುತ್ತಿದೆ ಎಂದು ದೂರಿದರು. ನಿರಂತರ ಪವರ್ ಕಟ್ನಿಂದಾಗಿ ಹಾಲು, ಮಾಂಸದ ವ್ಯಾಪಾರಸ್ಥರು, ಔಷಧಾಲಯಗಳು ಹಾಗೂ ಸಣ್ಣ ವ್ಯಾಪಾರಿಗಳು ಪ್ರತಿದಿನ ಸಾವಿರಾರು ರೂಪಾಯಿ ನಷ್ಟ ಅನುಭವಿಸುತ್ತಿದ್ದಾರೆ. ಪೂರ್ವ ಮಾಹಿತಿಯಿಲ್ಲದ ಈ ಕ್ರಮದಿಂದ ಆಗುವ ನಷ್ಟವನ್ನು ಭರಿಸುವವರು ಯಾರು ಎಂದು ಪ್ರಶ್ನಿಸಿದರು. “ಸೆಸ್ಕ್ ಇಲಾಖೆಯು ಕೇವಲ ಬಿಲ್ ವಸೂಲಿ ಮಾಡುವುದಕ್ಕಷ್ಟೇ ಸೀಮಿತವಾಗಬಾರದು. ಅನಿವಾರ್ಯವಾಗಿ ವಿದ್ಯುತ್ ಕಡಿತ ಮಾಡುದಿದ್ದಲ್ಲಿ ಮುಂಚಿತವಾಗಿ ಮಾಹಿತಿ ನೀಡುವ ಜವಾಬ್ದಾರಿಯನ್ನು ಅಧಿಕಾರಿಗಳು ಪ್ರದರ್ಶಿಸಬೇಕು. ವಿದ್ಯುತ್ ಕಡಿತ ಹಾಗೂ ಉಡಾಫೆ ವರ್ತನೆ ಮುಂದುವರೆದರೆ ವಿದ್ಯಾರ್ಥಿಗಳು, ವ್ಯಾಪಾರಸ್ಥರು ಹಾಗೂ ಸಾರ್ವಜನಿಕರ ಬೆಂಬಲದೊಂದಿಗೆ ಕುಶಾಲನಗರದ ಸೆಸ್ಕ್ ಕಚೇರಿಗೆ ಮುತ್ತಿಗೆ ಹಾಕಿ, ಕಚೇರಿಯ ಮುಂಭಾಗ ಪ್ರತಿಭಟನೆ ನಡೆಸುವುದಾಗಿ ಎಂ.ಕೆ.ಆಶಿಕ್ ಎಚ್ಚರಿಕೆ ನೀಡಿದರು.









