ಬೆಂಗಳೂರು: ರಿಷಬ್ ಶೆಟ್ಟಿ ಅಭಿನಯದ ಜಾಗತಿಕ ಖ್ಯಾತಿಯ ‘ಕಾಂತಾರಾ’ ಚಿತ್ರದ ದೈವಾರಾಧನೆಯ ದೃಶ್ಯಗಳನ್ನು ಅಪಹಾಸ್ಯ ಮಾಡಿದ ಆರೋಪ ಎದುರಿಸುತ್ತಿರುವ ಬಾಲಿವುಡ್ ನಟ ರಣವೀರ್ ಸಿಂಗ್ ವಿರುದ್ಧ ಕರ್ನಾಟಕ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. “ನೀವು ಸೂಪರ್ ಸ್ಟಾರ್ ಇರಬಹುದು ಅಥವಾ ಯಾರೇ ಇರಬಹುದು, ಜನರ ಧಾರ್ಮಿಕ ಭಾವನೆಗಳ ವಿಚಾರದಲ್ಲಿ ಹಗುರವಾಗಿ ಮಾತನಾಡುವುದು ಸಲ್ಲದು” ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಮಂಗಳವಾರ ಖಡಕ್ ಎಚ್ಚರಿಕೆ ನೀಡಿದೆ.
ಪ್ರಕರಣದ ಹಿನ್ನೆಲೆ ಏನು?
ಗೋವಾದಲ್ಲಿ ನಡೆದ ಅಂತರಾಷ್ಟ್ರೀಯ ಚಲನಚಿತ್ರೋತ್ಸವದ (IFFI) ವೇದಿಕೆಯೊಂದರಲ್ಲಿ ರಣವೀರ್ ಸಿಂಗ್ ಅವರು ಕಾಂತಾರಾ ಚಿತ್ರದ ದೈವದ ಪಾತ್ರವನ್ನು ‘ಫೀಮೇಲ್ ಗೋಸ್ಟ್’ (ಮಹಿಳಾ ದೆವ್ವ) ಎಂದು ಕರೆದು ಮಿಮಿಕ್ರಿ ಮಾಡಿದ್ದರು ಎಂಬ ಆರೋಪವಿದೆ. ಈ ಹೇಳಿಕೆಯು ಕರಾವಳಿಯ ದೈವಾರಾಧನೆ ಮತ್ತು ಭಕ್ತರ ಭಾವನೆಗೆ ಧಕ್ಕೆ ತಂದಿದೆ ಎಂದು ಬೆಂಗಳೂರಿನ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.

ಹೈಕೋರ್ಟ್ ಪೀಠದ ಕಟು ಮಾತುಗಳು
ವಿಚಾರಣೆ ವೇಳೆ ರಣವೀರ್ ಸಿಂಗ್ ಅವರ ವರ್ತನೆಯನ್ನು ತರಾಟೆಗೆ ತೆಗೆದುಕೊಂಡ ನ್ಯಾಯಾಲಯದ ಪ್ರಮುಖ ಅಂಶಗಳು ಇಲ್ಲಿವೆ:
-
ಜವಾಬ್ದಾರಿಯುತ ಸ್ಥಾನ: ರಣವೀರ್ ಸಿಂಗ್ಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಇಂತಹ ಪ್ರಭಾವಿ ನಟರು ವೇದಿಕೆ ಮೇಲೆ ಮಾತನಾಡುವಾಗ ಜವಾಬ್ದಾರಿಯಿಂದ ಇರಬೇಕು. ದೈವವನ್ನು ದೆವ್ವ ಎನ್ನಲಾಗದು.
-
ಇಂಟರ್ನೆಟ್ ಮರೆಯುವುದಿಲ್ಲ: “ನೀವು ಕ್ಷಮೆ ಕೋರಿರಬಹುದು, ಆದರೆ ಆಡದ ಮಾತುಗಳು ಹೋದ ಮೇಲೆ ಮರಳುವುದಿಲ್ಲ. ಜನರು ಮರೆತರೂ ಇಂಟರ್ನೆಟ್ ಎಂದಿಗೂ ಮರೆಯುವುದಿಲ್ಲ” ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟರು.
-
ದೈವದ ಅರಿವಿರಲಿ: ರಿಷಬ್ ಶೆಟ್ಟಿ ಅವರು ಶಕ್ತಿ ದೇವತೆ ಚಾಮುಂಡಿಯ ರೂಪವಾದ ದೈವದ ಪಾತ್ರ ಮಾಡಿದ್ದಾರೆ. ಅದರ ಬಗ್ಗೆ ಅರಿವಿಲ್ಲದೆ ಹಗುರವಾಗಿ ಮಾತನಾಡಬಾರದು.
ಕೋರ್ಟ್ನಲ್ಲಿ ನಡೆದ ವಾದ-ಪ್ರತಿವಾದ
-
ರಣವೀರ್ ಪರ ವಕೀಲರು: ಹಿರಿಯ ವಕೀಲ ಸಜನ್ ಪೂವಯ್ಯ ಅವರು ರಣವೀರ್ ಸಿಂಗ್ ಪರ ವಾದ ಮಂಡಿಸಿ, “ನಟನ ಉದ್ದೇಶ ರಿಷಬ್ ಶೆಟ್ಟಿ ಅವರ ನಟನೆಯನ್ನು ಹೊಗಳುವುದಾಗಿತ್ತು. ಬಳಸಿದ ಪದಗಳ ಬಗ್ಗೆ ಈಗಾಗಲೇ ಕ್ಷಮೆ ಯಾಚಿಸಲಾಗಿದೆ ಮತ್ತು ತನಿಖೆಗೆ ಸಂಪೂರ್ಣ ಸಹಕಾರ ನೀಡಲಾಗುವುದು” ಎಂದು ತಿಳಿಸಿದರು.
-
ದೂರುದಾರರ ವಾದ: “ರಿಷಬ್ ಶೆಟ್ಟಿ ಅವರೇ ವೇದಿಕೆ ಮೇಲೆ ಆ ರೀತಿ ಮಾತನಾಡದಂತೆ ಕೇಳಿಕೊಂಡರೂ ರಣವೀರ್ ಸಿಂಗ್ ಮುಂದುವರಿಸಿದರು. ರಣವೀರ್ ಪತ್ನಿ ದೀಪಿಕಾ ಪಡುಕೋಣೆ ಅವರೂ ಕನ್ನಡಿಯವರೇ ಆಗಿದ್ದು, ನಟ ಕನ್ನಡದ ಸಂಸ್ಕೃತಿ ತಿಳಿದು ಮಾತನಾಡಬೇಕಿತ್ತು” ಎಂದು ದೂರುದಾರರ ಪರ ವಕೀಲರು ವಾದಿಸಿದರು.
ನ್ಯಾಯಾಲಯದ ಆದೇಶ
ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು, ಮುಂದಿನ ಆದೇಶದವರೆಗೆ ನಟ ರಣವೀರ್ ಸಿಂಗ್ ವಿರುದ್ಧ ಯಾವುದೇ ಬಲವಂತದ ಕ್ರಮ ಜರುಗಿಸದಂತೆ ಪೊಲೀಸರಿಗೆ ನಿರ್ದೇಶನ ನೀಡಿದೆ. ಅರ್ಜಿಯ ಮುಂದಿನ ವಿಚಾರಣೆಯನ್ನು ಮುಂದಿನ ಸೋಮವಾರಕ್ಕೆ ಮುಂದೂಡಲಾಗಿದೆ.







