
ಮಡಿಕೇರಿ ಫೆ.26 NEWS DESK : ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್ದಿ ಹಿನ್ನೆಲೆಯಲ್ಲಿ ಹಿಂದೂ ಸಂಸ್ಕೃತಿಯ ಸಂರಕ್ಷಣೆಯ ಧ್ಯೇಯದೊಂದಿಗೆ ಫೆ.28 ರಂದು ಚೆಟ್ಟಿಮಾನಿಯಲ್ಲಿ ಹಿಂದೂ ಸಂಗಮ ಕಾರ್ಯಕ್ರಮ ನಡೆಯಲಿದೆ. ಚೆಟ್ಟಿಮಾನಿ ಹಿಂದೂ ಸಂಗಮ ಆಯೋಜನಾ ಸಮಿತಿಯ ಸಂಚಾಲಕರಾದ ವಿವೇಕ್ ಕೆದಂಬಾಡಿ ಅವರು ಈ ಕುರಿತು ಮಾತನಾಡಿ, ಹಿಂದೂ ಸಂಗಮದ ಅಂಗವಾಗಿ ಅಂದು ಬೆಳಗ್ಗೆ ಶೋಭಾಯಾತ್ರೆ ಮತ್ತು ಚೆಟ್ಟಿಮಾನಿ ಆಟದ ಮೈದಾನದಲ್ಲಿ ಸಮಾವೇಶ ನಡೆಯಲಿದೆಯೆಂದು ತಿಳಿಸಿದರು. ಸಮಿತಿಯ ಪ್ರಮುಖರಾದ ಶರತ್ ಪದಕಲ್ಲು ಮಾತನಾಡಿ, ಅಂದು ಬೆಳಗ್ಗೆ 9.30 ಗಂಟೆಗೆ ಪದಕಲ್ಲು ಗ್ರಾಮದ ಶ್ರೀ ಭಗವತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.ಬಳಿಕ ಕುಂದಚೇರಿ ಗ್ರಾಮ ಪಂಚಾಯ್ತಿಗೆ ಒಳಪಟ್ಟ ಪದಕಲ್ಲು, ಕುಂದಚೇರಿ, ಕೋಪಟ್ಟಿ, ಚರಂಡೇಟಿ ಮತ್ತು ಸಿಂಗತ್ತೂರು ಗ್ರಾಮ ವ್ಯಾಪ್ತಿಯ ಹಿಂದೂ ಬಾಂಧವರು ಸಮಾವೇಶಗೊಳ್ಳುವ ಮೂಲಕ ಬೃಹತ್ ಶೋಭಾಯಾತ್ರೆ ನಡೆಯಲಿದೆ. ಇದರಲ್ಲಿ ಕೇರಳದ ಚಂಡೆ ವಾದ್ಯ, ಮಕ್ಕಳ ನೃತ್ಯ ತಂಡ, ಕಲಶ ಹೊತ್ತ ಮಹಿಳೆಯರು, ವಿವಿಧ ಸ್ತಬ್ಧ ಚಿತ್ರಗಳು ಪಾಲ್ಗೊಳ್ಳಲಿರುವುದಾಗಿ ತಿಳಿಸಿದರು. ಪದಕಲ್ಲುವಿನಿಂದ ಚೆಟ್ಟಿಮಾನಿಯ ಆಟದ ಮೈದಾನದವರೆಗೆ ಶೋಭಾಯಾತ್ರೆ ನಡೆದ ಬಳಿಕ ನಿವೃತ್ತ ಉಪನ್ಯಾಸಕರಾದ ದಾಯನ ರಾಮಕೃಷ್ಣ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾವೇಶದಲ್ಲಿ ಮಹೇಶ್ ಕಡಗದಾಳು ಅವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆಂದು ವಿವರಗಳನ್ನಿತ್ತರು. ಸುದ್ದಿಗೋಷ್ಠಿಯಲ್ಲಿ ಹಿಂದೂ ಸಂಗಮ ಆಯೋಜನಾ ಸಮಿತಿಯ ಸ್ವಯಂ ಸೇವಕರಾದ ಜೀವನ್ ಕೆದಂಬಾಡಿ, ಶಿವಕುಮಾರ್ ಕುದುಪಜೆ, ಶರತ್ ಶೆಟ್ಟಿ, ಸೋಮಪ್ಪ ಪೂಜಾರಿ ಉಪಸ್ಥಿತರಿದ್ದರು.








