
ಮಡಿಕೇರಿ NEWS DESK ಏ.5 : ಕೊಡಗಿನ ಅತಿ ಎತ್ತರದ ತಡಿಯಂಡಮೋಳ್ ಬೆಟ್ಟದಲ್ಲಿ ಚಾರಣಕ್ಕೆ ತೆರಳಿ ನಾಪತ್ತೆಯಾಗಿದ್ದ ಕೇರಳ ಕೊಚ್ಚಿ ಮೂಲದ ಜಿ.ಎಸ್.ಶರಣ್ಯ(36) ಕೊನೆಗೂ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ. ಸ್ಥಳೀಯ ಕಕ್ಕಬ್ಬೆ ಯವಕಪಾಡಿ ಗ್ರಾಮದ ಕುಡಿಯ ಸಮುದಾಯದ ಯುವಕರ ರಕ್ಷಣಾ ತಂಡ ಶರಣ್ಯ ಅವರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ತಡಿಯಂಡಮೋಳ್ ಬೆಟ್ಟದ ಟ್ರಕ್ಕಿಂಗ್ ಪಾಯಿಂಟ್ ನಿಂದ 3.5 ಕಿ.ಮೀ ದೂರದ ಮಲೆ ತಿರಿಕೆ ಎಂಬ ಅರಣ್ಯದೊಳಗೆ ಸುರಕ್ಷಿತವಾಗಿದ್ದ ಶರಣ್ಯ ಅವರನ್ನು ಕುಡಿಯ ಸಮುದಾಯದ ಯುವಕರ ರಕ್ಷಣಾ ತಂಡ ಪತ್ತೆ ಮಾಡಿ ಕರೆ ತಂದಿದ್ದಾರೆ.
ತಡಿಯಂಡಮೋಳ್ ಬೆಟ್ಟದ ಸಂಪೂರ್ಣ ಮಾಹಿತಿ ಹೊಂದಿದ್ದ ಸ್ಥಳೀಯ ಕುಡಿಯ ಬುಡಕಟ್ಟು ಸಮುದಾಯದ ಯುವಕರ ತಂಡ ಇಂದು ಸಂಜೆ ವೇಳೆಗೆ ಮಲೆ ತಿರಿಕೆ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಶರಣ್ಯ ಇರುವುದನ್ನು ಪತ್ತೆ ಮಾಡುವಲ್ಲಿ ಸಫಲರಾಗಿದ್ದಾರೆ. ಬಳಿಕ ಯುವಕರು ರಕ್ಷಣಾ ತಂಡಗಳಿಗೆ ಮಾಹಿತಿ ರವಾನಿಸಿದ್ದಾರೆ. ಆಹಾರವಿಲ್ಲದೆ ಬಳಲಿದ್ದ ಶರಣ್ಯ ಅವರನ್ನು ಉಪಚರಿಸಿದ ವಿವಿಧ ಇಲಾಖೆಗಳ ರಕ್ಷಣಾ ತಂಡ ಟ್ರಕ್ಕಿಂಗ್ ಪಾಯಿಂಟ್ ಪ್ರವೇಶ ದ್ವಾರಕ್ಕೆ ಕರೆ ತಂದರು. *ಕುಡಿಯರ ಹರಕೆ* ಕಳೆದ 3 ದಿನಗಳಿಂದ ತಡಿಯಂಡಮೋಳ್ ಬೆಟ್ಟದ ಅರಣ್ಯದೊಳಗೆ ನಿಗೂಢವಾಗಿ ನಾಪತ್ತೆಯಾಗಿದ್ದ ಶರಣ್ಯ ಅವರು ಸುರಕ್ಷಿತವಾಗಿ ಮರಳಬೇಕು ಎಂದು ಸ್ಥಳೀಯ ಕುಡಿಯ ಸಮುದಾಯದ ಪ್ರಮುಖರು ತಮ್ಮ ಆರಾಧ್ಯ ದೈವಗಳ ಮೊರೆ ಹೋಗಿದ್ದರು. ಮಲೆ ಬೀರ, ಮಲೆ ತಮ್ಮಚ್ಚ, ಚೌಂಡಿ ದೈವಗಳಿಗೆ ವಿಶೇಷ ಪೂಜೆ ಸಲ್ಲಿಸಿ ಶರಣ್ಯ ಸುರಕ್ಷಿತವಾಗಿ ಪತ್ತೆಯಾಗಬೇಕು. ಹುಡುಕಾಟ ನಡೆಸಲು ಕಾಡಿಗೆ ತೆರಳಿದ ಗ್ರಾಮಸ್ಥರಿಗೆ ಯಾವುದೇ ಕಾಡು ಪ್ರಾಣಿಗಳಿಂದ ತೊಂದರೆಯಾಗಬಾರದು ಎಂದು ದೀಪಕ್ಕೆ ಅಕ್ಕಿ ಹಾಕಿ ಮುಂದಿನ ಹಬ್ಬದ ಸಂದರ್ಭ ಹರಕೆ ನೀಡುವುದಾಗಿ ಪ್ರಾರ್ಥಿಸಿದ್ದರು.
ಗ್ರಾಮದಲ್ಲಿ ಹಬ್ಬದ ಕಟ್ಟು ಬಿದ್ದಿದೆ, ಇಂತಹ ಸಂದರ್ಭ ತಿಳಿದು ತಿಳಿಯದೆಯೋ ಏನಾದರೂ ತಪ್ಪು ನಡೆದಿದ್ದರೆ ಮನ್ನಿಸುವಂತೆ ದೈವಗಳಲ್ಲಿ ಬೇಡಿಕೊಂಡಿದ್ದರು. ಕಾಕತಾಳೀಯ ಎಂಬoತೆ ಕುಡಿಯ ಸಮುದಾಯದ ಯುವಕರ ತಂಡಕ್ಕೆ ಶರಣ್ಯ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ. ಆ ಮೂಲಕ ಸಮುದಾಯದ ಪ್ರಾರ್ಥನೆಗೆ ಆರಾಧ್ಯ ದೈವಗಳು ಹರಸಿದಂತಾಗಿದೆ ಎಂದು ಸ್ಥಳೀಯರು ಹರ್ಷ ವ್ಯಕ್ತಪಡಿಸಿದ್ದಾರೆ.
*ಏಕಾಂಗಿ ಶರಣ್ಯ*
ಕಕ್ಕಬ್ಬೆ ಸಮೀಪದ ಕಬ್ಬಿನಕಾಡುವಿನ ಹೋಂಸ್ಟೇಗೆ ಏ.1ರಂದು ಬಂದಿದ್ದ ಧೈರ್ಯವಂತೆ ಶರಣ್ಯ ಏ.2ರಂದು ತಡಿಯಂಡಮೋಳ್ ಬೆಟ್ಟಕ್ಕೆ ಟ್ರಕ್ಕಿಂಗ್ ತೆರಳಿದ್ದರು. ಏಕಾಂಗಿಯಾಗಿ ಟ್ರಕ್ಕಿಂಗ್ ಬುಕ್ ಮಾಡಿದ್ದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಇತರ ಚಾರಣಿಗರ ಜೊತೆಯಲ್ಲಿ ಶರಣ್ಯ ಅವರನ್ನು ಬೆಟ್ಟಕ್ಕೆ ತೆರಳಲು ಅನುಮತಿ ನೀಡಿದ್ದರು. ಶರಣ್ಯ ಜೊತೆಯಲ್ಲಿ ಟ್ರಕ್ಕಿಂಗ್ ತೆರಳಿದ್ದ ಎಲ್ಲಾ ಚಾರಣಿಗರು ಸಂಜೆ ಮರಳಿದ್ದರೂ ಶರಣ್ಯ ಮಾತ್ರ ವಾಪಾಸಾಗಿರಲಿಲ್ಲ.








