
ಮಡಿಕೇರಿ ಏ.17 NEWS DESK : ನಗರ ವ್ಯಾಪ್ತಿಯ ಕಸ ವಿಲೇವಾರಿ ಮಾಡುವ ವಾಹನಗಳಲ್ಲೆ, ಕುಡಿಯುವ ನೀರಿನ ಘಟಕಗಳಿಗೆ ಆಲಂ ಮತ್ತು ಬ್ಲೀಚಿಂಗ್ ಪೌಡರ್ ಸಾಗಾಟ ಮಾಡಲಾಗುತ್ತಿದೆಯೆಂದು ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಮತ್ತು ಮಡಿಕೇರಿ ಬ್ಲಾಕ್ ಯೂತ್ ಕಾಂಗ್ರೆಸ್ ನಗರಸಭೆಯ ವಿರುದ್ಧ ಗಂಭೀರ ಆರೋಪ ಮಾಡಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೋಚನ ಚೇತನ್ ಮಾತನಾಡಿ, ಗುರುವಾರ ರಾತ್ರಿ ನಗರಸಭಾ ಕಚೇರಿಯ ಮುಂಭಾಗದಲ್ಲೆ ಇದ್ದ ಕಸವಿಲೇವಾರಿ ವಾಹನಕ್ಕೆ ಕಸ ಹಾಕಲು ಬಂದ ವರ್ತಕರಿಗೆ, ಕಸ ಹಾಕದಂತೆ ಪೌರ ಕಾರ್ಮಿಕರು ತಡೆಯುವುದರೊಂದಿಗೆ ಗಲಾಟೆ ಉಂಟಾಗಿತ್ತೆಂದು ತಿಳಿಸಿದರು. ಈ ಸಂದರ್ಭ ಅಲ್ಲಿದ್ದ ಕಸವಿಲೇವಾರಿ ವಾಹನವನ್ನು ಪರಿಶೀಲಿಸಿದಾಗ, ವರ್ತಕರು ತಂದು ಹಾಕಿದ ಕಸದೊಂದಿಗೆ ನೀರು ಸರಬರಾಜು ಘಟಕಗಳಿಗೆ ಪೂರೈಸುವ ಆಲಂ ಮತ್ತು ಬ್ಲೀಚಿಂಗ್ ಪೌಡರ್ ಇರುವುದು ಕಂಡು ಬಂತು. ಇದೇ ಕಾರಣಕ್ಕಾಗಿ ಪೌರ ಕಾರ್ಮಿಕರು, ನೀರಿನ ಘಟಕಗಳಿಗೆ ಪೂರೈಸುವ ವಾಹನಕ್ಕೆ ಕಸ ಹಾಕಬಾರದೆಂದು ಹೇಳುತ್ತಿದ್ದರೆಂದು ಮಾಹಿತಿ ನೀಡಿದರು. ಈ ಬಗ್ಗೆ ತಾವು ಪೌರ ಕಾರ್ಮಿಕರನ್ನು ಪ್ರಶ್ನಿಸಿದಾಗ, ಈ ಹಿಂದಿನಿಂದಲು ಕಸ ವಿಲೇವಾರಿ ಮಾಡುವ ವಾಹನದಲ್ಲೆ ಆಲಂ ಮತ್ತು ಬ್ಲೀಚಿಂಗ್ ಸಾಗಾಟ ಮಾಡುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ. ಅಂದರೆ, ಇಲ್ಲಿಯವರೆಗೆ ನಗರಸಭೆ ಸಾರ್ವಜನಿಕರಿಗೆ, ಕಸದ ಕೊಂಪೆಯಲ್ಲಿದ್ದ ಆಲಂ ಮತ್ತು ಬ್ಲೀಚಿಂಗ್ ಪೌಡರ್ ಬಳಸಿದ ನೀರಿರಬೇಕೆಂದು ಕೋಚನ ಚೇತನ್ ತೀಕ್ಷ್ಣವಾಗಿ ನುಡಿದರು. :: ರಾಜೀನಾಮೆಗೆ ಆಗ್ರಹ :: ಮಡಿಕೇರಿ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಕವನ್ ಕೊತ್ತೋಳಿ ಮಾತನಾಡಿ, ಕಸದ ವಾಹನದಲ್ಲಿ ನೀರು ಶುದ್ಧೀಕರಣಕ್ಕೆ ಬಳಸುವ ಆಲಂ ಮತ್ತು ಬ್ಲೀಚಿಂಗ್ ಪೌಡರ್ ಸಾಗಾಟ ಮಾಡಿರುವ ಬಗ್ಗೆ ನಗರಸಭಾ ಅಧ್ಯಕ್ಷರು ಸ್ಪಷ್ಟನೆ ನೀಡಬೇಕು. ನಡೆದಿರುವ ಘಟನೆಗೆ ಸಂಬಂಧಿಸಿದಂತೆ ನಗರಸಭಾ ಅಧ್ಯಕ್ಷರು ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರು ತಕ್ಷಣ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು ಮತ್ತು ಸಂಬಂಧಪಟ್ಟ ಅಧಿಕಾರಿಗಳನ್ನು ಶಿಕ್ಷೆಗೆ ಒಳಪಡಿಸಬೇಕೆಂದು ಆಗ್ರಹಿಸಿದರು. :: ನಿರ್ಣಯಕ್ಕೆ ವಿರುದ್ಧ ಕಾಮಗಾರಿ :: ಕಳೆದ ನಗರಸಭಾ ಸಾಮಾನ್ಯ ಸಭೆಯಲ್ಲಿ ಗಾಂಧೀ ಮೈದಾನ ಬಳಿಯ ಕಟ್ಟಡವೊಂದರ ಕಾಮಗಾರಿ ಸ್ಥಗಿತಕ್ಕೆ ನಿರ್ಣಯ ಕೈಗೊಂಡಿತ್ತು. ಆದರೆ, ಅಲ್ಲಿನ ಕಾಮಗಾರಿ ಮೊದಲಿನಂತೆಯೆ ನಡೆಯುತ್ತಿದೆಯೆಂದು ಟೀಕಿಸಿ, ನಗರಸಭೆಯ ನಿರ್ಣಯದಂತೆ ತಕ್ಷಣ ಕಾಮಗಾರಿ ಸ್ಥಗಿತಕ್ಕೆ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಹೋರಾಟ ನಡೆಸಲಾಗುತ್ತದೆಂದು ಎಚ್ಚರಿಸಿದರು. ಸುದ್ದಗೋಷ್ಠಿಯಲ್ಲಿ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷರು ಹಾಗೂ ನಗರಸಭಾ ನಾಮನಿರ್ದೇಶಿತ ಸದಸ್ಯರಾದ ಮುದ್ದುರಾಜು ಉಪಸ್ಥಿತರಿದ್ದರು.









