
ಮಡಿಕೇರಿ ಏ.25 NEWS DESK : ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ, ಕೊಡಗು ಬ್ಯಾರೀಸ್ ವೆಲ್ಫೇರ್ ಟ್ರಸ್ಟ್ನ ಸಹಯೋಗದೊಂದಿಗೆ ಏ.28 ರಂದು ನಗರದಲ್ಲಿ ಕೊಡಗು ಜಿಲ್ಲಾ “ಬ್ಯಾರಿ ಸಾಹಿತ್ಯ ಸಮ್ಮೇಳನ” ನಡೆಯಲಿದೆಯೆಂದು ಅಕಾಡೆಮಿ ಅಧ್ಯಕ್ಷರಾದ ಉಮರ್ ಯು.ಹೆಚ್. ತಿಳಿಸಿದರು. ನಗರದಲ್ಲಿ ಸುದ್ದಿ ಗೋಷ್ಠಿಯಲ್ಲಿ ಸಮ್ಮೇಳನದ ಕುರಿತು ಮಾಹಿತಿಯನ್ನಿತ್ತ ಅವರು, ಬ್ಯಾರಿ ಭಾಷಾ ಹಿರಿಯ ಸಾಹಿತಿ ಬಿ.ಎ. ಷಂಶುದ್ದೀನ್ ಅವರ ಸರ್ವಾಧ್ಯಕ್ಷತೆಯಲ್ಲಿ ಜಿಲ್ಲಾ ಸಮ್ಮೇಳನವು ನಡೆಯಲಿದೆ. ಸಮ್ಮೇಳನದಂದು ಬೆಳಗ್ಗೆ 9.30 ಗಂಟೆಗೆ ನಗರದ ಕ್ರೆಸೆಂಟ್ ಶಾಲೆಯಿಂದ ಸಮ್ಮೇಳನ ನಡೆಯುವ ಕಾವೇರಿ ಹಾಲ್ವರೆಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆಯನ್ನು ನಡೆಸಲಾಗುತ್ತದೆ. ಬಳಿಕ ಧ್ವಜಾರೋಹಣವನ್ನು ತಾನು ನಡೆಸಲಿರುವುದಾಗಿ ಹೇಳಿದರು. ಸಮ್ಮೇಳನವನ್ನು ಬೆಳಿಗ್ಗೆ 10.30ಕ್ಕೆ ಮಾಜಿ ವಿಧಾನ ಪರಿಷತ್ ಸದಸ್ಯರಾದ ಬಿ.ಎಂ.ಫಾರೂಕ್ ಉದ್ಘಾಟಿಸಲಿದ್ದಾರೆ. ಬಿ.ಎ.ಷಂಶುದ್ದೀನ್ ಅವರ ಸಮ್ಮೇಳನಾಧ್ಯಕ್ಷರ ಭಾಷಣದ ಬಳಿಕ, ಹಿರಿಯ ಸಾಹಿತಿ ಮತ್ತು ಚಿಂತಕರಾದ ಎಸ್.ಜಿ.ಸಿದ್ದರಾಮಯ್ಯ ಮುಖ್ಯ ಭಾಷಣ ಮಾಡಲಿದ್ದು, ಹಲ ಗಣ್ಯರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆಂದು ಮಾಹಿತಿಯನ್ನಿತ್ತರು. :: ಚರ್ಚಾ ಗೋಷ್ಠಿ :: ಅಂದು ಮಧ್ಯಾಹ್ನ 2 ರಿಂದ 3 ಗಂಟೆಯವರೆಗೆ ಸಮ್ಮೇಳನಾಧ್ಯಕ್ಷರ ಭಾಷಣದ ಮೇಲೆ ನಡೆಯಲಿರುವ ಚರ್ಚಾಗೋಷ್ಠಿಯಲ್ಲಿ ಪತ್ರಕರ್ತ ಹಂಝ ಮಲಾರ್, ಶಾಹೀನ್ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ತೌಸೀಫ್ ಅಹ್ಮದ್, ಸೋಮವಾರಪೇಟೆ ಸರ್ಕಾರಿ ವೈದ್ಯರಾದ ಡಾ.ಆಫ್ರೀನ್ ಪಾಲ್ಗೊಳ್ಳಲಿದ್ದಾರೆ. ಮಧ್ಯಾಹ್ನ 3 ರಿಂದ 4 ಗಂಟೆಯವರೆಗೆ ಇ.ಸುಲೇಮಾನ್ ಅವರ ಅಧ್ಯಕ್ಷತೆಯಲ್ಲಿ ಬ್ಯಾರಿ ಕವಿಗೋಷ್ಠಿ ನಡೆಯಲಿದೆಯೆಂದು ವಿವರಗಳನ್ನಿತ್ತರು. :: ಸಮಾರೋಪ- ಸನ್ಮಾನ :: ಅಂದು ಸಂಜೆ 4.30 ಗಂಟೆಗೆ ವಿಧಾನಸಭಾ ಅಧ್ಯಕ್ಷರಾದ ಯು.ಟಿ.ಖಾದರ್ ಅವರು ಸಮಾರೋಪ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ.ಶಾಸಕ ಡಾ.ಮಂತರ್ ಗೌಡ ಸಮ್ಮೇಳನದ ಅಂಗವಾಗಿ ನಡೆದ ಸ್ಪರ್ಧೆಗಳ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಿದ್ದಾರೆ. ಶಾಸಕ ಎ.ಎಸ್.ಪೊನ್ನಣ್ಣ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಇದೇ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹನ್ನೊಂದು ಮಂದಿ ಸಾಧಕರನ್ನು ಸನ್ಮಾನಿಸಲಾಗುತ್ತದೆ. ಸಮ್ಮೇಳನದ ವಿಶೇಷ ಆಕರ್ಷಣೆಯಾಗಿ ದಫ್, ಒಪ್ಪನೆ ಪಾಟ್, ಕೋಲ್ಕಲಿ, ಬ್ಯಾರಿ ಹಾಡುಗಳ ಸಂಭ್ರಮ ಮತ್ತು ಬ್ಯಾರಿ ಪ್ರಹಸನವನ್ನು ಹಮ್ಮಿಕೊಳ್ಳಲಾಗಿದೆಯೆಂದು ವಿವರಗಳನ್ನಿತ್ತರು. :: “ಬ್ಯಾರಿ ಭವನ”ಕ್ಕೆ ಮನವಿ :: ಸಮ್ಮೇಳನದ ಸ್ವಾಗತ ಸಮಿತಿ ಉಪಾಧ್ಯಕ್ಷರಾದ ಅಮೀನ್ ಮೊಹ್ಸಿನ್ ಮಾತನಾಡಿ, ಅತ್ಯಂತ ವಿಶಿಷ್ಟ ಭಾಷಾ ಸಂಸ್ಕøತಿಯನ್ನು ಬ್ಯಾರಿ ಸಮುದಾಯ ಹೊಂದಿದೆ. ಈ ಸಮುದಾಯದ ಕಾರ್ಯಚಟುವಟಿಕೆÉಗಳಿಗ ಪೂರಕವಾದ “ಬ್ಯಾರಿ ಭವನ” ನಿರ್ಮಾಣಕ್ಕೆ ಸ್ಥಳೀಯ ಜನಪ್ರತಿನಿಧಿಗಳು ಅವಕಾಶ ಕೊಡಬೇಕೆಂದು ಮನವಿ ಮಾಡಿದರು, ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಸ್.ಐ.ಮುನೀರ್ ಅಹಮದ್ ಮಾತನಾಡಿ, ಕನ್ನಡ ಸಾರಸ್ವತ ಲೋಕಕ್ಕೆ ಬ್ಯಾರಿ ಸಮುದಾಯದಿಂದ ಬಂದ ಹಲ ಪ್ರತಿಭೆಗಳು ಅಮೂಲ್ಯ ಕಾಣಿಕೆಯನ್ನು ನೀಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕನ್ನಡದೊಂದಿಗೆ ಬ್ಯಾರಿ ಭಾಷೆಯ ಸಾಹಿತ್ಯದತ್ತಲು ಯುವ ಸಮೂಹ ತೊಡಗಿಸಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು. ಗೋಷ್ಠಿಯಲ್ಲಿ ಸಮ್ಮೇಳನದ ಸ್ವಾಗತ ಸಮಿತಿ ಉಪಾಧ್ಯಕ್ಷರುಗಳಾದ ಎಂ.ಎ.ನಾಸಿರ್ ಅಹಮದ್, ಕಲೀಮ್ ಅಹಮದ್, ಕಾರ್ಯದರ್ಶಿ ಅಬ್ದುಲ್ಲಾ ಮಡಿಕೇರಿ ಉಪಸ್ಥಿತರಿದ್ದರು.








