
ಸೋಮವಾರಪೇಟೆ ಮೇ 5 NEWS DESK : ನಿವೇಶನ ರಹಿತ ಬಡವರಿಗೆ ನಿವೇಶನ ನೀಡುವಂತೆ ಒತ್ತಾಯಿಸಿ, ಕರ್ನಾಟಕ ಬಹುಜನ ಕಾರ್ಮಿಕ ಸಂಘಟನೆಯ ನೇತೃತ್ವದಲ್ಲಿ ಕುಂಬೂರು ಗ್ರಾಮದ ಪೈಸಾರಿ ಜಾಗದಲ್ಲಿ ವಸತಿರಹಿತ ಕಾರ್ಮಿಕರು ನಡೆಸುತ್ತಿರುವ ಅಹೋರಾತ್ರಿ ಧರಣಿ 5ನೇ ದಿನಕ್ಕೆ ಕಾಲಿಟ್ಟಿದೆ. ಧರಣಿಯಲ್ಲಿ ವಸತಿ ರಹಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮೊದಲ ದಿನ ತಹಸೀಲ್ದಾರ್, ಡಿಎಫ್ಒ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು ಭೇಟಿ ನೀಡಿ ಧರಣಿನಿರತರನ್ನು ಚರ್ಚೆ ಮಾಡಿದ್ದು ಬಿಟ್ಟರೆ, ಧರಣಿ ಸ್ಥಳದಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕಾಣಿಸಿಕೊಂಡಿಲ್ಲ. ಪ್ರಾರಂಭದಲ್ಲಿ 400ಕುಟಂಬಗಳು ಧರಣಿಯಲ್ಲಿ ಭಾಗವಹಿಸಿದ್ದರು. ಮಂಗಳವಾರ ಧರಣಿನಿರತರ ಸಂಖ್ಯೆ 600ಕ್ಕೆ ಏರಿದೆ. ವಸತಿರಹಿತರ ಧರಣಿಗೆ ಸಂಬಂಧಿಸಿದಂತೆ ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿದ್ದಾರೆ. ತಾತ್ಕಲಿಕ ಶೌಚಾಲಯ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಮಳೆಯಿಂದ ರಕ್ಷಣೆ ಪಡೆಯಲು ಟಾರ್ಪಲ್ ಹೊದಿಕೆಯ ಪೆಂಡಾಲ್ ಮಾಡಿಕೊಂಡಿದ್ದಾರೆ. ವಸತಿರಹಿತರು ಮನೆಯಿಂದ ಪಡಿತರ ತಂದುಕೊಂಡು ಅಡುಗೆ ಮಾಡಿಕೊಳ್ಳುಕೊಳ್ಳುತ್ತಿದ್ದಾರೆ. ವೃದ್ದ ಮಹಿಳೆಯರು ಧರಣಿಯಲ್ಲಿ ಪಾಲ್ಗೊಂಡಿದ್ದಾರೆ. ರಾತ್ರಿ ಮಲಗಿದ್ದಾಗ ಹಾವುಗಳ ಭಯವಿದೆ. ಇನ್ನೊಂದು ಕಾಡಾನೆಗಳ ಆತಂಕವೂ ಇದೆ ಎಂದು ಧರಣಿ ನಿರತರಾದ ಗೀತಾಮಣಿ ಹೇಳಿದರು. ಕಾರ್ಮಿಕ ಸಂಘಟನೆ ಅಧ್ಯಕ್ಷ ಕೆ.ಮೊಣ್ಣಪ್ಪ ಸುದ್ದಿಗಾರರೊಂದಿಗೆ ಮಾತನಾಡಿ, ಸೋಮವಾರಪೇಟೆ ಹಾಗು ಕುಶಾಲನಗರ ತಾಲ್ಲೂಕಿನಲ್ಲಿ 30 ಸಾವಿರದಷ್ಟು ವಸತಿರಹಿತರಿದ್ದಾರೆ. ಅವರಿಗೆ ಗುಡಿಸಲು ಕಟ್ಟಿಕೊಳ್ಳಲು ಕೊಡುವಷ್ಟು ಪೈಸಾರಿ ಜಾಗವಿದೆ. ಆದರೆ ಸರ್ಕಾರಕ್ಕೆ ಬಡವರಿಗೆ ನಿವೇಶನ ನೀಡುವ ಮನಸ್ಸಿಲ್ಲ. ಪೈಸಾರಿ ಜಾಗವನ್ನು ಉಳ್ಳವರು ಒತ್ತುವರಿ ಮಾಡಿಕೊಂಡಿದ್ದಾರೆ. ಈಗಲೂ ಒತ್ತವರಿ ಮಾಡಿಕೊಳ್ಳುತ್ತಿದ್ದಾರೆ. ಅಂತಹವರಿಗೆ ಹಕ್ಕುಪತ್ರಗಳನ್ನೂ ನೀಡುವ ಪ್ರಯತ್ನ ನಡೆದಿದೆ ಎಂದು ದೂರಿದರು. ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿಗಳ ಮಾಹಿತಿ ಪ್ರಕಾರ 2014ರವರೆಗೆ 6500 ಮಂದಿ ವಸತಿ ರಹಿತರು ಅರ್ಜಿ ಸಲ್ಲಿಸಿದ್ದಾರೆ. ಕಳೆದ 12 ವರ್ಷಗಳಿಂದ ಬಡವರು, ಕಾರ್ಮಿಕರಿಂದ ಅರ್ಜಿಯನ್ನು ಪಡೆದುಕೊಳ್ಳದೆ ಅನ್ಯಾಯವೆಸಗಲಾಗಿದೆ. ತಾಲ್ಲೂಕಿನಲ್ಲಿರುವ ವಸತಿರಹಿತ ಬಡವರಿಗೆ ಉಚಿತ ನಿವೇಶನ ನೀಡುವ ತನಕ ಆಹೋರಾತ್ರಿ ಧರಣಿ ನಡೆಯಲಿದೆ. ಪೊಲೀಸರನ್ನು ಬಳಸಿಕೊಂಡು ಧರಣಿನಿರತರ ಮೇಲೆ ದೌರ್ಜನ್ಯ ಮಾಡಿದರೆ, ಶಾಸಕರ ಮನೆ ಎದುರು ಧರಣಿ ಮುಂದುವರಿಸಲಾಗುವುದು. ಜಿಲ್ಲೆಯ ಶಾಸಕರುಗಳು ಶ್ರಮಜೀವಿಗಳ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಹೇಳಿದರು.








