
ಮಡಿಕೇರಿ ಮೇ 7 NEWSD DESK : ಹೊದ್ದೂರು ಗ್ರಾಮ ಪಂಚಾಯಿತಿಯಲ್ಲಿ ದಿಶಾ ಸಂಸ್ಥೆಯ ಸಹಯೋಗದಲ್ಲಿ ಗ್ರಾಮೀಣ ಮಕ್ಕಳಿಗೆ ಸಾಮಾಜಿಕ ಜವಾಬ್ದಾರಿಯನ್ನು ಹೆಚ್ಚಿಸುವ ಉದ್ದೇಶದಿಂದ ‘ಅರಿವು’ ಎಂಬ ಹೆಸರಿನಡಿ ಐದು ದಿನಗಳ ವಿಶೇಷ ಬೇಸಿಗೆ ಶಿಬಿರ ನಡೆಯಿತು. ಅರಿವು ಬೇಸಿಗೆ ಶಿಬಿರದ ಮೊದಲ ದಿನವನ್ನು “ಸಾಮಾಜಿಕ ಜವಾಬ್ದಾರಿ” ಎಂಬ ಮಹತ್ವದ ವಿಷಯದೊಂದಿಗೆ ಉತ್ಸಾಹಭರಿತವಾಗಿ ನಡೆಸಲಾಯಿತು. ಶಿಬಿರದ ಆರಂಭದಲ್ಲಿ ಮಕ್ಕಳಿಗೆ ಶಿಬಿರದ ಉದ್ದೇಶ, ನಿಯಮಗಳು ಹಾಗೂ ದಿನಚರಿಯ ಕುರಿತು ಪರಿಚಯ ನೀಡಲಾಯಿತು. ಮಕ್ಕಳಲ್ಲಿ ಉತ್ತಮ ವ್ಯಕ್ತಿತ್ವ ಬೆಳವಣಿಗೆಗೆ “ಆಲಿಸುವಿಕೆ ಮತ್ತು ಸಂವಹನದ ಮಹತ್ವ” ಕುರಿತು ಮಾರ್ಗದರ್ಶನ ನೀಡಲಾಯಿತು. ಇತರರ ಮಾತುಗಳನ್ನು ಗಮನದಿಂದ ಆಲಿಸುವುದು, ವಿನಯದಿಂದ ಮಾತನಾಡುವುದು, ಪರಸ್ಪರ ಗೌರವದಿಂದ ನಡೆದುಕೊಳ್ಳುವುದು ಎಂಬ ಮೌಲ್ಯಗಳನ್ನು ಮಕ್ಕಳಿಗೆ ತಿಳಿಸಲಾಯಿತು. ಗ್ರಾ.ಪಂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹೆಚ್.ವಿ.ವತ್ಸಲಕುಮಾರಿ ಮಾತನಾಡಿ, ಸಾಮಾಜಿಕ ಜವಾಬ್ದಾರಿಗಳ ಕುರಿತು ಪ್ರೇರಣಾದಾಯಕವಾಗಿ ಮಾತನಾಡಿದರು. ಆಹಾರದ ಮೌಲ್ಯವನ್ನು ಅರಿತು ವ್ಯರ್ಥ ಮಾಡಬಾರದು, ನೀರನ್ನು ಸಂರಕ್ಷಿಸಬೇಕು, ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ಕಾಪಾಡಬೇಕು ಹಾಗೂ ಎಲ್ಲರ ಮೇಲೂ ದಯೆ ಮತ್ತು ಸಹಾನುಭೂತಿ ತೋರಬೇಕು ಎಂಬ ವಿಷಯಗಳನ್ನು ಸರಳವಾಗಿ ಹಾಗೂ ಉದಾಹರಣೆಗಳ ಮೂಲಕ ಮಕ್ಕಳಿಗೆ ತಿಳಿಸಿದರು. ಶಿಬಿರದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರೀತಂ ಪೊನ್ನಪ್ಪ ಶಿಬಿರದಲ್ಲಿ ಸಾಮಾಜಿಕ ಜವಾಬ್ದಾರಿ, ಆರೋಗ್ಯಯುತ ಆಹಾರ, ಭೂಮಿ ಮತ್ತು ನಾನು, ಪ್ರಕೃತಿ ಮತ್ತು ಪರಂಪರೆ, ನೈತಿಕತೆ ಮತ್ತು ಮೌಲ್ಯಗಳು ಎಂಬ ಒಟ್ಟು ಐದು ಆಶಯಗಳ ಮೇಲೆ ಐದು ದಿನಗಳ ಶಿಬಿರವಿದ್ದು, ಇಲ್ಲಿ ಮಕ್ಕಳು ಬರೆಯಲ್ಲ, ಓದಲ್ಲ ಆದರೆ ಚಟುವಟಿಕೆಗಳ ಮೂಲಕ ಅನುಭವಿಸಿ ಕಲಿಯುತ್ತಾರೆ ಹಾಗೂ ಮುಂದಿನ ದಿನಗಳಲ್ಲಿ ಇಲ್ಲಿ ಕಲಿತದನ್ನು ಜೀವನದಲ್ಲಿ ಅಳವಡಿಸಿಕೊಳ್ಳುತ್ತಾರೆ ಎಂಬ ನಂಬಿಕೆ ಇದೆ’ ಎಂದರು. ಆಡಳಿತಾಧಿಕಾರಿಗಳು ‘ ಜೀವನ ಬದ್ಧತೆ, ಮೌಲ್ಯಗಳು ಹಾಗೂ ಭವಿಷ್ಯದ ಕನಸುಗಳ ಬಗ್ಗೆ ನೀತಿ ಕಥೆಗಳ ಮೂಲಕ ಶಿಬಿರಾರ್ಥಿ ಮಕ್ಕಳಿಗೆ ಕಿವಿ ಮಾತು ಹೇಳಿದರು. ನಿಕಟಪೂರ್ವ ಗ್ರಾ.ಪಂ ಅಧ್ಯಕ್ಷರಾದ ಶ್ರೀ ಹೆಚ್ ಎ ಹಂಸರವರು ಶಿಬಿರದ ಯಶಸ್ವಿಗೆ ಹಾರೈಸಿದರು. ಕಾರ್ಯಕ್ರಮದಲ್ಲಿ ಗ್ರಾ.ಪಂ ಆಡಳಿತಾಧಿಕಾರಿ ಪಿ.ಪಿ.ಕವಿತ , ಗ್ರಾ.ಪಂ ನಿಕಟಪೂರ್ವ ಅಧ್ಯಕ್ಷ ಹೆಚ್.ಎ.ಹಂಸ, ದಿಶಾ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ಕುಸುಂ ಮತ್ತು ಪ್ರೀತಂ ಪೊನ್ನಪ್ಪ ಉಪಸ್ಥಿತರಿದ್ದರು. ಮಕ್ಕಳು ವಿವಿಧ ಸಾಮಾಜಿಕ ಜವಾಬ್ದಾರಿಗಳ ವಿಷಯಗಳ ಮೇಲೆ ಪಾತ್ರಾಭಿನಯ ಪ್ರದರ್ಶಿಸಿದರು. ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಡುವುದು, ನೀರು ಉಳಿಸುವುದು, ಆಹಾರ ವ್ಯರ್ಥ ಮಾಡದಿರುವುದು, ಹಿರಿಯರಿಗೆ ಸಹಾಯ ಮಾಡುವುದು, ಪ್ರಾಣಿಗಳ ಮೇಲೆ ಕರುಣೆ ತೋರಿಸುವುದು ಮುಂತಾದ ವಿಷಯಗಳನ್ನು ಅಭಿನಯಿಸಿದರು. ಮಕ್ಕಳ ಸ ಆತ್ಮವಿಶ್ವಾಸ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಮೊದಲ ದಿನದ ಚಟುವಟಿಕೆಗಳು ಮಕ್ಕಳಲ್ಲಿ ಸಾಮಾಜಿಕ ಮೌಲ್ಯಗಳು, ಶಿಸ್ತಿನ ಅರಿವು ಹಾಗೂ ಸಹಾನುಭೂತಿ ಬೆಳೆಸುವಲ್ಲಿ ಯಶಸ್ವಿಯಾದವು. ಶಿಬಿರದ ಮೊದಲ ದಿನವು ಮಕ್ಕಳಿಗೆ ಹೊಸ ಅನುಭವ ಮತ್ತು ಉತ್ತಮ ಸಂದೇಶಗಳನ್ನು ನೀಡುವ ಮೂಲಕ ಅರ್ಥಪೂರ್ಣವಾಗಿ ನೆರವೇರಿತು.









