
ಮಡಿಕೇರಿ NEWS DESK ಮೇ 12 : ಕ್ಷೇತ್ರ ಪುನರ್ ವಿಂಗಡಣೆಯ ಸಂದರ್ಭ ಕೊಡವರಿಗೆ ಪ್ರತ್ಯೇಕ ವಿಧಾನಸಭೆ ಮತ್ತು ಲೋಕಸಭಾ ಕ್ಷೇತ್ರವನ್ನು ರಚಿಸಬೇಕೆಂದು ಆಗ್ರಹಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ 48 ಗಂಟೆಗಳ ಅಹೋರಾತ್ರಿ ಸತ್ಯಾಗ್ರಹವನ್ನು ಇಂದು ಮಡಿಕೇರಿ ನಗರದ “ಕೊಡವ ಮಂದ್” ನಲ್ಲಿ ಆರಂಭಿಸಿತು. ಕೊಡವ ಮಂದ್ ನಲ್ಲಿ ಸಾಂಪ್ರದಾಯಿಕ ಪ್ರಾರ್ಥನೆಯನ್ನು ಸಲ್ಲಿಸಿ ಮೂರು ಬಾರಿ ಕುಶಲತೋಪು ಹಾರಿಸುವ ಮೂಲಕ ಶಾಂತಿಯುತ ಸತ್ಯಾಗ್ರಹ ಆರಂಭಿಸಲಾಯಿತು. ಸತ್ಯಾಗ್ರಹದಲ್ಲಿ ವಿವಿಧ ಹಕ್ಕೊತ್ತಾಯಗಳನ್ನು ಮಂಡಿಸಿ, ಕೊಡವರಿಗೆ ಪ್ರತ್ಯೇಕ ವಿಧಾನಸಭೆ ಮತ್ತು ಲೋಕಸಭಾ ಕ್ಷೇತ್ರ ನೀಡಬೇಕೆಂದು ಆಗ್ರಹಿಸಿರುವ ಮನವಿ ಪತ್ರವನ್ನು ಭಾರತದ ರಾಷ್ಟಪತಿಗಳು, ಪ್ರಧಾನಮಂತ್ರಿಗಳು ಹಾಗೂ ಮುಖ್ಯ ಚುನಾವಣಾ ಆಯುಕ್ತರಿಗೆ ಸಲ್ಲಿಸಲಾಗುವುದು. “ಕೊಡವ ಮಂದ್” ನಲ್ಲಿ ಮೇ 14 ರಂದು ಬೆಳಿಗ್ಗೆ 10.30 ರವರೆಗೆ ಸತ್ಯಾಗ್ರಹ ನಡೆಸಲಾಗುವುದು ಎಂದು ಸಿಎನ್ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದರು. ಕೊಡವರ ಸಾಂಪ್ರದಾಯಿಕ ಆವಾಸಸ್ಥಾನದ ಗಡಿಗಳನ್ನು ಬದಲಾಯಿಸದೆ, ಸಂಸತ್ತು ಮತ್ತು ರಾಜ್ಯ ವಿಧಾನಸಭೆಯಲ್ಲಿ ಕೊಡವರಿಗೆ ವಿಶೇಷ ರಾಜಕೀಯ ಪ್ರಾತಿನಿಧ್ಯ ನೀಡಬೇಕು. ಸಿಕ್ಕಿಂನ ಬೌದ್ಧ ಸನ್ಯಾಸಿ ಸಮುದಾಯದ ಸಂಘ ಕ್ಷೇತ್ರದ ಮಾದರಿಯಲ್ಲಿ, ಏಕ-ಜನಾಂಗೀಯ ಸ್ಥಳೀಯ ಪ್ರಕೃತಿ ಆರಾಧಕ (ಅನಿಮಿಸ್ಟಿಕ್) ಕೊಡವರಿಗಾಗಿ ‘ಅಮೂರ್ತ ಕೊಡವ ಕ್ಷೇತ್ರ’ವನ್ನು ಘೋಷಿಸಬೇಕು. ಮುಂಬರುವ 2027ರ ರಾಷ್ಟ್ರೀಯ ಜನಗಣತಿಯಲ್ಲಿ ಕೊಡವರಿಗಾಗಿ ಪ್ರತ್ಯೇಕ ಕೋಡ್ (ಸಂಕೇತ) ಮತ್ತು ಕಾಲಂ (ಅಂಕಣ) ಒದಗಿಸಬೇಕು ಎಂದು ಒತ್ತಾಯಿಸಿದ ಅವರು ಕೊಡವ ಪ್ರಾತಿನಿಧ್ಯ ಮತ್ತು ಜನಗಣತಿ ಮಾನ್ಯತೆಗಾಗಿ ಇರುವ ಸಾಂವಿಧಾನಿಕ ಅಂಶಗಳನ್ನು ವಿವರಿಸಿದರು. ಅಪ್ಪಾರಂಡ ನಂದಿನಿ ನಂಜಪ್ಪ, ಅರೆಯಡ ಸವಿತಾ ತಿಮ್ಮಯ್ಯ, ಅಳ್ಮಂಡ ಜೈ ಗಣಪತಿ, ನಂದೇಟಿರ ರವಿ ಸುಬ್ಬಯ್ಯ, ಪಟ್ಟಮಡ ಕುಶ, ಅರೆಯಡ ಗಿರೀಶ್ ತಿಮ್ಮಯ್ಯ, ಪುದಿಯೊಕ್ಕಡ ಕಾಶಿ ಕರುಂಬಯ್ಯ, ಕಿರಿಯಮಾಡ ಶೇರಿನ್, ಮಂದಪoಡ ಮನೋಜ್ ಮಂದಣ್ಣ, ಬಡುವಂಡ ವಿಜಯ, ಮಂದಪoಡ ಸೂರಜ್, ಚೋಳಪಂಡ ನಾಣಯ್ಯ, ನಂದಿನೆರವoಡ ವಿಜು, ಪುದಿಯೊಕ್ಕಡ ಪೃಥ್ವಿ, ನಂದಿನೆರವoಡ ಅಯ್ಯಣ್ಣ, ಕೊಟ್ಟುಕತ್ತಿರ ಬಾಬಿ ಪಳಂಗಪ್ಪ, ಐಲಪಂಡ ಮಿಟ್ಟು, ಚಂಡಿರ ರಾಜ ತಿಮ್ಮಯ್ಯ, ಪಾಲೇಕಂಡ ಪ್ರಧಾನ್ ಪೂಣಚ್ಚ, ಸಾದೇರ ರಮೇಶ್ ಹಾಗೂ ಮಡಿಕೇರಿ ಕೊಡವ ಸಮಾಜದ ನಿರ್ದೇಶಕ ನಂದಿನೆರವoಡ ದಿನೇಶ್ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.









