
ಮಡಿಕೇರಿ NEWS DESK ಮೇ 18 : ಮತದಾರರ ಪಟ್ಟಿಯಿಂದ ಅಕ್ರಮ ವಲಸಿಗ ನುಸುಳುಕೋರರನ್ನು ಕೈಬಿಡಬೇಕು ಮತ್ತು ಆದಿಮಸಂಜಾತ ಕೊಡವರನ್ನು ಮರುಸ್ಥಾಪಿಸಿ ದೃಢೀಕರಿಸಬೇಕು ಎಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ. ಸಿಎನ್ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯ ಸಂದರ್ಭ ಕೊಡವರ ಪರವಾಗಿ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಮನವಿಯಲ್ಲಿ ವಿವರಿಸಿದ್ದಾರೆ. ಕರ್ನಾಟಕದಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ ಸಂದರ್ಭ ಕೊಡಗು ಭೂಪ್ರದೇಶದಲ್ಲಿರುವ ಅಕ್ರಮ ವಲಸಿಗ ನುಸುಳುಕೋರರನ್ನು ಮತದಾರರ ಪಟ್ಟಿಯಿಂದ ಕೈಬಿಡಬೇಕು. ಆದಿಮಸಂಜಾತ ಕೊಡವರು ಹಾಗೂ ಇಲ್ಲಿ ನೆಲೆಸಿರುವ ಇತರ ನಾಗರೀಕರ ನಡುವಿನ ವ್ಯತ್ಯಾಸವನ್ನು ಗುರುತಿಸಬೇಕು ಎಂದು ಕೋರಿದ್ದಾರೆ. ಭಾರತದ ಮುಖ್ಯ ಚುನಾವಣಾ ಆಯೋಗವು ಕರ್ನಾಟಕದ ಮುಖ್ಯ ಚುನಾವಣಾ ಅಧಿಕಾರಿಗಳ ಮೂಲಕ 2026 ರ ಜೂನ್ 20 ರಿಂದ ಕರ್ನಾಟಕದಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯನ್ನು ಪ್ರಾರಂಭಿಸಲು ಸಜ್ಜಾಗಿದೆ. ಕೊಡಗು ಭೂಪ್ರದೇಶವು ಭೌಗೋಳಿಕ-ಕಾರ್ಯತಂತ್ರದ ಸೂಕ್ಷö್ಮ ಪ್ರದೇಶವಾಗಿದೆ. ಈ ಭೂಮಿಯು ಮಲಬಾರ್, ಉತ್ತರ ಕೇರಳ, ತುಳುನಾಡು, ದಕ್ಷಿಣ ಕನ್ನಡ ಮತ್ತು ಹಳೆಯ ಮೈಸೂರು ಬಯಲು ಸೀಮೆಯ ಗಡಿಗಳಿಂದ ಆವೃತವಾಗಿದೆ. ಮತ ಬ್ಯಾಂಕ್ ರಾಜಕಾರಣಿಗಳಿಂದಾಗಿ ನುಸುಳುಕೋರರು ಆಧಾರ್, ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ ಮತ್ತು ಇತರ ವಾಸಸ್ಥಳ ಪ್ರಮಾಣಪತ್ರಗಳನ್ನು ಪಡೆಯಲು ಪ್ರೋತ್ಸಾಹಿಸಲಾಗಿದೆ, ಅಲ್ಲದೆ ಭೂ ಮಂಜೂರಾತಿ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಅವರಿಗೆ ಟಿಕೆಟ್ಗಳನ್ನು ಸಹ ನೀಡಲಾಗಿದೆ ಮತ್ತು ನೀಡಲಾಗುತ್ತಿದೆ. ಮತದಾರರ ಪಟ್ಟಿಯಿಂದ ಆದಿಮಸಂಜಾತ ಕೊಡವರ ಹೆಸರನ್ನು ಕೈಬಿಡುವುದು – ಒಂದು ದುಷ್ಟ ಸಂಚಾಗಿದೆ. ಇದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ, ದಾಖಲೆಗಳಲ್ಲಿ ಕೊಡವರು ಅಸ್ತಿತ್ವದಲ್ಲೇ ಇಲ್ಲ ಎಂಬುವುದನ್ನು ತೋರಿಸಲು ಆದಿಮಸಂಜಾತ, ಕಾನೂನುಬದ್ಧ ನಿವಾಸಿ ಕೊಡವರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ವ್ಯವಸ್ಥಿತವಾಗಿ ಕೈಬಿಡಲಾಗುತ್ತಿದೆ. ಡಿಲಿಮಿಟೇಷನ್ (ಕ್ಷೇತ್ರ ಮರುವಿಂಗಡಣೆ) ಆಯೋಗದ ಮುಂದೆ ದಾಖಲೆಗಳಲ್ಲಿ ಜನಸಂಖ್ಯೆಯ ಬೆಳವಣಿಗೆಯ ಬಲವನ್ನು ಪ್ರದರ್ಶಿಸುವ ಮೂಲಕ, ಕಳ್ಳ ಮತ ಬ್ಯಾಂಕುಗಳ ಆಧಾರದ ಮೇಲೆ ಸಂಸತ್ತು ಮತ್ತು ವಿಧಾನಸಭೆ ಸ್ಥಾನಗಳನ್ನು ಹೆಚ್ಚಿಸಲು ಹಕ್ಕು ಸಾಧಿಸುವ ಒಂದು ದುಷ್ಟ ಸಂಚು ಇದಾಗಿದೆ. ಕೊಡವರ ಎಲ್ಲಾ ನಡವಳಿಕೆಗಳು ಮತ್ತು ಆಚರಣೆಗಳನ್ನು ನಕಲು ಮಾಡುವ ಮೂಲಕ ಸಾಂಸ್ಕೃತಿಕ ಅತಿಕ್ರಮಣವನ್ನು ಮಾಡುತ್ತಿದ್ದಾರೆ ಹಾಗೂ ಸರ್ಕಾರಿ ವ್ಯವಸ್ಥೆಯನ್ನು ಗೊಂದಲಕ್ಕೀಡುಮಾಡಲು ವಲಸಿಗರನ್ನು ಕೊಡವರೆಂದು ಬಿಂಬಿಸುತ್ತಿದ್ದಾರೆ. ದೇಶಪ್ರೇಮಿಗಳಾದ ಆದಿಮಸಂಜಾತ ಕೊಡವರು ತಮ್ಮದೇ ತಾಯ್ನಾಡಿನಲ್ಲಿ ಅಭದ್ರತೆ, ಅವಮಾನ ಎದುರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ನಮ್ಮ ನೈಸರ್ಗಿಕ ಸಂಪತ್ತು, ಜಲಸಂಪನ್ಮೂಲ ಮತ್ತು ಆರ್ಥಿಕ ಸಂಪತ್ತನ್ನು ರಾಷ್ಟ್ರದ ಬೊಕ್ಕಸಕ್ಕೆ ಹೇರಳವಾಗಿ ಕೊಡುಗೆಯಾಗಿ ನೀಡಿದ್ದಾರೆ. ಭಾರತಕ್ಕಾಗಿ ಜನಸಂಖ್ಯೆಯನ್ನು ನಿಯಂತ್ರಿಸಿದ್ದಕ್ಕಾಗಿ ಕೊಡವರಿಗೆ ಬಹುಮಾನ ನೀಡುವ ಬದಲು, ಅವರಿಗೆ ಶಿಕ್ಷೆ ಮತ್ತು ದಂಡನೆ ವಿಧಿಸಬಾರದು ಎಂದು ಒತ್ತಾಯಿಸಿದ್ದಾರೆ. ಕೊಡವರ ಭವಿಷ್ಯಕ್ಕಾಗಿ ಶಾಸನ ರೂಪಿಸಲು ಮತ್ತು ಸಾಂವಿಧಾನಿಕ ವ್ಯವಸ್ಥೆಯ ಮೂಲಕ ಐತಿಹಾಸಿಕ ನಿರಂತರತೆ, ಅನನ್ಯತೆ ಮತ್ತು ಅಸ್ತಿತ್ವಕ್ಕೆ ಶಾಸನಬದ್ಧ ದೃಢೀಕರಣಕ್ಕಾಗಿ, ಸರ್ವೋಚ್ಛ ಶಾಸನ ಸಭೆಗಳಲ್ಲಿ ಎಂದರೆ ಸಂಸತ್ತು ಮತ್ತು ವಿಧಾನಸಭೆಯಲ್ಲಿ ಧ್ವನಿ ಹಾಗೂ ಸ್ಥಾನವನ್ನು ಆಶಿಸುತ್ತೇವೆ. ಸಿಕ್ಕಿಂನ ಬೌದ್ಧ ಸನ್ಯಾಸಿ ಸಮುದಾಯಕ್ಕಾಗಿ ಇರುವ ಅದೃಶ್ಯ “ಸಂಘ” ಚುನಾವಣಾ ಕ್ಷೇತ್ರದ ಮಾದರಿಯಲ್ಲಿ ಪ್ರತ್ಯೇಕ ಕೊಡವ ಪ್ರಾತಿನಿಧ್ಯಕ್ಕಾಗಿ ಮನವಿ ಮಾಡಿಕೊಳ್ಳುತ್ತೇವೆ ಎಂದು ಪತ್ರದ ಮೂಲಕ ಎನ್.ಯು.ನಾಚಪ್ಪ ಅವರು ಕೋರಿದ್ದಾರೆ.








