
ವಿರಾಜಪೇಟೆ ಮೇ 18 NEWS DESK : ಪ್ರತಿಭಾ ಪ್ರದರ್ಶನಕ್ಕೆ ಕ್ರೀಡಾಕೂಟಗಳು ವೇದಿಕೆಗಳಾಗಿವೆ ಎಂದು ವಿರಾಜಪೇಟೆಯ ಸಂತ ಅನ್ನಮ್ಮ ಚರ್ಚ್ ನ ಪ್ರಧಾನ ಗುರುಗಳು ಹಾಗೂ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕರಾದ ರೆ.ಫಾ.ಜೇಮ್ಸ್ ಡೊಮಿನಿಕ್ ಅಭಿಪ್ರಾಯಪಟ್ಟರು. ವಿರಾಜಪೇಟೆಯ ಸಂತ ಅನ್ನಮ್ಮ ಚರ್ಚ್ ನ ಮಹಿಳಾ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಪ್ರಪ್ರಥಮ ಬಾರಿಗೆ ಸಂತ ಅನ್ನಮ್ಮ ವಿದ್ಯಾಸಂಸ್ಥೆಯ ಮೈದಾನದಲ್ಲಿ ಕ್ರಿಶ್ಚಿಯನ್ ಕಪ್ ಸೀಸನ್ 1 ಪ್ರಯುಕ್ತ ಜಿಲ್ಲಾ ಮಟ್ಟದ ಮಹಿಳೆಯರ ಥ್ರೋ ಬಾಲ್ ಪಂದ್ಯಾವಳಿಗೆ ಶುಭಹಾರೈಸಿ ಅವರು, ಮಾತನಾಡಿದರು. ನಮ್ಮ ಧರ್ಮ ಕೇಂದ್ರದ ವತಿಯಿಂದ ಪ್ರಪ್ರಥಮ ಬಾರಿಗೆ ಮಹಿಳೆಯರ ಥ್ರೋ ಬಾಲ್ ಪಂದ್ಯಾವಳಿಯನ್ನು ಮಹಿಳೆಯರೇ ಆಯೋಜಿಸಿದ್ದು ಗಮನಾರ್ಹವಾಗಿದೆ. ಮಹಿಳೆಯರು ಕ್ರೀಡಾ ಕ್ಷೇತ್ರದಲ್ಲಿ ತಮ್ಮ ಪ್ರತಿಭೆಯನ್ನು ಹೊರ ಹೊಮ್ಮಿಸಲು ಇಂತಹ ಕ್ರೀಡಾಕೂಟಗಳ ಅಗತ್ಯವಿದೆ ಎಂದು ಹೇಳಿದರು. ಅಮ್ಮತ್ತಿಯ ಸಂತ ಅಂತೋಣಿ ಚರ್ಚ್ ನ ಗುರುಗಳು ಹಾಗೂ ಸಂತ ಅನ್ನಮ್ಮ ಪಿಯು ಕಾಲೇಜಿನ ಪ್ರಾಂಶುಪಾಲ ರೆ.ಫಾ.ಮದಲೈ ಮುತ್ತು ಅವರು ಮಾತನಾಡಿ, ಇಂದು ಸಮಾಜದಲ್ಲಿ ಅನೇಕ ಕ್ಲಬ್ ಗಳನ್ನು ಕಾಣುತ್ತಿದ್ದೇವೆ. ಮಹಿಳೆಯರೇ ಒಂದು ಕ್ಲಬ್ ನ್ನು ರಚಿಸಿ ಮೊದಲ ಬಾರಿಗೆ ಮಹಿಳಾ ಕ್ರೀಡಾಕೂಟವನ್ನು ಇಂದು ಇಲ್ಲಿ ಆಯೋಜಿಸಿರುವುದು ವಿಶೇಷವಾಗಿದೆ. ಈ ಮಹಿಳಾ ಕ್ಲಬ್ ಮತ್ತಷ್ಟು ಕಾರ್ಯಚಟುವಟಿಕೆಗಳನ್ನು ಮುಂದಿನ ದಿನಗಳಲ್ಲಿ ಮಾಡಲಿ ಎಂದು ಶುಭ ಕೋರಿದರು. ಸಂತ ಅನ್ನಮ್ಮ ಪದವಿ ಕಾಲೇಜಿನ ಪ್ರಾಂಶುಪಾಲೆ ಮಾಳೆಟೀರ ತೃಪ್ತಿ ಬೋಪಣ್ಣ ಮಾತನಾಡಿ, ಮಹಿಳೆಯರು ಇಂದು ಕೇವಲ ಅಡುಗೆ ಮನೆಗೆ ಮಾತ್ರ ಸೀಮಿತವಾಗದೆ ಸಮಾಜದ ವಿವಿಧ ರಂಗಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುತ್ತಾಳೆ. ಕ್ರೀಡಾ ಕ್ಷೇತ್ರದಲ್ಲಿಯೂ ಅಂತರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆಯನ್ನು ಮಾಡುತ್ತಿದ್ದು, ಗಮನಾರ್ಹವಾಗಿದೆ ಎಂದರು. ಮಹಿಳೆಯರು ಯಶಸ್ವಿಯಾಗಿ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಿ ಎಂದು ಕರೆ ನೀಡಿದರು. ಮಾಜಿ ಪಟ್ಟಣ ಪಂಚಾಯತ್ ಅಧ್ಯಕ್ಷೆ ಮರಿಯಾ ಸಿಕ್ವೇರಾ ಅವರು, ಮಹಿಳಾ ಸ್ಪೋರ್ಟ್ಸ್ ಕ್ಲಬ್ ನ್ನು ಉದ್ಘಾಟಿಸಿ, ಕ್ರೀಡಾಕೂಟಕ್ಕೆ ಚಾಲನೆಯನ್ನು ನೀಡಿದರು. ಕಾಂಗ್ರೆಸ್ ಸೇವಾದಳದ ರಾಜ್ಯ ಜಂಟಿ ಕಾರ್ಯದರ್ಶಿ ತೆರೆಸಾ ವಿಕ್ಟರ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಮಾಜಿ ಪಟ್ಟಣ ಪಂಚಾಯತ್ ಅಧ್ಯಕ್ಷೆ ಮರಿಯಾ ಸಿಕ್ವೇರಾ ರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ವಿರಾಜಪೇಟೆ ಮಹಿಳಾ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷೆ ಲೀಲಾ ಮ್ಯಾಥ್ಯೂ, ಉಪಾಧ್ಯಕ್ಷೆ ಅನಿತಾ ಶಾಮ್, ಸಂತ ಅನ್ನಮ್ಮ ಶಾಲೆಯ ಮುಖ್ಯ ಶಿಕ್ಷಕಿಯರಾದ ಸಿಸ್ಟರ್ ರೋಸಿ ಡೈಸಾ, ಸಿಸ್ಟರ್ ವಂದನಾ ಲೋಬೋ, ಶಿನಿ ಲೇಡೀಸ್ ಸ್ಪೋರ್ಟ್ ಕ್ಲಬ್ ಸದಸ್ಯರುಗಳು, ಧರ್ಮ ಕೇಂದ್ರದವರು, ಆಟಗಾರರು ಉಪಸ್ಥಿತರಿದ್ದರು. ಶಿಕ್ಷಕಿ ಸುನೀತಾ ಲೋಬೋ ನಿರೂಪಿಸಿ, ಮಿಲನ ಜೇಮ್ಸ್ ಸ್ವಾಗತಿಸಿ, ಶೈನಿ ಕೆ ಆರ್ ವಂದಿಸಿದರು. ಜಿಲ್ಲಾ ಮಟ್ಟದ ಥ್ರೋ ಬಾಲ್ ಕ್ರೀಡಾಕೂಟದಲ್ಲಿ ವಿರಾಜಪೇಟೆ,ಸಿದ್ದಾಪುರ, ಮಡಿಕೇರಿ ಹಾಗೂ ಪೊನ್ನಂಪೇಟೆ ಧರ್ಮಕೇಂದ್ರದ ತಂಡಗಳು ಪಾಲ್ಗೊಂಡಿದ್ದವು. ಫೈನಲ್ ಪಂದ್ಯಾಟದಲ್ಲಿ ವಿರಾಜಪೇಟೆ ಸಂತ ಅನ್ನಮ್ಮ ಧರ್ಮಕೇಂದ್ರದ ತಂಡವು ಜಯಗಳಿಸಿ ಪ್ರಥಮ ಸ್ಥಾನ ಪಡೆಯಿತು. ಸಿದ್ದಾಪುರ ಧರ್ಮಕೇಂದ್ರದ ಲಕ್ಕಿ ಲೇಡೀಸ್ ತಂಡವು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು. ಉತ್ತಮ ಆಟಗಾರ್ತಿ ಪ್ರಶಸ್ತಿಯನ್ನು ಮಡಿಕೇರಿಯ ಸಂತ ಮೈಕಲರ ಧರ್ಮಕೇಂದ್ರದ ಮಿಶಾಲ್ ಲೋಪೆಸ್ ರವರು ಪಡೆದುಕೊಂಡರು. ಸಂತ ಅನ್ನಮ್ಮ ಚರ್ಚ್ ನ ಪ್ರಧಾನ ಗುರುಗಳಾದ ರೆ. ಫಾ. ಜೇಮ್ಸ್ ಡೊಮಿನಿಕ್ ರವರು ಹಾಗೂ ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ 4th ಸಬ್ ಜೂನಿಯರ್ ಸಿಸ್ಟೋಬಾಲ್ ವಿಜೇತ ತಂಡದ ಕೋಚ್ ಹಾಗೂ ಕುಶಾಲನಗರ ಫಾತಿಮಾ ಶಾಲೆಯ ದೈಹಿಕ ಶಿಕ್ಷಕರಾದ ಜಾನ್ ಸನ್ ರವರು ವಿಜೇತ ತಂಡಗಳಿಗೆ ಟ್ರೋಫಿ, ವೈಯುಕ್ತಿಕ ಬಹುಮಾನಗಳನ್ನು ವಿತರಿಸಿದರು. ವಿಜೇತ ತಂಡಕ್ಕೆ ಐದು ಸಾವಿರ ರೂ ನಗದು ಹಾಗೂ ದ್ವಿತೀಯ ಸ್ಥಾನ ಗಳಿಸಿದ ತಂಡಕ್ಕೆ ಮೂರು ಸಾವಿರ ರೂ ನಗದು ಹಾಗೂ ಟ್ರೋಫಿ ಯನ್ನು ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸಿಸ್ಟೋಬಾಲ್ ಕೋಚ್ ಜಾನ್ ಸನ್ ರವರನ್ನು ಸನ್ಮಾನಿಸಲಾಯಿತು. ಸಂತ ಅನ್ನಮ್ಮ ಧರ್ಮ ಕೇಂದ್ರದ ಲೇಡೀಸ್ ಸ್ಪೋರ್ಟ್ಸ್ ಕ್ಲಬ್ ನ ಸರ್ವ ಸದಸ್ಯರು ಉಪಸ್ಥಿತರಿದ್ದರು.









