
ಮಡಿಕೇರಿ ಮೇ 21 NEWS DESK : ಸರ್ಕಾರವು ಘನತ್ಯಾಜ್ಯ ನಿರ್ವಹಣೆ ನಿಯಮಗಳ 2026ರ ಪ್ರಕಾರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾರ್ವಜನಿಕರು ತ್ಯಾಜ್ಯ ವಿಲೇವಾರಿ ಮಾಡುವ ವಾಹನಕ್ಕೆ ಕೇಂದ್ರ ಸರ್ಕಾರದ ಸುತ್ತೋಲೆಯಂತೆ ಮೂಲದಲ್ಲಿಯೇ ನಾಲ್ಕು ವಿದಧ ತ್ಯಾಜ್ಯ ವಿಂಗಡಣೆ ಮಾಡಿ ಕಡ್ಡಾಯವಾಗಿ ನೀಡಬೇಕು ಎಂದು ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕೃಷ್ಣ ಪ್ರಸಾದ್ ಅವರು ಕೋರಿದ್ದಾರೆ. ಹಸಿತ್ಯಾಜ್ಯ: ಅಡಿಗೆ ಮನೆಯ ತ್ಯಾಜ್ಯ, ಆಹಾರ ತ್ಯಾಜ್ಯ, ತರಕಾರಿ ತ್ಯಾಜ್ಯ, ಮಾಂಸದ ತ್ಯಾಜ್ಯ, ಹಣ್ಣಿನ ತ್ಯಾಜ್ಯ, ಹೂವಿನ ತ್ಯಾಜ್ಯ, ಗಾರ್ಡನ್ ವೇಸ್ಟ್ ಮತ್ತು ಇತರೆ ಕರಗುವ ತ್ಯಾಜ್ಯ ವಸ್ತುಗಳು. ಒಣತ್ಯಾಜ್ಯ: ಎಲ್ಲಾ ರೀತಿಯ ಪ್ಲಾಸ್ಟಿಕ್ ತ್ಯಾಜ್ಯ ವಸ್ತುಗಳು, ಬಟ್ಟೆಯ ತ್ಯಾಜ್ಯ ವಸ್ತುಗಳು, ಕಬ್ಬಿಣ, ರಬ್ಬರ್ ಮರದ ತ್ಯಾಜ್ಯ ಮತ್ತಿತರ. ಸ್ಯಾನಿಟರಿ ತ್ಯಾಜ್ಯ: ಡೈಪರ್ಸ್, ಸ್ಯಾನಿಟರಿ ನ್ಯಾಫ್ಕಿನ್ಸ್, ಕಾಂಡೂಮ್ಸ್ ಮತ್ತಿತರ. ಸ್ಪೆಷಲ್ ಕೇ ವೇಸ್ಟ್: ಪೈಂಟ್ ಡ್ರಮ್ಸ್/ಕಂಟೈನರ್ಸ್ ಔಷಧಿ ಕ್ಯಾನ್ಗಳು/ಡ್ರಮ್ ಗಳು/ಬಾಟಲ್ಗಳು ಬಲ್ಬ್/ ಟ್ಯೂಬ್ ಲೈಟ್ಸ್, ಅವಧಿ ಮೀರಿದ ಔಷದಿಗಳು, ಒಡೆದ ಮಕ್ರ್ಯೂರಿ ಥರ್ಮೋಮೀಟರ್ಸ್ ಹಳೆಯ ಬ್ಯಾಟರಿಗಳು, ಬಳಸಿದ ನೀಡಲ್ಸ್/ ಸಿರೀಂಜ್ಗಳು, ಬ್ಯಾಂಡೇಜ್ ಹಾಗೂ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಘನತ್ಯಾಜ್ಯ ನಿರ್ವಹಣೆ ನಿಯಮ 2026 ರನ್ವಯ ಬೃಹತ್ ತ್ಯಾಜ್ಯ ಉತ್ಪಾದಕರು (ಬಿಡಬ್ಲ್ಯುಜಿ) (40,000 ಸಾಮಥ್ರ್ಯದ ನೀರಿನ ಟ್ಯಾಂಕ್ ಉಳ್ಳವರು/20,000 ಚ.ಮೀ. ವ್ಯಾಪ್ತಿಯ ಪ್ರದೇಶದಲ್ಲಿರುವ ಕಟ್ಟಡಗೊಳುಳ್ಳವರು, ಪ್ರತಿ ನಿತ್ಯ 100 ಕೆ.ಜಿ.ತ್ಯಾಜ್ಯ ಉತ್ಪಾದನೆ ಮಾಡುವವರನ್ನು ಬೃಹತ್ ತ್ಯಾಜ್ಯ ಉತ್ಪಾದಕರೆಂದು ಪರಿಗಣಿಸಲಾಗಿದ್ದು, ಬೃಹತ್ ತ್ಯಾಜ್ಯ ಉತ್ಪಾದನೆ ಮಾಡುವ ಸಂಸ್ಥೆಯವರು/ ಉದ್ಯಮದಾರರು/ ಕಟ್ಟಡದ ಮಾಲೀಕರು/ ಚೌಟ್ರಿ (ಮಂಟಪಗಳು) ಗಳಲ್ಲಿ ಉತ್ಪಾದನೆಯಾಗುವ ತ್ಯಾಜ್ಯವನ್ನು ಸ್ಥಳದಲ್ಲಿಯೇ (in-situ) ಸಂಸ್ಕರಿಸಬೇಕು. ಹಾಗೂ ಸಿಪಿಸಿಬಿ ಪೋರ್ಟಲ್ನಲ್ಲಿ ತಪ್ಪದೇ ನೋಂದಾಯಿಸಬೇಕು ಅಥವಾ ಪಟ್ಟಣ ಪಂಚಾಯಿತಿ ನಿಗದಿ ಪಡಿಸುವ ಶುಲ್ಕವನ್ನು ಪಾವತಿಸಿ ಪಟ್ಟಣ ಪಂಚಾಯಿತಿಯ ಘನತ್ಯಾಜ್ಯ ವಿಲೇವಾರಿ ವಾಹನಕ್ಕೆ ನೀಡುವುದು. ತಪ್ಪಿದಲ್ಲಿ ಘನತ್ಯಾಜ್ಯ ವಸ್ತುಗಳ (ವ್ಯವಸ್ಥಾಪನೆ ಮತ್ತು ನಿರ್ವಹಣೆ) ನಿಯಮಗಳು-2026 ರಂತೆ ಕಸ ವಿಂಗಡಣೆ ಮಾಡದೇ ಇರುವವರ ವಿರುದ್ಧ ದಂಡ ವಿಧಿಸುವುದಲ್ಲದೇ ಮೂಲಭೂತ ಸೌಕರ್ಯಗಳಾದ ನೀರು ಮತ್ತು ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಕ್ರಮವಹಿಸಲಾಗುವುದು. ಆದ್ದರಿಂದ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರು/ಉದ್ಯಮದಾರರು ಘನತ್ಯಾಜ್ಯ ವಸ್ತುಗಳ (ವ್ಯವಸ್ಥಾಪನೆ ಮತ್ತು ನಿರ್ವಹಣೆ) ನಿಯಮಗಳು-2026ನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸಹಕಾರ ನೀಡುವಂತೆ ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕೃಷ್ಣ ಪ್ರಸಾದ್ ಅವರು ಕೋರಿದ್ದಾರೆ.








