
ಮಡಿಕೇರಿ ಮೇ 26 NEWS DESK : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ 17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು ಮೇ 29 ಮತ್ತು 30 ರಂದು ಸುಂಟಿಕೊಪ್ಪದ ಎಸ್.ಎಸ್.ಇಂಟರ್ನ್ಯಾಷನಲ್ ಸಭಾಂಗಣದ ಕವಿಶಿಷ್ಯ ಪಂಜೆ ಮಂಗೇಶರಾಯರ ವೇದಿಕೆಯಲ್ಲಿ ನಡೆಯಲಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ಅವರು ಸಮ್ಮೇಳನದ ವಿವರಗಳನ್ನು ನೀಡುತ್ತಾ, ಸಮ್ಮೇಳನದ ಸರ್ವಾಧ್ಯಕ್ಷರಾದ ಹಿರಿಯ ಸಾಹಿತಿ, ಕೇಂದ್ರ ಸಾಹಿತ್ಯ ಪ್ರಶಸ್ತಿ ಪುರಸ್ಕøತ ಅಬ್ದುಲ್ ರಶೀದ್ ಅವರ ಘನ ಉಪಸ್ಥಿತಿಯಲ್ಲಿ ಎರಡು ದಿನಗಳ ಕಾಲ ಕನ್ನಡ ನುಡಿ ಹಬ್ಬ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ನಡೆಯಲಿದೆಯೆಂದು ತಿಳಿಸಿದರು. :: ವಿವಿಧ 19 ದ್ವಾರಗಳ ಉದ್ಘಾಟನೆ :: ಆರಂಭಿಕ ದಿನವಾದ ಮೇ 29 ರಂದು ಬೆಳಗ್ಗೆ ರಾಷ್ಟ್ರಧ್ವಜ, ನಾಡಧ್ವಜ ಮತ್ತು ಪರಿಷತ್ತಿನ ಧ್ವಜದ ಆರೋಹಣದೊಂದಿಗೆ ಸಮ್ಮೇಳನ ಪ್ರಾರಂಭವಾಗಲಿದೆ. ಇದೇ ಸಂದರ್ಭ ಸುಂಟಿಕೊಪ್ಪ ವ್ಯಾಪ್ತಿಯ 19 ಮಂದಿ ಹಿರಿಯ ಚೇತನಗಳನ್ನು ಸ್ಮರಿಸುವ ದ್ವಾರಗಳನ್ನು ಗಣ್ಯರು ಉದ್ಘಾಟಿಸಲಿದ್ದಾರೆಂದರು. :: ಮೆರವಣಿಗೆ :: ಅಂದು ಬೆಳಗ್ಗೆ 9 ಗಂಟೆಗೆ ಸುಂಟಿಕೊಪ್ಪದ ಸರಕಾರಿ ಪ್ರಾಥಮಿಕ ಶಾಲೆಯಿಂದ ಮುಖ್ಯ ರಸ್ತೆಗಾಗಿ ಶ್ರೀ ಅಯ್ಯಪ್ಪ ದೇವಾಲಯದ ಮುಖಾಂತರ ಗದ್ದೆಹಳ್ಳದ ಎಸ್.ಎಸ್.ಇಂಟರನ್ಯಾಷನಲ್ ಹಾಲ್ನಲ್ಲಿ ನಿರ್ಮಿಸಲಾಗಿರುವ ಗುಂಡುಗುಟ್ಟಿ ಮಂಜನಾಥಯ್ಯ ಸಭಾಂಗಣದವರೆಗೆ ಸಮ್ಮೇಳನಾಧ್ಯಕ್ಷ ಅಬ್ದುಲ್ ರಶೀದ್ ಅವರ ಮೆರವಣಿಗೆ ವಿವಿಧ ಕಲಾ ತಂಡಗಳೊಂದಿಗೆ ನಡೆಯಲಿದೆ ಎಂದರು. ಸಾಹಿತಿ ಡಿ.ಎನ್.ಕೃಷ್ಣಯ್ಯ ಮಹಾದ್ವಾರ, ಸಾಹಿತಿ ಜಿ.ಟಿ ನಾರಾಯಣ್ ರಾವ್ ಪುಸ್ತಕ ಮಳಿಗೆ, ಛಾಯಾಗ್ರಾಹಕ ದಿ.ಬಿ.ಎಫ್. ಮೊಹಿದೀನ್ ಚಿತ್ರಕಲಾ ಮತ್ತು ಛಾಯಾಚಿತ್ರ ಪ್ರದರ್ಶನ ಮಳಿಗೆ ಮಳಿಗೆ, ಕಮಲ ಕರಿಯಪ್ಪ ಜ್ಞಾಪಕಾರ್ಥ ಸ್ತ್ರೀಶಕ್ತಿ ಮಳಿಗೆ, ಗುಂಡುಗುಟ್ಟಿ ಮಂಜುನಾಥಯ್ಯ ಸಭಾಂಗಣ ಮತ್ತು ಕವಿಶಿಷ್ಯ ಪಂಜೆ ಮಂಗೇಶರಾಯರ ವೇದಿಕೆಯ ಉದ್ಘಾಟನೆಯನ್ನು ಗಣ್ಯರು ಮಾಡಲಿದ್ದಾರೆಂದರು. :: ಸಮ್ಮೇಳನ ಉದ್ಘಾಟನೆ :: ಅಂದು ಬೆಳಗ್ಗೆ 10.30 ಕ್ಕೆ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ಅವರು ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಸಮ್ಮೇಳನದ ನೆನಪಿಗಾಗಿ ಹೊರ ತರುವ ಸ್ಮರಣ ಸಂಚಿಕೆ “ಸಾಹಿತ್ಯ ಸೌಹಾರ್ದ” ವನ್ನು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್.ಬೋಸರಾಜುರವರು ಬಿಡುಗಡೆಗೊಳಿಸಲಿದ್ದಾರೆ. :: ವಿವಿಧ ಪುಸ್ತಕಗಳ ಅನಾವರಣ :: ವೇದಿಕೆಯಲ್ಲಿ ಸಾಹಿತಿಗಳಾದ ಇ.ಸುಲೇಮಾನ್ ರಚಿಸಿದ ರಾಗವಿಲ್ಲದ ಕವಿತೆ, ಹೆಚ್.ಮಂಜುನಾಥ್ ರಚಿಸಿದ ಮನುಷ್ಯತ್ವದ ಸಾರ, ಜಯಪ್ರಕಾಶ್ ಪುತ್ತೂರು ರಚಿಸಿದ ವ್ಯಕ್ತಿತ್ವ ವಿಕಸನದ ವಿಚಾರ ಧಾರೆ, ಡಾ.ಬೆಸೂರು ಮೋಹನ್ ಪಾಳೆಗಾರ್ ರಚಿಸಿದ ಸ್ವಾತಂತ್ರ್ಯ ಕ್ರಾಂತಿಯ ಕಿಡಿ, ಗಣೇಶ ಶರ್ಮ ರಚಿಸಿದ ಮಕ್ಕಳ ಕಥೆ, ಹೇಮಂತ್ ಪಾರೇರ ರಚಿಸಿದ ಶಕುನದ ಹಕ್ಕಿ, ಲಾವಣ್ಯ ಮೋಹನ್ ರಚಿಸಿದ ಛಾಯಾ ಕೃತಿಳನ್ನು ಅತಿಥಿ ಗಣ್ಯರು ಅನಾವರಣಗೊಳಿಸಲಿದ್ದಾರೆ. ಉದ್ಘಾಟನಾ ಕಾರ್ಯಕ್ರಮದ ಜಿಲ್ಲೆಯ ಗಾಯಕರಿಂದ ಗೀತ ಗಾಯನ ಕಾರ್ಯಕ್ರಮ ನಡೆಯಲಿದೆ. :: ವಿಚಾರಗೋಷ್ಠಿ :: ಮಧ್ಯಾಹ್ನದ ಬಳಿಕ ನಡೆಯುವ ವಿಚಾರಗೋಷ್ಠಿಯ ಅಧ್ಯಕ್ಷತೆಯನ್ನು ವೈದ್ಯರು ಮತ್ತು ಸಾಹಿತಿಗಳಾದ ಡಾ.ಕೆ.ಬಿ ಸೂರ್ಯ ಕುಮಾರ್ ಅವರು ವಹಿಸಲಿದ್ದು ಆಶಯ ನುಡಿಯನ್ನು ಸಾಹಿತಿಗಳಾದ ಕಾಜೂರು ಸತೀಶ್ ನಡೆಸಿಕೊಡಲಿದ್ದಾರೆ. ಕೊಡಗು ಕಂಡ ಮಹಿಳಾ ಸಾಹಿತಿಗಳು ಮತ್ತು ಅವರ ಕೃತಿಗಳು ವಿಚಾರವಾಗಿ ಸಾಹಿತಿ ಎನ್.ಕೆ.ಮಾಲಾದೇವಿ ಮೂರ್ತಿ ಉಪನ್ಯಾಸ ನೀಡಲಿದ್ದಾರೆ. ಪ್ರವಾಸೋದ್ಯಮ ಮತ್ತು ಕೈಗಾರಿಕೋತ್ಸವದಲ್ಲಿ ಆಗಬೇಕಾದ ಮೂಲಭೂತ ಸೌಕರ್ಯ ಕುರಿತು ಕೊಡಗು ಜಿಲ್ಲಾ ಹೋಂ ಸ್ಟೇ ಅಸೋಸಿಯೇಷನ್ ಅಧ್ಯಕ್ಷೆ ಮೋಂತಿ ಗಣೇಶ್ ಮಾತನಾಡಲಿದ್ದಾರೆ. ವನ್ಯಜೀವಿಗಳ ಉಪಟಳ ಕುರಿತು ಸಂಯುಕ್ತ ಕರ್ನಾಟಕ ಪತ್ರಿಕೆಯ ಜಿಲ್ಲಾ ವರದಿಗಾರರಾದ ಎಸ್.ಜಿ ಉಮೇಶ್ ಉಪನ್ಯಾಸ ನೀಡಲಿದ್ದಾರೆ. ಸಾಹಿತ್ಯ ಪರಿಷತ್ತಿನಲ್ಲಿ ದತ್ತಿ ಸ್ಥಾಪಿಸಿ ಪರಿಷತ್ತಿನ ಕಾರ್ಯಕ್ರಮಗಳಿಗೆ ಬೆನ್ನೆಲುಬಾಗಿ ನಿಂತಿರುವ 10 ದತ್ತಿದಾನಿಗಳನ್ನು ಸನ್ಮಾನಿಸುವ ಕಾರ್ಯಕ್ರಮ ಮತ್ತು ತಾಲೂಕು ಮತ್ತು ಹೋಬಳಿ ಅಧ್ಯಕ್ಷರುಗಳನ್ನು ಸನ್ಮಾನಿಸುವ ಕಾರ್ಯಕ್ರಮ ಇದೇ ಸಂದರ್ಭ ನಡೆಯಲಿದೆ. ಸಂಜೆ ಸಾಂಸ್ಕøತಿಕ ಕಾರ್ಯಕ್ರಮ ಆಯೋಜಿತವಾಗಿದೆ ಎಂದರು. ಸಮ್ಮೇಳನದ ದ್ವಿತೀಯ ದಿನವಾದ ಮೇ30 ರಂದು ಬೆಳಗ್ಗೆ 10 ಗಂಟೆಗೆ ನಡೆಯುವ ವಿಚಾರಗೋಷ್ಠಿಯ ಅಧ್ಯಕ್ಷತೆಯನ್ನು ಮಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಪ್ರೊ.ಕೋಡಿರ ಲೋಕೇಶ್ ಮೊಣ್ಣಪ್ಪ ವಹಿಸಿಕೊಳ್ಳಲಿದ್ದು, ಆಶಯ ನುಡಿಯನ್ನು ಶಕ್ತಿ ಪತ್ರಿಕೆಯ ಸಂಪಾದಕರಾದ ಜಿ.ಚಿದ್ವಿಲಾಸ್ ನಡೆಸಿ ಕೊಡಲಿದ್ದಾರೆ. ಕನ್ನಡ ಕಥಾ ಜಗತ್ತು ಮತ್ತು ಕೊಡಗು ಕುರಿತು ಸಾಹಿತಿ ಡಾ.ಜೆ.ಸೋಮಣ್ಣ, ಕೃಷಿ ಚಟುವಟಿಕೆಯಲ್ಲಿ ಆಧುನಿಕ ತಂತ್ರಜ್ಞಾನ ಬಳಕೆ ಕುರಿತು ಕೃಷಿ ವಿಜ್ಞಾನಿ ಡಾ. ಮುರುಳಿಧರ್ ಮಾತನಾಡಲಿದ್ದಾರೆ. ಸಾಹಿತ್ಯ ಕ್ಷೇತ್ರದತ್ತ ಯುವ ಪೀಳಿಗೆಯನ್ನು ಆಕರ್ಷಿಸುವ ದಾರಿ ಕುರಿತು ಆರ್.ಕೆ.ಬಾಲಚಂದ್ರ ರವರು ಮಾತನಾಡಲಿದ್ದು, ಕೊಡಗು ಕ್ರೀಡೆಯ ತವರೂರು ಆಗಬೇಕಾದ ಅನುಕೂಲತೆಗಳ ಕುರಿತು ಚೆಪ್ಪುಡಿರ ಕಾರ್ಯಪ್ಪ ಮಾತನಾಡಲಿದ್ದಾರೆ ಅಪರಾಹ್ನ ನಡೆಯುವ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಸಾಹಿತಿ ಕೃಪಾ ದೇವರಾಜ್ ವಹಿಸಲಿದ್ದು, ಆಶಯ ನುಡಿಯನ್ನು ಸಾಹಿತಿ ಲಾವಣ್ಯ ಮೋಹನ್ ಆಡಲಿದ್ದಾರೆ. ಮಧ್ಯಾಹ್ನ ಕನ್ನಡ ಗೀತ ಗಾಯನ, ಬಹಿರಂಗ ಆಧಿವೇಶನ, ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ, ಸಮಾರೋಪ ಸಮಾರಂಭ ನಡೆಯಲಿದೆಯೆಂದು ತಿಳಿಸಿದರು. ನಗರದಲ್ಲಿ ಗೋಷ್ಠಿಯಲ್ಲಿ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷರಾದ ಟಿ.ಪಿ.ರಮೇಶ್, ಕುಶಾಲನಗರ ತಾಲ್ಲೂಕು ಕಸಾಪ ಅಧ್ಯಕ್ಷ ಕೆ.ಎಸ್.ನಾಗೇಶ್, ಸಮ್ಮೇಳನದ ಸ್ವಾಗತ ಸಮಿತಿ ಉಪಾಧ್ಯಕ್ಷರು ಹಾಗೂ ಹಣಕಾಸು ಸಮಿತಿ ಅಧ್ಯಕ್ಷರಾದ ಎ. ಲೋಕೇಶ್ ಕುಮಾರ್, ಸುಂಟಿಕೊಪ್ಪ ಹೋಬಳಿ ಅಧ್ಯಕ್ಷ ಪಿ.ಎಫ್.ಸಬಾಸ್ಟಿನ್, ಸ್ಮರಣ ಸಂಚಿಕೆಯ ಸಂಪಾದಕರಾದ ಬಿ.ಸಿ.ದಿನೇಶ್ ಉಪಸ್ಥಿತರಿದ್ದರು.









