
ಮಡಿಕೇರಿ ಮೇ 26 NEWS DESK : ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು ಐತಿಹಾಸಿಕ ಹಿನ್ನೆಲೆ ಹೊಂದಿದೆ. ಮಾತ್ರವಲ್ಲದೇ ತನ್ನ 77 ವರ್ಷಗಳ ಸುದೀರ್ಘ ಸೇವೆಯಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಭವಿಷ್ಯ ರೂಪಿಸಿಕೊಳ್ಳಲು ವೇದಿಕೆ ನೀಡಿದೆ ಎಂದು ಕೊಡಗು ವಿಶ್ವ ವಿದ್ಯಾನಿಲಯದ ಉಪ ಕಲಪತಿ ಪ್ರೊ. ಅಶೋಕ್ ಸಂಗಪ್ಪ ಆಲೂರ ಮೆಚ್ಚುಗೆ ವ್ಯಕ್ತಪಡಿಸಿದರು. ಕಾಲೇಜಿನ ವಾರ್ಷಿಕೋತ್ಸವ, ಕ್ರೀಡೆ ಮತ್ತು ಪ್ರತಿಭೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇಂತಹ ಮಹಾನ್ ಕಾಲೇಜನ್ನು ಮತ್ತಷ್ಟು ಉತ್ತುಂಗಕ್ಕೆ ಕೊಂಡೊಯ್ಯುವ ಕೆಲಸವನ್ನು ಬೋಧಕ ವರ್ಗ ಮತ್ತು ವಿದ್ಯಾರ್ಥಿಗಳು ನಿರಂತರವಾಗಿ ಮಾಡಬೇಕು ಎಂದು ಸಲಹೆ ನೀಡಿದರು. ವಿದ್ಯಾರ್ಥಿಗಳ ಅನುಕೂಲಕ್ಕೆ ತಕ್ಕಂತೆ ಕಾಲೇಜಿನ ಅಭಿವೃದ್ಧಿಗೆ ಎಲ್ಲಾ ರೀತಿಯ ಸಹಾಯ, ಸಹಕಾರ ನೀಡಲಾಗುತ್ತದೆ ಎಂದು ಭರವಸೆ ನೀಡಿದರು. :: ವಿದ್ಯಾರ್ಥಿಗಳು ದೇಶದ ಶಕ್ತಿ :: ಹಿರಿಯ ಪತ್ರಕರ್ತ, ಕೊಡಗು ಚಾನಲ್ ಪ್ರಧಾನ ಸಂಪಾದಕ ಜಿ.ವಿ ರವಿಕುಮಾರ್ ಮಾತಾಡಿ, ವಿದ್ಯಾರ್ಥಿಗಳಿಗೆ ಗುರಿ ಮತ್ತು ಪರಿಶ್ರಮ ಅತೀ ಮುಖ್ಯ. ಸೋಮಾರಿತನ ಬಿಟ್ಟು ಸಮಾಜದ ತಿಳುವಳಿಕೆ ಹೊಂದಬೇಕು. ವಿದ್ಯಾರ್ಥಿ ಶಕ್ತಿಯೇ ದೇಶದ ಶಕ್ತಿ ಎಂಬುದನ್ನು ಮನಗಾಣಬೇಕು ಎಂದು ತಮಿಳುನಾಡು ಚುನಾವಣೆಯನ್ನು ಉದಾಹರಿಸಿ ಎಂದು ಸಲಹೆ ನೀಡಿದರು. ಪ್ರಪಂಚ ವೇಗವಾಗಿ ಬದಲಾಗುತ್ತಿದ್ದು, ವಿದ್ಯಾರ್ಥಿಗಳು ಕೂಡ ಅದರಲ್ಲಿ ಒಂದಾಗಬೇಕು. ಸಮಯ ಬಹಳ ಮುಖ್ಯವಾಗಿದ್ದು ಬದುಕಲ್ಲಿ ಇದನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಪ್ರತಿ ವಿಷಯವನ್ನು ಅಧ್ಯಯನ ಮಾಡಬೇಕು. ಯಾವ ವಿಷಯದ ಬಗ್ಗೆಯೂ ಕೀಳರಿಮೆ ಸಲ್ಲದು ಎಂದು ಕಿವಿ ಮಾತು ಹೇಳಿದರು. ಸಾಮಾಜಿಕ ಜವಾಬ್ದಾರಿಯ ಜೊತೆಯಲ್ಲಿ ಮಾನವೀಯತೆ ಬೆಳೆಸಿಕೊಂಡ ಮುನ್ನಡೆಯಿರಿ ಎಂದು ರವಿ ಕುಮಾರ್ ಹೇಳಿದರು.
ಕೆನರಾ ಬ್ಯಾಂಕ್ನ ಪ್ರಾದೇಶಿಕ ವ್ಯವಸ್ಥಾಪಕ ವಿನಾಯಕ ಮಾತನಾಡಿ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು ಮತ್ತು ಕೆನರಾ ಬ್ಯಾಂಕ್ ನಡುವೆ ಸುದೀರ್ಘ ಸೇವೆಯ ಇತಿಹಾಸವಿದೆ. ಬ್ಯಾಂಕ್ ಸೇವೆ ಮತ್ತು ಕಾಲೇಜಿನ ಅಗತ್ಯತೆಗಳನ್ನು ತಿಳಿಸಿದಲ್ಲಿ ಮತ್ತಷ್ಟು ಉತ್ತಮ ಸೇವೆ ನೀಡಲು ಸಾಧ್ಯವಾಗುತ್ತದೆ ಎಂದು ಹೇಳಿದರು. :: ‘ಝೆಂಜಿ’ಗಳಿಂದ ಬದಲಾವಣೆ :: ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಹೆಚ್.ಜೆ.ರಾಕೇಶ್ ಮಾತನಾಡಿ, ಝೆಂಜಿಗಳಿಂದ ದೇಶದಲ್ಲಿ ಬದಲಾವಣೆ ತರಲು ಸಾಧ್ಯವಿದೆ. 77 ಸಂವತ್ಸರಗಳನ್ನು ಕಂಡಿರುವ ಕಾಲೇಜು ಕಟ್ಟಡ ಇಂದು ಶಿಥಿಲಾವಸ್ಥೆಯಲ್ಲಿದೆ. ಕೊಡಗಿನ ವಿದ್ಯಾರ್ಥಿಗಳು ವಲಸೆ ಹೋಗುತ್ತಿರುವ ಕಾರಣದಿಂದ ಹಲವು ಕೋರ್ಸ್ಗಳು ಕಡಿತವಾಗುತ್ತಿದೆ ಎಂದು ವಿಷಾಧಿಸಿದರು. ಯಾವುದೇ ಕಾರಣಕ್ಕೂ ಇದಕ್ಕೆ ಅವಕಾಶ ನೀಡಬೇಡಿ ಎಂದು ಮನವಿ ಮಾಡಿದರಲ್ಲದೇ, ಹೋರಾಟದ ಮೂಲಕವಾದರೂ ಯುವ ಸಮೂಹ ಕಾಲೇಜನ್ನು ಉಳಿಸಿಕೊಳ್ಳಬೇಕು. ಆ ದಿಸೆಯಲ್ಲಿ ಝೆಂಜಿ ಪೀಳಿಗೆ ನಿರ್ಧಾರ ಮಾಡಬೇಕು ಎಂದು ಕರೆ ನೀಡಿದರು. ಝೆಂಜಿ ಪೀಳಿಗೆ ರೀಲ್ಸ್ ಬಿಟ್ಟು ತಮ್ಮ ಭವಿಷ್ಯ ಕಟ್ಟಿಕೊಳ್ಳುವ ಕಡೆ ಗಮನ ಹರಿಸಬೇಕು. ಆಧುನಿಕ ಯುಗದಲ್ಲಿ ಸುಲಭವಾಗಿ ಸಿಗುವ ವಿಫುಲ ಅವಕಾಶಗಳನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳಬೇಕು. ಕಲಿಕೆಯನ್ನು ಶ್ರದ್ಧೆಯಿಂದ ಮಾಡಬೇಕು ಎಂದು ಹೇಳಿದರಲ್ಲದೇ, ಸಮಾಜ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಕಾರಾತ್ಮಕ ಬದಲಾವಣೆ ತರಲು ಝೆಂಜಿ ಪೀಳಿಗೆಯಿಂದ ಮಾತ್ರವೇ ಸಾಧ್ಯ ಎಂದು ಪ್ರತಿಪಾದಿಸಿದರು. :: ಶ್ರಮದಿಂದ ‘ಇತಿಹಾಸ’ ಸಾಧ್ಯ :: ಕಾಲೇಜು ಹಳೇ ವಿದಾರ್ಥಿ ಸಂಘದ ಅಧ್ಯಕ್ಷ ಬೊಳ್ಳಜ್ಜಿರ ಅಯ್ಯಪ್ಪ ಮಾತನಾಡಿ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು ಸಾಧಕರ ಕಾಲೇಜು. ಅಷ್ಟೋಂದು ದೊಡ್ಡ ಮಟ್ದದ ಸಾಧಕರು ಈ ಕಾಲೇಜಿನ ಮೂಲಕ ವಿದ್ಯಾರ್ಜನೆ ಮಾಡಿದ್ದಾರೆ. ರಾಜಕೀಯ, ಸೇನೆ, ನಾಗರಿಕ ಸೇವೆಯಲ್ಲಿ ಇಂದಿಗೂ ಈ ಕಾಲೇಜಿನ ಮಾಜಿ ವಿದ್ಯಾರ್ಥಿಗಳಿದ್ದಾರೆ. ಕಾಲೇಜು ದಿನಗಳಲ್ಲಿ ಶ್ರಮ ವಹಿಸಿದವರು ಮಾತ್ರವೇ ಇಂತಹ ಸಾಧನೆಯ ಇತಿಹಾಸ ಬರೆಯುತ್ತಾರೆ ಎಂದು ಸಲಹೆ ನೀಡಿದರು. ಕಷ್ಟಪಟ್ಟರೆ ಮಾತ್ರವೇ ಗುರಿ ತಲುಪಲು ಸಾಧ್ಯ ಎಂದು ಹೇಳಿದರು. :: ಸಾಧನೆಯೇ ಜೀವಂತ :: ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು ಪ್ರಾಂಶುಪಾಲ ಮೇಜರ್ ಪ್ರೋ. ಬಿ.ರಾಘವ ಮಾತನಾಡಿ, ಓರ್ವ ವ್ಯಕ್ತಿಯ ಸಾಧನೆ ಮಾತ್ರವೇ ಆತ ಸತ್ತ ಮೇಲೂ ಜೀವಂತವಿರುತ್ತದೆ. ಅಂತಹ ಸಾಧಕರ ಸಾಲಿನಲ್ಲಿ ಈ ಕಾಲೇಜು ವಿದ್ಯಾರ್ಥಿಗಳ ಹೆಸರು ಇರಬೇಕು ಎಂದು ಆಶಿಸಿದರು. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಪರಿಶ್ರಮದಿಂದ ವಿದ್ಯಾರ್ಜನೆ ಮಾಡಬೇಕು ಎಂದು ಹೇಳಿದರು. :: ಸನ್ಮಾನದ ಗೌರವ: ಕೆನರಾ ಬ್ಯಾಂಕ್ನ ಪ್ರಾದೇಶಿಕ ವ್ಯವಸ್ಥಾಪಕ ವಿನಾಯಕ ವಿನಾಯಕ, ಕಾಲೇಜು ಹಳೇ ವಿದಾರ್ಥಿ ಸಂಘದ ಅಧ್ಯಕ್ಷ ಬೊಳ್ಳಜ್ಜಿರ ಅಯ್ಯಪ್ಪ, ಮಾಜಿ ವಿದ್ಯಾರ್ಥಿ ಹರ್ಷ್ ದೇವಯ್ಯ, ಪ್ರಾಣಿ ಶಾಸ್ತ್ರ ವಿಭಾಗದ ಕೃಷ್ಣ, ಗ್ರಂಥಾಲಯ ಮೇಲ್ವಿಚಾರಕಿ ಡಾ.ವಿಜಯಲತಾ, ಎನ್ಸಿಸಿ ಜೂನಿಯರ್ ಅಂಡರ್ ಆಫೀಸರ್ ಚರಿಷ್ಮ ರೈ, ಮೇಜರ್ ಪ್ರೋ. ಬಿ.ರಾಘವ, ಕೊಡಗು ವಿ.ವಿ ಉಪ ಕುಲಪತಿ ಪ್ರೋ. ಅಶೋಕ್ ಸಂಗಪ್ಪ ಆಲೂರ, ಹಿರಿಯ ಪತ್ರಕರ್ತ ಜಿ.ವಿ ರವಿಕುಮಾರ್, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಹೆಚ್.ಜೆ.ರಾಕೇಶ್ ಅವರನ್ನು ಕಾಲೇಜು ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಇದೇ ಸಂದರ್ಭ ಶೈಕ್ಷಣಿಕ ಸಾಧನೆಗಾಗಿ ವಿದ್ಯಾರ್ಥಿಗಳಿಗೆ ದತ್ತಿ ನಿಧಿ ಪ್ರತಿಭಾ ಪುರಸ್ಕಾರ, ಎನ್ಸಿಸಿ, ಎನ್ಎಸ್ಎಸ್ ಹಾಗೂ ಕ್ರೀಡೆಯಲ್ಲಿ ಕಾಲೇಜನ್ನು ಪ್ರತಿನಿಧಿಸಿ ಗೌರವಕ್ಕೆ ಪಾತ್ರರಾದವರಿಗೆ ಗಣ್ಯರು ಪ್ರೋತ್ಸಾಹ ಧನ, ನೆನಪಿನ ಕಾಣಿಕೆ ಮತ್ತು ಪ್ರಮಾಣ ಪತ್ರಗಳನ್ನು ನೀಡಿದರು. ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡು ವಿಜೇತರಾದ ವಿದ್ಯಾರ್ಥಿಗಳಿಗೆ ಗಣ್ಯರು ಬಹುಮಾನಗಳನ್ನು ವಿತರಿಸಿದರು. ಕಾಲೇಜು ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳ ಪೋಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. :: ಸಾಂಸ್ಕೃತಿಕ ಕಾರ್ಯಕ್ರಮ :: ಸಭಾ ಕಾರ್ಯಕ್ರಮದ ಬಳಿ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು. ವಿವಿಧ ವಿಭಾಗಗಳ ವಿದ್ಯಾರ್ಥಿಗಳು ಸಮೂಹ ನೃತ್ಯ, ಹಾಡುಗಾರಿಕೆ ಮತ್ತಿತ್ತರ ಸಾಂಸ್ಕøತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾಲೇಜು ವಾರ್ಷಿಕೋತ್ಸವಕ್ಕೆ ಮೆರುಗು ತುಂಬಿದರು. ಸಭಾಂಗಣದಲ್ಲಿದ್ದ ವಿದ್ಯಾರ್ಥಿಗಳು ಚಪ್ಪಾಳೆ, ಶಿಳ್ಳೆ ಸಹಿತ ಹರ್ಷೊದ್ಘಾರಗಳಿಂದ ಕಲಾವಿದ ವಿದ್ಯಾರ್ಥಿ ಪ್ರತಿಭೆಗಳನ್ನು ಪ್ರೋತ್ಸಾಹಿಸಿದರು.









