
ಮಡಿಕೇರಿ ಮೇ 26 NEWS DESK : ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಕಾರ್ಯಕ್ರಮಗಳು ಗ್ರಾಮ ಮಟ್ಟಕ್ಕೂ ತಲುಪುತ್ತಿದ್ದು, ಅರೆಭಾಷೆ ಕಲಿಕೆ ಮತ್ತು ಅಭಿವೃದ್ಧಿಗೆ ಮತ್ತಷ್ಟು ಶ್ರಮಿಸುವಂತಾಗಬೇಕು ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ಅವರು ಹೇಳಿದ್ದಾರೆ. ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಮತ್ತು ಮರಗೋಡು ಗೌಡ ಸಮಾಜ ಇವರ ಸಂಯುಕ್ತಾಶ್ರಯದಲ್ಲಿ ಮರಗೋಡು ಗೌಡ ಸಮಾಜದ ಆವರಣದಲ್ಲಿ ಅರೆಭಾಷೆ ಗ್ರಾಮೋತ್ಸವ ಕಾರ್ಯಕ್ರಮದ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಕನ್ನಡದ ಉಪ ಭಾಷೆಯಾದ ಅರೆಭಾಷೆಯನ್ನು ಉಳಿಸಿ ಬೆಳೆಸಿದಲ್ಲಿ ಕನ್ನಡ ಭಾಷೆಯನ್ನೂ ಸಹ ಮತ್ತಷ್ಟು ಔನ್ನತ್ಯಕ್ಕೆ ಕೊಂಡೊಯ್ಯಲು ಸಾಧ್ಯ. ಆ ನಿಟ್ಟಿನಲ್ಲಿ ಅರೆಭಾಷೆಯನ್ನು ಮಕ್ಕಳು ಮತ್ತು ಯುವಜನರಿಗೆ ಕಲಿಸುವಂತಾಗಬೇಕು ಎಂದು ಅವರು ನುಡಿದರು. ಅರೆಭಾಷೆಯು ಒಂದು ವಿಶಿಷ್ಟ ಭಾಷೆಯಾಗಿದ್ದು, ಕನ್ನಡ ಭಾಷೆಗೆ ಹತ್ತಿರವಾಗಿದೆ. ಆ ದಿಸೆಯಲ್ಲಿ ಅರೆಭಾಷೆ ಸಂಸ್ಕೃತಿ, ಸಾಹಿತ್ಯ, ಪರಂಪರೆ, ಆಚಾರ-ವಿಚಾರಗಳನ್ನು ಉಳಿಸಿಕೊಂಡು ಹೋಗಬೇಕು ಎಂದು ಡಾ.ಮಂತರ್ ಗೌಡ ಅವರು ಸಲಹೆ ಮಾಡಿದರು. ಬಳಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿ ಅವರು ಅಕಾಡೆಮಿ ಮೂಲಕ ಹಲವು ಪುಸ್ತಕಗಳನ್ನು ಹೊರತರಲಾಗುತ್ತಿದೆ. ಹಾಗೆಯೇ ತ್ರೈಮಾಸಿಕ ‘ಹಿಂಗಾರ’ ಪುಸ್ತಕವನ್ನು ಪ್ರಕಟಿಸಲಾಗುತ್ತಿದ್ದು, ಇದನ್ನು ಪ್ರತಿ ಕುಟುಂಬದವರು ಪಡೆಯುವಂತಾಗಬೇಕು ಎಂದರು. ಪುಸ್ತಕ ಅಧ್ಯಯನದಿಂದ ಅರೆಭಾಷೆ ಮತ್ತು ಸಾಹಿತ್ಯ ಬೆಳವಣಿಗೆಗೆ ಸಹಕಾರಿಯಾಗಲಿದೆ. ಆ ನಿಟ್ಟಿನಲ್ಲಿ ಮಕ್ಕಳು ಅರೆಭಾಷೆ ಕಲಿಕೆಗೆ ಅನುಕೂಲವಾಗಲಿದೆ ಎಂದು ವಿವರಿಸಿದರು. ಅರೆಭಾಷೆಯು ಇಂದು ವ್ಯವಹಾರಿಕ ಭಾಷೆಯಾಗಿ ಬೆಳೆದಿದೆ. ಆ ನಿಟ್ಟಿನಲ್ಲಿ ಅರೆಭಾಷೆ ಮಾತನಾಡಲು ಹಿಂಜರಿಕೆ ಪಡದೆ, ಎಲ್ಲರೂ ಅರೆಭಾಷೆ ಮಾತನಾಡುವಂತಾಗಬೇಕು ಎಂದು ಕರೆ ನೀಡಿದರು. ಶಾಲಾ ಕಾಲೇಜುಗಳಲ್ಲಿ ಅರೆಭಾಷೆ ಸಂಘಗಳನ್ನು ಸ್ಥಾಪಿಸುವ ಮೂಲಕ ಅರೆಭಾಷೆ ಕಲಿಕಾ ಬೆಳವಣಿಗೆಗೆ ಶ್ರಮಿಸಲಾಗಿದೆ. ಆ ನಿಟ್ಟಿನಲ್ಲಿ ಭಾಷೆ, ಸಾಹಿತ್ಯ, ಸಂಸ್ಕೃತಿ, ಕಲೆಗಳ ಪರಿಚಯಕ್ಕೆ ಅನುಕೂಲವಾಗಿದೆ ಎಂದರು. ಅರೆಭಾಷೆಯಲ್ಲಿ ನಾಟಕ ಪ್ರದರ್ಶನ ಏರ್ಪಡಿಸುವ ಮೂಲಕ ಅರೆಭಾಷೆಯನ್ನು ಎಲ್ಲರಿಗೂ ತಲುಪಿಸುವಲ್ಲಿ ಮುಂದಾಗಲಾಗಿದೆ. ಹಲವು ವಿಚಾರ ಸಂಕಿರಣಗಳನ್ನು ಏರ್ಪಡಿಸಿ ಐನ್ಮನೆಗಳ ಸಂಸ್ಕೃತಿ ಮತ್ತು ಅಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದು ಅಕಾಡೆಮಿ ಅಧ್ಯಕ್ಷರು ತಿಳಿಸಿದರು. ಅಕಾಡೆಮಿ ಮಾಜಿ ಅಧ್ಯಕ್ಷರಾದ ಕೊಲ್ಯದ ಗಿರೀಶ್ ಅವರು ಮಾತನಾಡಿ ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಆರಂಭದಿಂದ ಇಲ್ಲಿಯವರೆಗೂ ಉತ್ತಮ ಕೆಲಸ ಮಾಡಿಕೊಂಡು ಬರಲಾಗುತ್ತಿದೆ ಎಂದರು. ಅರೆಭಾಷೆ ಸಂಸ್ಕೃತಿ, ಸಾಹಿತ್ಯ, ಕಲೆಗಳು, ಪರಂಪರೆ ಬಗ್ಗೆ ಎಲ್ಲೆಡೆ ಪಸರಿಸುವಲ್ಲಿ ಶ್ರಮಿಸಲಾಗುತ್ತಿದೆ. ಅನೇಕ ಪುಸ್ತಕಗಳನ್ನು ಪ್ರಕಟಿಸುವ ಮೂಲಕ ಅರೆಭಾಷೆ ಅಭಿವೃದ್ಧಿಗೆ ಕ್ರಮವಹಿಸಲಾಗಿದೆ ಎಂದರು. ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷರಾದ ಮಂದ್ರೀರ ಮೋಹನ್ದಾಸ್ ಅವರು ಮಾತನಾಡಿ ಅರೆಭಾಷೆ ಸಂಸ್ಕøತಿ, ಸಾಹಿತ್ಯ, ಕಲೆಗಳನ್ನು ಉಳಿಸುವಲ್ಲಿ ಗ್ರಾಮೋತ್ಸವ ಮತ್ತು ಗಡಿನಾಡ ಉತ್ಸವ ಸಹಕಾರಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಮರಗೋಡು ಗೌಡ ಸಮಾಜದ ಅಧ್ಯಕ್ಷರಾದ ಕಟ್ಟೆಮನೆ ಜನಾರ್ಧನ ಅವರು ಮಾತನಾಡಿ ಅರೆಭಾಷೆಯನ್ನು ಮತ್ತಷ್ಟು ಉಳಿಸಿ ಬೆಳೆಸಿಕೊಂಡು ಹೋಗಬೇಕು. ಭಾಷೆ ಉಳಿದರೆ ಸಮಾಜ ಉಳಿಯಲು ಸಾಧ್ಯ. ಹಾಗೆಯೇ ಅನಾದಿಕಾಲದಿಂದಲೂ ಉಳಿಸಿಕೊಂಡು ಬಂದಿರುವ ಅರೆಭಾಷೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಬೇಕು ಎಂದರು. ಮೈಸೂರಿನ ಗೌಡ ವಿದ್ಯಾಸಂಘದ ಮಾಜಿ ಅದ್ಯಕ್ಷರಾದ ತೋಟಂಬೈಲು ಮನೋಹರ್ ಅವರು ಮಾತನಾಡಿ ಅರೆಭಾಷೆಯನ್ನು ಹೆಚ್ಚು ಹೆಚ್ಚು ಬಳಸುವ ಮೂಲಕ ಪ್ರೋತ್ಸಾಹಿಸಬೇಕು ಎಂದರು. ಅರೆಭಾಷೆಯನ್ನು ಹಳ್ಳಿಯಿಂದ ಡೆಲ್ಲಿಯವರೆಗೆ ಕೊಂಡೊಯ್ದು ಅರೆಭಾಷೆ ಮಹತ್ವವನ್ನು ತಿಳಿಸುವುದು ಶ್ಲಾಘನೀಯವಾಗಿದೆ. ಯಕ್ಷಗಾನ, ಹಾಡುಗಾರಿಕೆ, ನಾಟಕ ಹೀಗೆ ವಿವಿಧ ಕಾರ್ಯಕ್ರಮ ಆಯೋಜಿಸುವ ಮೂಲಕ ಉತ್ತಮ ಕೆಲಸ ಮಾಡಲಾಗುತ್ತದೆ ಎಂದರು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಅರೆಭಾಷಿಕ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು. ನಿವೃತ್ತ ಪ್ರಾಂಶುಪಾಲರಾದ ಚೆರಿಯಮನೆ ರಾಮಚಂದ್ರ ಅವರು ಮಾತನಾಡಿ ಅರೆಭಾಷಿಕರ ಇತಿಹಾಸ ಮತ್ತು ಐತಿಹಾಸಿಕ ಹಿನ್ನೆಲೆ ಹೊಂದಿದ್ದು, ಅರೆಭಾಷಿಕರ ಬದುಕು, ಕೃಷಿ ಚಟುವಟಿಕೆ ವಿಶಿಷ್ಟವಾಗಿದೆ ಎಂದರು. ಅರೆಭಾಷಿಕರು ಕಾಸರಗೋಡಿನಿಂದ ಅರಕಲಗೋಡು ವರೆಗೆ, ದಕ್ಷಿಣ ಕನ್ನಡದಿಂದ ಪಿರಿಯಾಪಟ್ಟಣದವರೆಗೆ ವಾಸ ಮಾಡುತ್ತಿದ್ದು, ಅರೆಭಾಷೆ ಹೆಚ್ಚು ಹೆಚ್ಚು ಮಾತನಾಡಲು ಪ್ರೋತ್ಸಾಹಿಸಬೇಕು ಎಂದರು. ಅರೆಭಾಷೆ ಸಂಪ್ರದಾಯ, ಸಂಸ್ಕøತಿ, ಆಚಾರ-ವಿಚಾರಗಳು ವಿಭಿನ್ನವಾಗಿದೆ. ಪಟ್ಟೆದಾರರ ಸಂಸ್ಕøತಿ, ಅರಮನೆ- ಗುರುಮನೆ, ಹಬ್ಬ ಹರಿದಿನಗಳು, ಹರಿಸೇವೆ, ಕೆಡ್ಡಾಸ ಹಬ್ಬ, ಸೋಬಾನೆ ಪದಗಳು ಹೀಗೆ ವಿಭಿನ್ನತೆಯ ನಾಗರಿಕತೆಯನ್ನು ಹೊಂದಿದೆ ಎಂದು ವಿವರಿಸಿದರು. ಅರೆಭಾಷೆ ಸಾಹಿತ್ಯ, ಸಂಸ್ಕøತಿ ಬೆಳವಣಿಗೆಯಲ್ಲಿ ಕೋಡಿ ಕುಶಾಲಪ್ಪ ಗೌಡ ಸೇರಿದಂತೆ ಹಲವರು ಶ್ರಮಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ಅಧ್ಯಯನಗಳು ಆಗಬೇಕು ಎಂದು ರಾಮಚಂದ್ರ ಅವರು ವಿವರಿಸಿದರು. ಕಾರ್ಯಕ್ರಮ ಸಂಚಾಲಕರಾದ ಸಂದೀಪ್ ಪೂಳಕಂಡ ಅವರು ಮಾತನಾಡಿ ರಾಷ್ಟ್ರದಲ್ಲಿ ಅನೇಕ ಭಾಷೆಗಳಿದ್ದು, ಭಾಷೆ ಸಂಸ್ಕೃತಿ ಪ್ರತಿಯೊಬ್ಬರ ಅವಿನಾಭಾವ ಸಂಬಂಧವನ್ನು ಹೊಂದಿವೆ ಎಂದು ಅವರು ನುಡಿದರು. ಹಿಂದೆ ಅರೆಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿ ವಾಸಮಾಡುವ ಪ್ರದೇಶವನ್ನು ಮೇಲಿನ ಕೊಡಗು ಮತ್ತು ಕೆಳಗಿನ ಕೊಡಗು ಎಂದು ಹೇಳಲಾಗಿತ್ತು ಎಂದು ಸ್ಮರಿಸಿದರು. ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಉಳಿಯಬೇಕು. ಸಮಾಜದಲ್ಲಿ ಒಗ್ಗಟ್ಟು ಇರಬೇಕು. ಭಾಷೆ ಮತ್ತು ಸಂಸ್ಕೃತಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಇದೇ ಸಂದರ್ಭದಲ್ಲಿ ಕೋರಿದರು. ಸೂರ್ತಲೆ ವಾರಿಜ ಅವರು ಬರೆದಿರುವ ‘ಅರ್ಸು ಮತ್ತು ಪ್ರಧಾನಿನ ಕಥೆ’ ಪುಸ್ತಕವನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯಿಂದ ಹೊರತಂದಿರುವ ಹಲವು ಪುಸ್ತಕಗಳನ್ನು ಮರಗೋಡು ಗ್ರಾಮ ಪಂಚಾಯಿತಿಗೆ ನೀಡಲಾಯಿತು. ಮರಗೋಡು ವ್ಯಾಪ್ತಿಯ ಪಟ್ಟೆದಾರರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು. ಮರಗೋಡು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಕಾಂಗೀರ ಸತೀಶ್, ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜದ ಬೆಂಗಳೂರಿನ ಅಧ್ಯಕ್ಷರಾದ ಪಾಣತ್ತಲೆ ಪಳಂಗಪ್ಪ, ಮರಗೋಡು ಗೌಡ ಸಮಾಜದ ಮಾಜಿ ಅಧ್ಯಕ್ಷರಾದ ದೇವಜನ ನಾಣಯ್ಯ, ನಿವೃತ್ತ ಪೊಲೀಸ್ ಅಧಿಕಾರಿ ಅಪ್ಪಯಂಡ್ರ ದೇವಯ್ಯ, ಅಕಾಡೆಮಿ ಸದಸ್ಯರಾದ ಸೂದನ ಈರಪ್ಪ, ಪಿ.ಎಸ್.ಕಾರ್ಯಪ್ಪ, ತೇಜಕುಮಾರ ಕುಡೆಕಲ್, ಕುದ್ಪಾಜೆ ಪ್ರಕಾಶ್, ಚಂದ್ರಾವತಿ ಬಡ್ಡಡ್ಕ, ಲತಾ ಪ್ರಕಾಶ್ ಕುದ್ಪಾಜೆ, ವಿನೋದ್ ಮೂಡಗದ್ದೆ, ಮರಗೋಡು ಗ್ರಾ.ಪಂ.ಪಿಡಿಒ ಶೋಭರಾಣಿ ಇತರರು ಇದ್ದರು. ವಿನೋದ್ ಮೂಡಗದ್ದೆ ಸ್ವಾಗತಿಸಿದರು. ಡೀನಾಪ್ರಭಾ ಮತ್ತು ತೇಜ ಪ್ರವೀಣ್ ಅವರು ನಿರೂಪಿಸಿದರು. ರೋಹಿಣಿ ಚೆರಿಯಮನೆ ಮತ್ತು ತಂಡದವರು ಪ್ರಾರ್ಥಿಸಿದರು. ವೆಂಕಟೇಶ್ ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು.









