

ಮಡಿಕೇರಿ NEWS DESK ಮೇ 28 : ಸರಕಾರ ವಿಧಿಸುತ್ತಿರುವ ತೆರಿಗೆ ಹೊರೆ ದೇಶದ ಜನಸಾಮಾನ್ಯರನ್ನು ಕಂಗಾಲಾಗಿಸಿದೆ ಎಂದು ಆಮ್ ಆದ್ಮಿ ಪಾರ್ಟಿಯ ಕೊಡಗು ಜಿಲ್ಲಾ ಘಟಕ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಮ್ ಆದ್ಮಿ ಪಾರ್ಟಿಯ ಕಾನೂನು ಸಲಹೆಗಾರ ಕೆ.ಪಿ.ಬಾಲಸುಬ್ರಹ್ಮಣ್ಯ ಅವರು ಮಧ್ಯ ಪ್ರಾಚ್ಯದ ಯುದ್ಧದ ಹಿನ್ನೆಲೆ ತೈಲದ ಕೊರತೆ ಇರುವುದರಿಂದ ಬೆಲೆ ಹೆಚ್ಚಳವೆನ್ನಲಾಗುತ್ತ್ತಿದೆ. ಬೆಲೆ ಹೆಚ್ಚಳ ಮಾಡಿದರೆ ಕೊರತೆ ಇರುವ ತೈಲ ಲಭ್ಯವಾಗುತ್ತದೆಯೇ ಎಂದು ಲೇವಡಿ ಮಾಡಿದರು. ತೈಲ ಬೆಲೆ ಹೆಚ್ಚಳದಿಂದ ಬೃಹತ್ ತೈಲ ಕಂಪೆನಿಗಳು ಲಾಭ ಪಡೆಯುತ್ತಿವೆ, ಇಂತಹ ವಿಚಾರಗಳನ್ನು ಜನಸಾಮಾನ್ಯರು ಪ್ರಶ್ನಿಸಬೇಕಿದೆ. ಒಂದು ಟೂತ್ ಪೇಸ್ಟ್ ಕೊಳ್ಳುವಾಗ ಅದಾನಿ ನೀಡುವಷ್ಟೆ ತೆರಿಗೆಯನ್ನು ಸಮಾಜದ ಕೆಳ ಸ್ತರದಲ್ಲಿರುವ ಜನಸಾಮಾನ್ಯರು ಕೂಡ ನೀಡುತ್ತಾರೆ. ಪ್ರಸ್ತುತ ಅತ್ಯಧಿಕ ತೆರಿಗೆ ಪಾವತಿಸುತ್ತಿರುವವರು ಜನಸಾಮಾನ್ಯರೇ ಆಗಿದ್ದಾರೆ. ಇಂದಿನ ತೆರಿಗೆಗಳು ಹೆಚ್ಚಿನ ಹೊರೆಯಾಗುತ್ತಿರುವುದು ಕಳವಳಕಾರಿ ಎಂದರು. ಪ್ರಮುಖ ರಾಜಕೀಯ ಪಕ್ಷಗಳು ಜನ ಹಿತಕ್ಕೆ ಪೂರಕವಾಗಿ ಕಾರ್ಯನಿರ್ವಹಿಸದೆ ಸ್ವಹಿತಾಸಕ್ತಿ ಮತ್ತು ಕುಟುಂಬ ರಾಜಕಾರಣದಲ್ಲಿ ತೊಡಗಿಸಿಕೊಂಡಿವೆ. ಕೇವಲ ದೇವರು ಧರ್ಮದ ವಿಚಾರಗಳನ್ನಷ್ಟೆ ಮುಂದಿರಿಸಿಕೊAಡು ಬಿಜೆಪಿ ಅಧಿಕಾರಕ್ಕೆ ಬರುತ್ತಿದೆ. ಗುಡಿ ಗೋಪುರ ದೇವಸ್ಥಾನಗಳ ಒಳಗಿರುವ ದೇವರನ್ನು ಹೊರ ತಂದು ಅವುಗಳ ಹೆಸರಿನಲ್ಲಿ ಓಟು ಪಡೆಯುವ ಪ್ರಯತ್ನಗಳು ನಡೆಯುತ್ತಿದೆ. ಆಡಳಿತ ಪಕ್ಷದ ಇಂತಹ ಧೋರಣೆಗಳನ್ನು ಜನ ಪ್ರಶ್ನಿಸುವುದು ಅತ್ಯವಶ್ಯಕವಾಗಿದೆ. ಆದರೆ ದೌರ್ಭಾಗ್ಯವೆಂದರೆ ಕೇಂದ್ರ ಸರಕಾರವನ್ನು ಪ್ರಶ್ನಿಸುವುದಕ್ಕೆ ಬದಲಾಗಿ, ಪ್ರತಿ ಪಕ್ಷಗಳನ್ನು ಪ್ರಶ್ನಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೇಂದ್ರ ಸರ್ಕಾರವು ಇಂಧನ ಬೆಲೆ ಹೆಚ್ಚಳ ಮಾಡುತ್ತಿದ್ದರೆ, ರಾಜ್ಯದ ಕಾಂಗ್ರೆಸ್ ಪ್ರಮುಖರನ್ನು ನೀವೇಕೆ ಇಂಧನ ದರ ಕಡಿಮೆ ಮಾಡುತ್ತಿಲ್ಲವೆಂದು ಪ್ರಶ್ನಿಸಲಾಗುತ್ತಿದೆ ಎಂದು ವ್ಯಂಗ್ಯವಾಡಿದರು. ಆಮ್ ಆದ್ಮಿ ಪಕ್ಷಕ್ಕೆ ಯಾವುದೇ ಪಕ್ಷಗಳು ವೈರಿಗಳಲ್ಲ. ಬದಲಾಗಿ ಎದುರಾಳಿಗಳಷ್ಟೆ ಎಂದು ಸ್ಪಷ್ಟಪಡಿಸಿದ ಕೆ.ಪಿ.ಬಾಲಸುಬ್ರಹ್ಮಣ್ಯ ಅವರು, ಅದೇ ಬಿಜೆಪಿ ಎಎಪಿಯನ್ನು ಶತ್ರುವಿನಂತೆ, ವೈರಿಯಂತೆ ಕಾಣುತ್ತಿದೆ. ಪ್ರಸ್ತುತ ಕೇವಲ ಅಭಿವೃದ್ಧಿ ಕಾರ್ಯಗಳಿಂದಷ್ಟೆ ಚುನಾವಣೆ ಗೆಲ್ಲುತ್ತೇನೆ ಎನ್ನುವುದು ಮರೀಚಿಕೆ. ಧರ್ಮ ದೇವರುಗಳ ಆಧಾರದಲ್ಲಿ ಮತ ಪಡೆಯುವ ಮೂಲಕ ರಾಜಕೀಯ ಅಧಿಕಾರ ಪಡೆದು ದುಡ್ಡು ಹೊಡೆಯುವ ಪ್ರಯತ್ನವಷ್ಟೆ ನಡೆಯುತ್ತಿದೆಯೆಂದು ಆರೋಪಿಸಿದರು. ಸಂವಿಧಾನದಲ್ಲಿ ಇರುವಂತೆ ಜಾತ್ಯತೀತ ಚಿಂತನೆಗಳನ್ನು ಸಮಾಜದಲ್ಲಿ ಪಸರಿಸುವ, ಗ್ರಾಮ ಸ್ವರಾಜ್ಯವನ್ನು ಸ್ಥಾಪಿಸುವ ಚಿಂತನೆಯನ್ನು ಆಮ್ ಆದ್ಮಿ ಪಾರ್ಟಿ ಹೊಂದಿದೆ. ಜನ ಸಾಮಾನ್ಯರು ತಮ್ಮ ಸಂಕಷ್ಟಗಳನ್ನು ಮತ್ತು ಸಮಸ್ಯೆಗಳನ್ನು ಹೇಳಿಕೊಂಡರೆ ಅದರ ನೈಜತೆಯನ್ನು ಪರಿಶೀಲಿಸಿ ನ್ಯಾಯ ದೊರಕಿಸಿಕೊಡುವ ಪ್ರಯತ್ನ ಮಾಡಲಾಗುವುದು ಎಂದರು. ಪಕ್ಷದ ಜಿಲ್ಲಾಧ್ಯಕ್ಷ ಎಂ.ಕೆ.ಅಪ್ಪಯ್ಯ ಅವರು ಮಾತನಾಡಿ ಕೊಡಗು ಜಿಲ್ಲೆಯ ಸಮಸ್ಯೆಗಳು ಹಾಗೂ ಜನಸಾಮಾನ್ಯರ ಮೂಲಭೂತ ಕೊರತೆಗಳ ಬಗ್ಗೆ ಪಕ್ಷ ಚಿಂತನೆ ಹರಿಸಲಿದೆ. ಪಕ್ಷದ ನೂತನ ಕಚೇರಿ ಸಮಸ್ಯೆಗಳ ಪರಿಹಾರಕ್ಕೆ ಸದಾ ಸಕ್ರಿಯವಾಗಿರುತ್ತದೆ ಎಂದು ತಿಳಿಸಿದರು. ಯುವ ಘಟಕದ ಅಧ್ಯಕ್ಷ ಎಂ.ಕೆ.ಆಶಿಕ್ ಮಾತನಾಡಿ, ಪಕ್ಷದ ಸದಸ್ಯತ್ವ ಅಭಿಯಾನವನ್ನು ನಡೆಸಲಿದ್ದು, ಜಿಲ್ಲೆಯ ಜನತೆ ಬೆಂಬಲ ನೀಡುವಂತೆ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್.ಬಿ.ಪೃಥ್ವಿ ಹಾಗೂ ಸದಸ್ಯ ಮಂಜುನಾಥ್ ಉಪಸ್ಥಿತರಿದ್ದರು.








