
ಮಡಿಕೇರಿ NEWS DESK ಮೇ 30 : ರಾಜ್ಯದಲ್ಲಿ ನೂತನ ಮಂತ್ರಿಮoಡಲ ರಚನೆಯ ಸಂದರ್ಭ ವಿರಾಜಪೇಟೆ ಕ್ಷೇತ್ರದ ಶಾಸಕ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಮೂರ್ನಾಡು ಕೊಡವ ಸಮಾಜ ಒತ್ತಾಯಿಸಿದೆ. ಪತ್ರಿಕಾ ಪ್ರಕಟಣೆ ನೀಡಿರುವ ಮೂರ್ನಾಡು ಕೊಡವ ಸಮಾಜದ ಅಧ್ಯಕ್ಷ ತೇಲಪಂಡ ಸಿ.ಸುಬ್ಬಯ್ಯ ಅವರು ಎ.ಎಸ್.ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ಲಭಿಸಿದರೆ ಅತ್ಯಂತ ಸೂಕ್ಷ್ಮ ಜನಾಂಗದ ಕೊಡವರಿಗೆ ಹೆಮ್ಮೆ ಎನಿಸಲಿದೆ, ಅಲ್ಲದೆ ಕೊಡವರು ಹಾಗೂ ಕೊಡಗಿನ ಸಮಗ್ರ ಅಭಿವೃದ್ಧಿಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ರಾಜಕೀಯವಾಗಿ ಕೊಡಗು ಜಿಲ್ಲೆ ರಾಜ್ಯದ ಗಮನ ಸೆಳೆದಿದ್ದರೂ ಕಳೆದ ಅನೇಕ ವರ್ಷಗಳಿಂದ ಕೊಡವರಿಗೆ ಯಾವುದೇ ಸರಕಾರ ಸಚಿವ ಸ್ಥಾನವನ್ನು ನೀಡಿಲ್ಲ. ಪ್ರಸ್ತುತ ನೂತನ ಮಂತ್ರಿ ಮಂಡಲದ ಸಂದರ್ಭವಾದರೂ ಕೊಡವ ಜನಾಂಗದ ಎ.ಎಸ್.ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ಸಿಗಬಹುದು ಎನ್ನುವ ವಿಶ್ವಾಸವಿದೆ. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾಗಿ ಅತ್ಯಂತ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿರುವ ಪೊನ್ನಣ್ಣ ಅವರು ರಾಷ್ಟ್ರ ಮಟ್ಟದಲ್ಲೂ ಗಮನ ಸೆಳೆದಿದ್ದಾರೆ. ಕಳೆದ ಮೂರು ವರ್ಷಗಳಿಂದ ಕೊಡವರು ಮಾತ್ರವಲ್ಲದೆ ಎಲ್ಲಾ ಜಾತಿ, ಜನಾಂಗದ ಶ್ರೇಯೋಭಿವೃದ್ಧಿಗಾಗಿ ತಮ್ಮದೇ ಆದ ಕೊಡುಗೆಯನ್ನು ನೀಡಿ ಶ್ರಮಿಸಿದ್ದಾರೆ. ಜಿಲ್ಲೆಯ ಅಭಿವೃದ್ಧಿಗೆ ಸರಕಾರದಿಂದ ಅಗತ್ಯ ಸಹಕಾರ ಪಡೆದಿದ್ದಾರೆ. ಅನುಭವಿ ರಾಜಕಾರಣಿಯಾಗಿ ಹಾಗೂ ದಕ್ಷ ನಾಯಕನಾಗಿ ಜನವಲಯದಲ್ಲಿ ಗುರುತಿಸಿಕೊಂಡಿರುವ ಎ.ಎಸ್.ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ನೀಡಿದರೆ ಕೊಡಗು ಜಿಲ್ಲೆಗೆ ಮಾತ್ರವಲ್ಲ ಕರ್ನಾಟಕ ರಾಜ್ಯಕ್ಕೂ ಲಾಭವಾಗಲಿದೆ. ಆದ್ದರಿಂದ ನೂತನ ಮುಖ್ಯಮಂತ್ರಿಗಳು ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಸರ್ವ ಕೊಡವರ ಪರವಾಗಿ ಕೋರಿಕೊಳ್ಳುತ್ತಿರುವುದಾಗಿ ತೇಲಪಂಡ ಸಿ.ಸುಬ್ಬಯ್ಯ ತಿಳಿಸಿದ್ದಾರೆ.








