
ಮಡಿಕೇರಿ ಜೂ.4 NEWS DESK : ಕೊಡಗು ಜಿಲ್ಲೆಯಲ್ಲಿ ಮಳೆಗಾಲ ಆರಂಭವಾಗಿದ್ದು, ಮಡಿಕೇರಿ ನಗರಸಭೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಮಳೆ ನೀರು ಸರಾಗವಾಗಿ ಹರಿಯಲು ಅನುಕೂಲವಾಗುವಂತೆ ರಾಜಕಾಲುವೆ ಮತ್ತು ಚರಂಡಿಗಳ ಶುಚಿತ್ವಕ್ಕೆ ಕ್ರಮ ಕೈಗೊಳ್ಳಲಾಗಿದ್ದು, ಇದಕ್ಕಾಗಿ 10 ಲಕ್ಷ ರೂ.ಗಳನ್ನು ಖರ್ಚು ಮಾಡಲಾಗುತ್ತಿದೆ. ನಗರಸಭಾ ಅಧ್ಯಕ್ಷೆ ಪಿ.ಕಲಾವತಿ ಅವರ ಅಧ್ಯಕ್ಷತೆಯಲ್ಲಿ ನಗರಸಭಾ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯರಿಗೆ ಉತ್ತರ ನೀಡಿದ ಪೌರಾಯುಕ್ತ ಕೆ.ಆರ್.ರಮೇಶ್ ಅವರು ಎಲ್ಲಾ ವಾರ್ಡ್ಗಳಿಗೂ ಸಿಬ್ಬಂದಿಯನ್ನು ನೇಮಿಸಿ ಟಾಸ್ಕ್ ಫೋರ್ಸ್ ರಚನೆ ಮಾಡಲಾಗಿದೆ ಎಂದರು. ರಾಜ ಕಾಲುವೆ ಮತ್ತು ಚರಂಡಿ ಶುಚಿತ್ವಕ್ಕೆ 10 ಲಕ್ಷ ರೂ. ವೆಚ್ಚದಲ್ಲಿ ಟೆಂಡರ್ ಕರೆದು ಕಾಮಗಾರಿ ನಡೆಸಲಾಗುತ್ತಿದೆ. ಇಂದಿರಾನಗರ, ಮಂಗಳದೇವಿ ನಗರ, ಚಾಮುಂಡೇಶ್ವರಿ ನಗರ ಹಾಗೂ ಆಝಾದ್ ನಗರಗಳಲ್ಲಿ ಅಪಾಯಕಾರಿ ಪ್ರದೇಶಗಳಲ್ಲಿರುವ ಮನೆಗಳಿಗೆ ನೋಟಿಸ್ ನೀಡಲು ತಯಾರಿ ನಡೆಸಲಾಗಿದೆ. ಒಟ್ಟು 6 ಸಮುದಾಯ ಭವನಗಳಲ್ಲಿ ಕಾಳಜಿ ಕೇಂದ್ರ ತೆರೆಯಲು ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು. ನಗರಸಭೆಯ ಹಿರಿಯ ಸದಸ್ಯ ಕೆ.ಎಸ್.ರಮೇಶ್ ಅವರು ಮಳೆ ಜೋರಾಗುವ ಮೊದಲು ರಾಜ ಕಾಲುವೆಗಳು, ಎಲ್ಲಾ ವಾರ್ಡ್ಗಳ ಚರಂಡಿಗಳು ಮತ್ತು ರಸ್ತೆ ಬದಿಯ ಕುರುಚಲು ಕಾಡುಗಳನ್ನು ಕಡಿದು ಸ್ವಚ್ಛಗೊಳಿಸಬೇಕು. ಇದರಿಂದ ರಸ್ತೆಗಳು ಹಾಳಾಗುವುದನ್ನು ತಡೆಯಬಹುದು. ನಗರಸಭೆ ಹೆಚ್ಚುವರಿಯಾಗಿ ಜೆಸಿಬಿ ಮತ್ತು ಹಿಟಾಚಿ ಯಂತ್ರ ಸಹಿತ ಅಗತ್ಯ ಕಾರ್ಮಿಕರನ್ನು ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಇತರ ಸದಸ್ಯರು ಮಾತನಾಡಿ ಮಡಿಕೇರಿ ನಗರಸಭೆಯ ಕೆಲಸ ಕಾರ್ಯಗಳು ಸುಗಮವಾಗಿ ನಡೆಯದಿರಲು ಮುಖ್ಯವಾಗಿ ಸಿಬ್ಬಂದಿಗಳ ಕೊರತೆಯೇ ಕಾರಣ. ಹೆಚ್ಚುವರಿ ಸಿಬ್ಬಂದಿಗಳನ್ನು ನೇಮಿಸಿ ಕೆಲಸಗಳು ಸುಸೂತ್ರವಾಗಿ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು. ನಗರಸಭೆಯ ವ್ಯಾಪ್ತಿಗೆ ಒಳಪಡುವ ಆಸ್ತಿ ಒತ್ತುವರಿಯಾಗುತ್ತಿದೆ. ಎಸ್.ಪಿ. ಕಚೇರಿ ಪಕ್ಕದಲ್ಲೇ ಜಾಗ ಒತ್ತುವರಿ ಮಾಡಲಾಗಿದೆ. ಅಲ್ಲಿರುವ ಶೆಡ್ ನ್ನು ತೆರವು ಮಾಡುವಂತೆ ಎಸ್ಡಿಪಿಐ ಸದಸ್ಯ ಅಮೀನ್ ಮೊಹಿಸಿನ್ ಆಗ್ರಹಿಸಿದರು. ಇದಕ್ಕೆ ಧ್ವನಿಗೂಡಿಸಿದ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಸಿ.ಸತೀಶ್ ಶೆಡ್ ನ್ನು ತಕ್ಷಣ ತೆರವು ಮಾಡಬೇಕು, ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ನಗರ ವ್ಯಾಪ್ತಿಯಲ್ಲಿ ಅನಧಿಕೃತ ಕಟ್ಟಡಗಳು ತಲೆ ಎತ್ತುತ್ತಿದ್ದು, ಗಾಂಧಿ ಮೈದಾನದ ಸಮೀಪದ ಕಟ್ಟಡ ನಿರ್ಮಾಣದಲ್ಲಿ ಸಂಪೂರ್ಣ ಕಾನೂನು ಉಲ್ಲಂಘನೆಯಾಗಿದೆ. ಹಿಂದಿನ ಸಾಮಾನ್ಯ ಸಭೆಯ ನಿರ್ಣಯದಂತೆ ಕಾಮಗಾರಿ ಸ್ಥಗಿತಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಮೀನ್ ಮೊಹಿಸಿನ್ ಆರೋಪಿಸಿದರು. ಈ ಸಂದರ್ಭ ಆಡಳಿತ ಪಕ್ಷ ಬಿಜೆಪಿ ಹಾಗೂ ವಿರೋಧ ಪಕ್ಷ ಎಸ್ಡಿಪಿಐ ಸದಸ್ಯರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಕೆಲವು ಸದಸ್ಯರು ಸದನದ ಬಾವಿಗೆ ಇಳಿದು ಅಸಮಾಧಾನ ವ್ಯಕ್ತಪಡಿಸಿದರು. *ಕಾಮಗಾರಿ ಆರಂಭ* ನಗರೋತ್ಥಾನದ 4ನೇ ಹಂತದ ಕಾಮಗಾರಿ ಕುರಿತು ಮುಂದಿನ 1 ವಾರದ ಒಳಗೆ ಕ್ಷೇತ್ರದ ಶಾಸಕರ ನೇತೃತ್ವದಲ್ಲಿ ಸಭೆ ನಡೆಸಿ ಗುತ್ತಿಗೆದಾರರಿಗೆ ಕಾಮಗಾರಿ ಪ್ರಾರಂಭಿಸಲು ಸೂಚನೆ ನೀಡಲು ಸಭೆ ನಿರ್ಧರಿಸಿತು. ಉಪಾಧ್ಯಕ್ಷ ಮಹೇಶ್ ಜೈನಿ, ಆರೋಗ್ಯ ಇಲಾಖೆ, ಇಂಜಿನಿಯರಿಂಗ್ ವಿಭಾಗ, ಕಂದಾಯ ವಿಭಾಗದ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.









