
ಮಡಿಕೇರಿ NEWS DESK ಜೂ.11 : ಸಾಮಾಜಿಕ ಜಾಲತಾಣದಲ್ಲಿ ಬಿಲ್ಲವ ಹಾಗೂ ಬಂಟರ ಸಮಾಜವನ್ನು ಅವಹೇಳನ ಮಾಡಿರುವ ಅನಿತಾ ಕಾಸರಗೋಡು ಹೆಸರಿನ ಮಹಿಳೆಯನ್ನು ತಕ್ಷಣ ಬಂಧಿಸಿ ಆಕೆಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕೊಡಗು ಜಿಲ್ಲಾ ಬಿಲ್ಲವ ಸಮಾಜ ಮತ್ತು ಬಂಟರ ಸಮಾಜ ಜಂಟಿಯಾಗಿ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿವೆ. ಜಾತಿ ಜನಾಂಗಗಳ ಮಧ್ಯೆ ವಿಷಬೀಜವನ್ನು ಬಿತ್ತುವ ಮತ್ತು ದ್ವೇಷವನ್ನು ಬೆಳೆಸುವ ಉದ್ದೇಶದಿಂದ ಅನಿತಾ ಕಾಸರಗೋಡು ಎಂಬ ಮಹಿಳೆ ತನಗೆ ತೋಚಿದಂತೆ ವಿವಾದಾತ್ಮಕ ಹೇಳಿಕೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದಾರೆ. ಈಕೆ ತನ್ನ ಫೇಸ್ಬುಕ್ ಖಾತೆಯಲ್ಲಿ ಬಹಿರಂಗವಾಗಿ ಬಿಲ್ಲವ ಮತ್ತು ಬಂಟರ ಜನಾಂಗವನ್ನು ಕೀಳಾಗಿ ಹೀಯಾಳಿಸಿ ಅವಹೇಳನಕಾರಿ ಪದಗಳನ್ನು ಬಳಸಿ ನಿಂದಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ಇದು ಜಾತಿಗಳ ನಡುವೆ ವೈಷಮ್ಯ ಮೂಡಿಸುವ ಮತ್ತು ಗಲಭೆಗೆ ಪ್ರಚೋದನೆ ನೀಡಲು ಹೂಡಿರುವ ಸಂಚೆoದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ಲಕ್ಷಾಂತರ ಬಿಲ್ಲವ ಹಾಗೂ ಬಂಟರ ಸಮುದಾಯದ ಜನರ ಧಾರ್ಮಿಕ ಮತ್ತು ಸಾಮಾಜಿಕ ಭಾವನೆಗಳಿಗೆ ಧಕ್ಕೆಯನ್ನುಂಟುಮಾಡಿ ನಿಂದಿಸಿರುವ ಮಹಿಳೆಯನ್ನು ತಕ್ಷಣ ಬಂಧಿಸಿ ಬೇಷರತ್ ಕ್ಷಮೆ ಕೋರಲು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ. ನಗರ ಠಾಣಾಧಿಕಾರಿಗಳಿಗೆ ದೂರು ಸಲ್ಲಿಸುವ ಸಂದರ್ಭ ಬಂಟರ ಸಂಘದ ಗೌರವಾಧ್ಯಕ್ಷ ಬಿ.ಬಿ.ಐತ್ತಪ್ಪ ರೈ, ನಗರಾಧ್ಯಕ್ಷ ಬಿ.ಎಸ್.ಪ್ರಭು, ರೈ, ಬಿ.ಬಿ.ಗಿರೀಶ್ ರೈ, ಬಿಲ್ಲವ ಸಮಾಜದ ಮಾಜಿ ಅಧ್ಯಕ್ಷ ಎಲ್ಯಣ್ಣ ಪೂಜಾರಿ, ಕಾರ್ಯದರ್ಶಿ ಪ್ರಶಾಂತ್ ಪೂಜಾರಿ, ಪ್ರಮುಖರಾದ ರಾಜೀವ ಲೋಚನ, ಗಣೇಶ್ ಪೂಜಾರಿ, ತಿರುಪತಿ ಪೂಜಾರಿ, ತುಳುವೆರ ಜನಪದ ಕೂಟದ ತಾಲ್ಲೂಕು ಸಂಚಾಲಕ ಪ್ರಸಾದ್ ಪೂಜಾರಿ ಹಾಗೂ ಬಿಲ್ಲವ ಮತ್ತು ಬಂಟರ ಸಮಾಜದ ಪದಾಧಿಕಾರಿಗಳು ಹಾಜರಿದ್ದರು.









