ಮಡಿಕೇರಿ ಜ.12 : ಮಡಿಕೇರಿಯ ಮಂಗಳಾದೇವಿ ನಗರದ ಶ್ರೀ ರಾಜರಾಜೇಶ್ವರಿ ಕ್ಷೇತ್ರದಲ್ಲಿ ಜ.14 ಮತ್ತು 15 ರಂದು ಶ್ರೀ ರಾಜರಾಜೇಶ್ವರಿ, ಮಹಾಗಣಪತಿ ಹಾಗೂ ನಾಗದೇವರುಗಳ ಪುನರ್ ಪ್ರತಿಷ್ಠಾ ವಾರ್ಷಿಕೋತ್ಸವ ನಡೆಯಲಿದೆ.
ವಾರ್ಷಿಕೋತ್ಸವದ ಪ್ರಯುಕ್ತ ಎರಡು ದಿನಗಳ ಕಾಲ ಬ್ರಹ್ಮಶ್ರೀ ವೇದಮೂರ್ತಿ ಪೊಳಲಿ ಸುಬ್ರಹ್ಮಣ್ಯ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ಜರುಗಲಿದೆ.
ಜ.14 ರಂದು ಸಂಜೆ 6 ರಿಂದ ಪ್ರಾರ್ಥನೆ, ಪುಣ್ಯಾಹ, ಸಪ್ತಶುದ್ಧಿ, ಪ್ರಸಾದ ಶುದ್ಧಿ, ರಕ್ಷೋಘ್ನ ಹೋಮ, ವಾಸ್ತು ಪೂಜೆ, ವಾಸ್ತು ಹೋಮ, ದಿಶಾಬಲಿ, ಮಹಾ ಪೂಜೆ ಹಾಗೂ ಪ್ರಸಾದ ವಿತರಣೆಯಾಗಲಿದೆ.
ಜ.15 ರಂದು ಬೆಳಗ್ಗೆ 8 ಗಂಟೆಗೆ ಪುಣ್ಯಾಹ, ಗಣಪತಿ ಹೋಮ, ಚಂಡಿಕಾ ಹೋಮ, ನವಕಲಶ ಪೂಜೆ, ಪ್ರಧಾನ ಹೋಮ, ನಾಗದೇವರಿಗೆ ತಂಬಿಲ ಪೂಜೆ, ಆಶ್ಲೇಷ ಬಲಿ ಕಲಶಾಭಿಷೇಕ ನಡೆಯಲಿದ್ದು, ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ, ಪ್ರಸಾದ ವಿನಿಯೋಗ ಹಾಗೂ ಅನ್ನದಾನ ನೆರವೇರಲಿದೆ.
ಸಂಜೆ 5.30 ರಿಂದ 6.30ರ ವರೆಗೆ ರಂಗಪೂಜೆ, 7 ಗಂಟೆಗೆ ಬಲಿ ಉತ್ಸವ ರಾಜಾಂಗಣ ಪ್ರಸಾದ, ಪೀಠಪೂಜೆ, ಶುದ್ಧಿಕಲಶಾಭಿಷೇಕ, ಮಂತ್ರಾಕ್ಷತೆ ಹಾಗೂ ಅನ್ನಪ್ರಸಾದ ವಿತರಣೆಯಾಗಲಿದೆ.
ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ದೇವಾಲಯದ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.














