ಮಡಿಕೇರಿ ಜ.17 : ಚೆಟ್ಟಳ್ಳಿ ಪ್ರೌಢಶಾಲೆಯ ಸಮೀಪದಲ್ಲಿರುವ ಶ್ರೀಗಣಪತಿ ದೇವಾಲಯಕ್ಕೆ ಕಳ್ಳರು ನುಗ್ಗಿದ್ದು, ಹುಂಡಿಯಲ್ಲಿದ್ದ ಹಣವನ್ನು ದೋಚಿದ್ದಾರೆ.
ಇಂದು ಬೆಳಗ್ಗೆ ದೇವಾಲಯ ಸಮಿತಿಯ ಅಧ್ಯಕ್ಷ ಮುಳ್ಳಂಡ ರತ್ತುಚಂಗಪ್ಪ ಅವರು ಪೂಜೆ ಸಲ್ಲಿಸಲು ಆಗಮಿಸಿದಾಗ ದೇವಾಲಯದ ಬಾಗಿಲಿನ ಬೀಗ ಮುರಿದಿರುವುದು ಕಂಡು ಬಂದಿದೆ.
ಚೆಟ್ಟಳ್ಳಿ ಪೊಲೀಸ್ ಉಪಠಾಣೆಗೆ ಮಾಹಿತಿ ನೀಡಿದ ನಂತರ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದರು. ಕಳ್ಳರು ಹುಂಡಿಯ ಬೀಗವನ್ನು ಮುರಿದು ಸುಮಾರು 5 ಸಾವಿರ ರೂ.ಗಳಷ್ಟು ಹಣವನ್ನು ದೋಚಿರುವುದು ಕಂಡು ಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.



















