ಮಡಿಕೇರಿ ಜ.29 : ಭಾರತೀಯ ಸೇನೆಯ ಮೊದಲ ಮಹಾದಂಡನಾಯಕ ಫೀ.ಮಾ.ಕೆ.ಎಂ.ಕಾರ್ಯಪ್ಪ ಅವರಿಗೆ “ಭಾರತ ರತ್ನ” ನೀಡಬೇಕೆಂದು ನಾಪೋಕ್ಲು ಕೊಡವ ಸಮಾಜ ಒತ್ತಾಯಿಸಿದೆ.
ನಾಪೋಕ್ಲು ಕೊಡವ ಸಮಾಜದ ವತಿಯಿಂದ ಕೊಡವ ಸಮಾಜದಲ್ಲಿ ನಡೆದ ಕಾರ್ಯಪ್ಪ ಅವರ 124 ನೇ ಜನ್ಮ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಮುಖರು ವೀರಸೇನಾನಿಗೆ “ಭಾರತ ರತ್ನ” ನೀಡುವ ಕುರಿತು ಇಂಗಿತ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನುಮುತಪ್ಪ ಧೈರ್ಯ, ಸಮಯ ಪಾಲನೆ ಮತ್ತು ಶಿಸ್ತಿನ ಜೀವನಕ್ಕೆ ಹೆಸರುವಾಸಿಯಾಗಿದ್ದ ಫೀ.ಮಾ.ಕಾರ್ಯಪ್ಪ ಅವರ ಆದರ್ಶಗಳನ್ನು ಇಂದಿನ ಯುವಪೀಳಿಗೆ ಅಳವಡಿಸಿಕೊಳ್ಳಬೇಕು. ವೀರಸೇನಾನಿಯನ್ನು ಪ್ರೇರಣೆಯಾಗಿಕೊಟ್ಟುಕೊಂಡು ಹೆಚ್ಚು ಹೆಚ್ಚು ಮಂದಿ ಸೇನೆಗೆ ಸೇರುವಂತ್ತಾಗಬೇಕು ಎಂದರು.
ಫೀ.ಮಾ.ಕಾರ್ಯಪ್ಪ ಅವರಿಗೆ ಶ್ರೇಷ್ಠ “ಭಾರತ ರತ್ನ” ಪ್ರಶಸ್ತಿಯನ್ನು ನೀಡಬೇಕೆಂದು ಒತ್ತಾಯಿಸಿದರು.
ಕೊಡವ ಸಮಾಜದ ನಿರ್ದೇಶಕ ಹಾಗೂ ನಾಪೋಕ್ಲು ಹೋಬಳಿ ಮಾಜಿ ಸೈನಿಕರ ಸಂಘದ ಅಧ್ಯಕ್ಷರೂ ಆದ ಕೊಂಡಿರ ನಾಣಯ್ಯ ಮಾತನಾಡಿ ದೇಶಕ್ಕೆ ಸ್ವಾತಂತ್ರö್ಯ ಬಂದ ನಂತರ ಕಾರ್ಯಪ್ಪ ಅವರು ಭೂಸೇನೆ, ವಾಯುಸೇನೆ ಮತ್ತು ನೌಕಾ ಪಡೆಯ ಮುಖ್ಯಸ್ಥರಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿ ವೀರಸೇನಾನಿ ಎನಿಸಿಕೊಂಡರು. ಇವರು ಕೊಡಗಿನ ರತ್ನ, ಕರ್ನಾಟಕದ ರತ್ನ ಮಾತ್ರವಲ್ಲ ಭಾರತದ ರತ್ನ ಎಂದು ಕೊಂಡಾಡಿದರು.
ಕೇಂದ್ರ ಸರ್ಕಾರ ಕಾರ್ಯಪ್ಪ ಅವರಿಗೆ “ಭಾರತ ರತ್ನ” ಪ್ರಶಸ್ತಿ ನೀಡಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಕೊಡವ ಸಮಾಜದ ಉಪಾಧ್ಯಕ್ಷ ಮಾಳೆಯಂಡ ಅಯ್ಯಪ್ಪ, ಕಾರ್ಯದರ್ಶಿ ಕುಲ್ಲೇಟಿರ ಅಜಿತ್ ನಾಣಯ್ಯ, ಸಹ ಕಾರ್ಯದರ್ಶಿ ಮಾಚೆಟಿರ ಕುಶಾಲಪ್ಪ, ಸರ್ವ ನಿರ್ದೇಶಕರು ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದು ಫೀ.ಮಾ.ಕಾರ್ಯಪ್ಪ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.








