ವಿರಾಜಪೇಟೆ ಜ.30 : ಜನಪರ ಕೆಲಸಗಳನ್ನು ಮಾಡುತ್ತಿರುವ ಬಿಜೆಪಿಯು ಬಲವರ್ಧನೆಗೆ ವಿಜಯ ಸಂಕಲ್ಪ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಈ ಮೂಲಕ ಜನರ ಮನೆ ಮನೆಯನ್ನು ತಲುಪಲಾಗುವುದು ಎಂದು ಬೂತ್ ಉಸ್ತುವಾರಿ ಬಿ.ಎಂ.ಗಣೇಶ್ ಹೇಳಿದರು.
ವಿರಾಜಪೇಟೆ ಮಂಡಲ ಆರ್ಜಿ ಗ್ರಾ.ಪಂ ಯ ಬೂತ್ ಸಂಖ್ಯೆ 161ರ ಕಲ್ಲುಬಾಣೆ ವ್ಯಾಪ್ತಿಯಲ್ಲಿ ನಡೆದ ಬೂತ್ ವಿಜಯ ಸಂಕಲ್ಪ ಅಭಿಯಾನ ಅಂಗವಾಗಿ ಕಾರ್ಯಕರ್ತರ ಮನೆ ಮನೆ ಗೋಡೆಗಳ ಮೇಲೆ ಬಿಜೆಪಿ ಚಿಹ್ನೆಯ ಸ್ಟಿಕರ್ ಅಂಟಿಸಿ ವಿಜಯ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಗಣೇಶ್, ನರೇಂದ್ರಮೋದಿ ಅವರ ಸರ್ಕಾರ ಕಿಸಾನ್ ಸಮ್ಮಾನ್, ಮುದ್ರಾ, ಉಜ್ವಲ ಸೇರಿದಂತೆ ಮಹಿಳೆಯರ ಬಲವರ್ಧನೆಗೆ, ಕಲ್ಯಾಣಕ್ಕಾಗಿ ಶಾಶ್ವತ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸುತ್ತಿದ್ದಾರೆ. ಅವರ ಜನಪರ ಯೋಜನೆಗಳು ಮನೆಮನೆಗೂ ತಲುಪುವಂತಾಗಬೇಕು. ಸರಕಾರದ ಯೋಜನೆಗಳ ಕುರಿತು ಅರಿವು ಮೂಡಿಸುವುದು, ಮನ್ ಕಿ ಬಾತ್ ಕಾರ್ಯಕ್ರಮವನ್ನು ಪ್ರತಿ ಬೂತ್ನಲ್ಲಿ ಕೇಳುವಂತೆ ಮಾಡುವುದು, ಇನ್ನೂ ಅನೇಕ ಜನಪರ ಕಾರ್ಯಕ್ರಮಗಳ ಅರಿವು ಮೂಡಿಸುವುದು ಇದರ ಉದ್ದೇಶ ಎಂದು ಹೇಳಿದರು.
ಬಳಿಕ ಕಲ್ಲುಬಾಣೆಯಲ್ಲಿ ಮನ್ ಕಿ ಬಾತ್ ಕಾರ್ಯಕ್ರಮ ಆಲಿಸಲಾಯಿತು.
ಈ ಸಂದರ್ಭ ಕಲ್ಲುಬಾಣೆ ಬೂತ್ ಅಧ್ಯಕ್ಷ ಬಿ.ಸಿ.ಕಿರಣ್, ಪ್ರಮುಖರಾದ ಟಿ.ಕೆ.ದಾಮೋದರ, ಬಿ.ಮೀನಾಕ್ಷಿ ಗಂಗಾಧರ, ಟಿ.ಡಿ.ಲಲಿತಾ, ಬಿ.ಎಸ್. ರಾಜ ಪೂಜಾರಿ, ಚೌರೀರ ದೇವಯ್ಯ, ಬಿ.ಪಿ.ನಿರ್ಮಲ, ಚೌರೀರ ಜಯಲಕ್ಷ್ಮಿ, ಹೆಚ್.ಕೆ.ರವಿ ಕುಮಾರ್, ಬಿ.ಈ. ಪ್ರದೀಪ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದು ಮನೆ ಮನೆಯಲ್ಲಿ ಸ್ಟಿಕ್ಕರ್, ಬಾವುಟ ಹಾಗೂ ಸರಕಾರದ ಸಾಧನೆಗಳನ್ನು ಒಳಗೊಂಡ ಕರಪತ್ರ ಹಂಚಿಕೆ ಮಾಡಿದರು.















