ಮೈಸೂರು ಮಾ.8 : ಬೇಸಿಗೆಯ ಹಿನ್ನೆಲೆ ತಾಪಮಾನ ಮಿತಿ ಮೀರುತ್ತಿದೆ. ಕಾಡ್ಗಿಚ್ಚಿನಿಂದ ಅರಣ್ಯ ಪ್ರದೇಶಗಳು ಬೆಂಕಿಗಾಹುತಿಯಾಗುತ್ತಿರುವ ಘಟನೆಗಳು ನಡೆಯುತ್ತಿದ್ದು, ವನ್ಯಜೀವಿಗಳು ಸಾವನ್ನಪ್ಪುತ್ತಿವೆ.
ಈ ನಡುವೆ ಮೈಸೂರು ಮೃಗಾಲಯ ಕೂಡ ಅಧಿಕ ತಾಪಮಾನದ ಸಮಸ್ಯೆಯನ್ನು ಎದುರಿಸುತ್ತಿದ್ದು, ಇಲ್ಲಿರುವ ಪ್ರಾಣಿಗಳ ಹಿತಕಾಯುವ ಕಾರ್ಯಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ.
ಮೃಗಾಲಯದಲ್ಲಿ 624 ಸಸ್ತನಿಗಳು, 731 ಪಕ್ಷಿಗಳು, 100 ಸರೀಸೃಪಗಳು ಸೇರಿದಂತೆ 1,455 ಪ್ರಾಣಿಗಳಿವೆ. ನಾಲ್ಕು ಬೋರ್ನಿಯನ್ ಒರಾಂಗುಟನ್, ಆರು ಚಿಂಪಾoಜಿಗಳು, ಎರಡು ವೆಸ್ಟರ್ನ್ ಲೋಲ್ಯಾಂಡ್ ಗೊರಿಲ್ಲಾಗಳೂ ಕೂಡ ಇವೆ.
ದಿನದಿಂದ ದಿನಕ್ಕೆ ತಾಪಮಾನ ಹೆಚ್ಚಾಗುತ್ತಿದ್ದು, ಪ್ರಾಣಿಗಳು ಕೂಡ ತತ್ತರಿಸಿ ಹೋಗುತ್ತಿವೆ. ಈ ಹಿನ್ನೆಲೆಯಲ್ಲಿ ಪ್ರಾಣಿಗಳ ಹಿತದೃಷ್ಟಿಯಿಂದ ಸುಮಾರು 130 ವರ್ಷಗಳಷ್ಟು ಹಳೆಯದಾದ ಮೈಸೂರು ಮೃಗಾಲಯದಲ್ಲಿ ಏರ್ ಕೂಲರ್ ಗಳನ್ನು ಅಳವಡಿಸಲಾಗುತ್ತಿದೆ.
ಎಸಿಗಳಂತೆಯೇ ಇವು ಕಾರ್ಯನಿರ್ವಹಿಸಲಿವೆ. ಅತಿಯಾದ ತಾಪಮಾನವು ಪ್ರಾಣಿಗಳು ನಿರ್ಜಲೀಕರಣ ಎದುರಿಸುವಂತೆ ಮಾಡುತ್ತದೆ. ಹೀಗಾಗಿ ಇದನ್ನು ತಡೆಗಟ್ಟಲು ಹೆಚ್ಚಿನ ನೀರಿನ ಅಂಶವಿರುವ ಹಣ್ಣುಗಳನ್ನು ಕೂಡ ನೀಡುವ ಕೆಲಸ ಮಾಡುತ್ತಿದ್ದೇವೆ ಎಂದು ಮೈಸೂರು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಎಂ.ಕುಲಕರ್ಣಿ ತಿಳಿಸಿದ್ದಾರೆ.








