ಮಡಿಕೇರಿ ಮಾ.14 : ಮಡಿಕೇರಿ ನಗರ ಕಾಂಗ್ರೆಸ್ ಸಮಿತಿ ವತಿಯಿಂದ ನಗರದ ವಿವಿಧ ಮನೆಗಳಿಗೆ ಗ್ಯಾರಂಟಿ ಕಾರ್ಡ್ ವಿತರಿಸಲಾಯಿತು.
ಈ ಸಂದರ್ಭ ಮಾತನಾಡಿದ ವಿಧಾನ ಪರಿಷತ್ ಮಾಜಿ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುವುದು ಖಚಿತವಾಗಿದ್ದು, ಗ್ಯಾರಂಟಿ ಕಾರ್ಡ್ನಲ್ಲಿ ನೀಡಿರುವ ಭರವಸೆಗಳು ಈಡೇರಲಿವೆ ಎಂದರು.
ಪಕ್ಷದ ನಾಯಕರು ಉತ್ತಮ ಯೋಜನೆಯನ್ನು ರೂಪಿಸಿದ್ದು, ಮತದಾರರು ಈ ಬಾರಿ ಕಾಂಗ್ರೆಸ್ ನ್ನು ಗೆಲ್ಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಬೆಲೆ ಏರಿಕೆಯ ಬಿಜೆಪಿಯಿಂದ ಜನರು ಬೇಸತ್ತಿದ್ದಾರೆ ಎಂದು ಟೀಕಿಸಿದರು.
ಕಾಂಗ್ರೆಸ್ ನಗರಾಧ್ಯಕ್ಷ ಬಿ.ವೈ.ರಾಜೇಶ್ ಅವರ ನೇತೃತ್ವದಲ್ಲಿ ನಡೆದ ಗ್ಯಾರಂಟಿ ಕಾರ್ಡ್ ಅಭಿಯಾನದಲ್ಲಿ ಮಡಿಕೇರಿ ನಗರದ ಬೂತ್ ಸಂಖ್ಯೆ 201, 209 ಮತ್ತು 219ರಲ್ಲಿ ಕಾರ್ಡ್ ವಿತರಿಸಲಾಯಿತು. ಕಾಂಗ್ರೆಸ್ ನ ಮೊದಲ ಗ್ಯಾರಂಟಿ ಕಾರ್ಡ್ “ಗೃಹಜ್ಯೋತಿ” ಯೋಜನೆ ಮೂಲಕ ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ಪೂರೈಕೆ, 2ನೇ ಗ್ಯಾರಂಟಿ ಪ್ರತಿ ಮನೆಯೊಡತಿಗೆ 2 ಸಾವಿರ ರೂ. ಪ್ರೋತ್ಸಾಹ ಧನ ನೀಡಲು “ಗೃಹಲಕ್ಷ್ಮಿ” ಯೋಜನೆ ಜಾರಿ ಮತ್ತು 3ನೇ ಗ್ಯಾರಂಟಿಯಾಗಿ ಅನ್ನಭಾಗ್ಯ ಯೋಜನೆ ಮೂಲಕ ಬಿಪಿಎಲ್ ಕಾರ್ಡ್ದಾರರಿಗೆ 10 ಕೆ.ಜಿ.ಅಕ್ಕಿ ಉಚಿತವಾಗಿ ನೀಡುವುದಾಗಿ ಪ್ರಮುಖರು ಮತದಾರರಿಗೆ ಭರವಸೆ ನೀಡಿದರು.
ಮಾಜಿ ಸಚಿವ ಬಿ.ಎ.ಜೀವಿಜಯ, ಯುವ ಮುಖಂಡ ಡಾ.ಮಂತರ್ ಗೌಡ, ಕೆಪಿಸಿಸಿ ಮಾಧ್ಯಮ ಸಂವಹನ ವಕ್ತಾರ, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಟಿ.ಪಿ.ರಮೇಶ್, ಮಡಿಕೇರಿ ಬ್ಲಾಕ್ ಅಧ್ಯಕ್ಷ ಹೆಚ್.ಎ.ಹಂಸ, ಮತ್ತಿತರ ಮುಖಂಡರು, ನಗರ, ಬ್ಲಾಕ್ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಹಾಜರಿದ್ದರು.








