ಮಡಿಕೇರಿ ಮಾ.16 : ಹೊದ್ದೂರು ಗ್ರಾಮ ಪಂಚಾಯ್ತಿ ವ್ಯಾಪ್ತ್ತಿಗೆ ಒಳಪಡುವ ಹೊದವಾಡ ಗ್ರಾಮದ ರಸ್ತೆಗಳನ್ನು ಅಭಿವೃದ್ಧಿ ಪಡಿಸಲು ಅಗತ್ಯ ಕ್ರಮ ಕೈಗೊಳ್ಳದಿದ್ದಲ್ಲಿ, ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಹೈದ್ರೂಸ್ ಜುಮಾ ಮಸೀದಿಯ ಅಧ್ಯಕ್ಷ ಬಿ.ಎಸ್.ಅಬೂಬಕ್ಕರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಅದನ್ನು ದುರಸ್ತಿ ಪಡಿಸುವ ಯಾವುದೇ ಅಭ್ಯರ್ಥಿಯನ್ನು ಗ್ರಾಮಸ್ಥರು ಬೆಂಬಲಿಸಲಿದ್ದಾರೆ. ಕೇವಲ ಚುನಾವಣೆ ಸಂದರ್ಭ ಗ್ರಾಮದ ಜನರನ್ನು ಓಲೈಸಲು ಯಾವುದೇ ರಾಜಕಾರಣಿಗಳು ಗ್ರಾಮಕ್ಕೆ ಬರುವುದು ಬೇಡವೆಂದು ಹೇಳಿದರು.
ಮೂರ್ನಾಡಿನಿಂದ ಕುಂಬಳದಾಳು ಮಾರ್ಗವಾಗಿ ಹೊದವಾಡ ಗ್ರಾಮವನ್ನು ಸಂಪರ್ಕಿಸುವ ಸುಮಾರು 9.50 ಕಿ.ಮೀ ರಸ್ತೆಯಲ್ಲಿ ಮೂರ್ನಾಡು ಕಡೆಯಿಂದ 8 ಕಿ.ಮೀ. ರಸ್ತೆಯನ್ನು ವ್ಯವಸ್ಥಿತವಾಗಿ ನಿರ್ಮಿಸಲಾಗಿದೆ. ಅಲ್ಪಸಂಖ್ಯಾತರು ನೆಲೆಸಿರುವ ಸ್ಥಳದಿಂದ ಸುಮಾರು 1.50 ಕಿ.ಮೀ. ರಸ್ತೆಯ ದುರಸ್ತಿ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆಯೆಂದು ಬೇಸರ ವ್ಯಕ್ತಪಡಿಸಿ. ಆಡಳಿತ ನಡೆಸುವವರು ಅಲ್ಪಸಂಖ್ಯಾತರನ್ನು ದ್ವಿತೀಯ ದರ್ಜೆಯ ಪ್ರಜೆಗಳನ್ನಾಗಿ ಪರಿಗಣಿಸುತ್ತಿದ್ದಾರೆ ಎಂದು ಆರೋಪಿಸಿದರು.
ಹೊದವಾಡ ಗ್ರಾಮ ವ್ಯಾಪ್ತಿಯಲ್ಲಿ ವಿವಿಧ ಸಮೂಹಗಳಿಗೆ ಸೇರಿದ ಸುಮಾರು 3 ಸಾವಿರ ಮಂದಿ ನೆಲೆಸಿದ್ದು, ಸುಮಾರು 2 ಸಾವಿರ ಮತಗಳಿವೆ. ಗ್ರಾಮವನ್ನು ಸಂಪರ್ಕಿಸುವ ರಸ್ತೆಯ ಬಗ್ಗೆ ಜನಪ್ರತಿನಿಧಿಗಳು ಕಾಳಜಿ ವಹಿಸದಿರುವುದರಿಂದ ಗ್ರಾಮಸ್ಥರೆಲ್ಲ ಚುನಾವಣೆ ಬಹಿಷ್ಕಾರ ನಡೆಸಲಿದ್ದಾರೆ. ಹೆಚ್ಚಿನ ಅನುದಾನಗಳು ಲಭ್ಯವಿಲ್ಲದೆ ಇರುವುದರಿಂದ ಗ್ರಾಮ ಪಂಚಾಯ್ತಿಯಿಂದಲೂ ರಸ್ತೆಯ ದುರಸ್ತಿ ಕಾರ್ಯ ಸಾಧ್ಯವಾಗಿಲ್ಲವೆಂದು ಹೇಳಿದರು.
ಗ್ರಾಮ ವ್ಯಾಪ್ತಿಯಲ್ಲಿ ಹೈದ್ರೂಸ್ ಜುಮಾ ಮಸೀದಿ, ಪ್ರೌಢಶಾಲೆ, ಹಿರಿಯ ಪ್ರಾಥಮಿಕ ಶಾಲೆ, ದೇವಸ್ಥಾನವಿದೆ. ಪ್ರತಿನಿತ್ಯ ನೂರಾರು ವಿದ್ಯಾರ್ಥಿಗಳು, ಸಾರ್ವಜನಿಕರು ಗ್ರಾಮಸ್ಥರು ಸಂಚರಿಸುವ ರಸ್ತೆ ಮಾತ್ರ ಸಂಪೂರ್ಣ ಹದಗೆಟ್ಟಿದ್ದು, ಈ ಬಗ್ಗೆ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಅಲ್ಲಲ್ಲಿ ಪ್ಯಾಚ್ ವರ್ಕ್ ಮಾಡುವ ಮೂಲಕ ಕಣ್ಣೊರೆಸುವ ತಂತ್ರ ಅನುಸರಿಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಜನಪ್ರತಿನಿಧಿಗಳು, ಜಿಲ್ಲಾ ಮತ್ತು ತಾಲ್ಲೂಕು ಪಂಚಾಯ್ತಿ ಪ್ರತಿನಿಧಿಗಳು ಇಲ್ಲಿಯವರೆಗು ಗ್ರಾಮಸ್ಥರ ಸಂಕಷ್ಟಗಳಿಗೆ ಸ್ಪಂದಿಸಿಲ್ಲವೆಂದು ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಮಸೀದಿಯ ಕಾರ್ಯದರ್ಶಿ ಮುರ್ಷಿದ ಕೆ.ಕೆ., ಉಪಾಧ್ಯಕ್ಷ ಕರೀಂ ಕೆ.ಎ., ಸದಸ್ಯರಾದ ಉಮ್ಮರ್ ಕೆ.ಎ., ಹಂಸ ಬಿ.ಎ. ಹಾಗೂ ಅಬ್ದುಲ್ ರೆಹಮಾನ್ ಟಿ.ಎ. ಉಪಸ್ಥಿತರಿದ್ದರು.









