ಮಡಿಕೇರಿ ಮಾ.17 : ಕೊಡವರಿಗೆ ಎಸ್ಟಿ ಟ್ಯಾಗ್ ನೀಡಬೇಕೆಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ನಿರಂತರವಾಗಿ ಹೋರಾಟ ನಡೆಸುತ್ತಲೇ ಬರುತ್ತಿದೆ. ಆದರೆ ಇತ್ತೀಚೆಗೆ ಕೆಲವರು ಕೊಡವರ ಹೆಸರಿನಲ್ಲಿ ಕೊಡವ ಸಮುದಾಯದ ಹಕ್ಕುಗಳನ್ನು ಕಸಿದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಸಿಎನ್ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಆರೋಪಿಸಿದ್ದಾರೆ.
ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಪ್ರತಿಮ ದೇಶಪ್ರೇಮಿ ಕೊಡವರನ್ನು ಅನ್ಯಾಯವಾಗಿ ಧಮನಿಸುವ ಪ್ರಯತ್ನಗಳು ನಡೆಯುತ್ತಿದೆ. ಈ ದೇಶದ ಸರ್ವಜನರಿಗೂ ಸಂವಿಧಾನದ ಆಶಯದಂತೆ ಹಕ್ಕು ನೀಡಬೇಕು ಆ ಹಕ್ಕನ್ನು ರಾಜ್ಯದಲ್ಲಿರುವ ಮತ್ತು ಕೊಡಗಿನಲ್ಲಿರುವ ಹತ್ತಾರು ಇತರೆ ಸಮುದಾಯಗಳು ಅವರ ವಂಶವಾಹಿ ಮತ್ತು ಮೂಲ ಕುಲ ಕಸುಬಿನಂತೆ ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ. ಆದರೆ ತಮ್ಮ ಅಸಲಿಯತ್ತನ್ನು ಮರೆಮಾಚಿ ಕೊಡವರ ಹೆಸರಿನಲ್ಲಿ ಕೊಡವರಿಗೆ ದೊರಕುವ ಹಕ್ಕನ್ನು ಅಪಹರಿಸಿ ಧಕ್ಕಿಸಿಕೊಳ್ಳಬಾರದಷ್ಟೆ ಎಂದರು.
ಕೊಡವ ಸಮುದಾಯಗಳು ಎಂಬ ಯಾವುದೇ ಗುಂಪುಗಳಿಲ್ಲ, ಕೇವಲ ಕೊಡವ ಸಮುದಾಯ ಎನ್ನುವ ಏಕೈಕ ಗುಂಪಿದೆ. ರಾಜ್ಯದ ಮುಖ್ಯಮಂತ್ರಿಗಳು ಜನಸಂಖ್ಯಾ ಶಾಸ್ತ್ರದ ಬಗ್ಗೆ ಮಾಹಿತಿ ಪಡೆದು ಚಾರಿತ್ರಿಕ ಪ್ರಮಾದವನ್ನು ಸರಿಪಡಿಸಬೇಕು. ಒಂದು ವೇಳೆ ಮನವಿಯನ್ನು ಧಿಕ್ಕರಿಸಿದರೆ ಮುಂದೆ ಕಾನೂನಾತ್ಮಕ ಹೋರಾಟವನ್ನು ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸಂವಿಧಾನ ಶಿಲ್ಪಿ ಡಾ|| ಬಿ.ಆರ್.ಅಂಬೇಡ್ಕರ್ ಅವರು ಭಾರತದ ಸರ್ವ ಜನರ ಕಲ್ಯಾಣಕ್ಕೆ ರಚಿಸಿರುವ ಸಂವಿಧಾನದ ಮೇಲೆ ಪ್ರಮಾಣ ಮಾಡಿ ಅಧಿಕಾರ ನಡೆಸುವವರು ಸಂವಿಧಾನಿಕ ಆಶಯಕ್ಕೆ ಅಪಚಾರವೆಸಗಬಾರದು. ಸರ್ಕಾರ ಕೊಡವ ಸಮುದಾಯವನ್ನು ಎಸ್ಟಿ ಪಟ್ಟಿಗೆ ಸೇರಿಸಲು ಮರು ಅಧ್ಯಯನವನ್ನು ಮಾಡುವಂತೆ ಆದೇಶಿಸಬೇಕೆಂದು ಒತ್ತಾಯಿಸಿದರು.
ಕೊಡವ ಹೆಗ್ಗುರುತು, ಅನನ್ಯತೆ ಮತ್ತು ಅಸ್ಮಿತೆಯನ್ನು ಧ್ವಂಸ ಮಾಡಲು ದೇವಾಟುಪರಂಬ್ ಫಲಾನುಭವಿಗಳು ಹೊಂಚು ಹಾಕುವುದರ ಮೂಲಕ ಸಂಚು ನಡೆಸುತ್ತಿದ್ದಾರೆ. ಮತ್ತೊಂದು ಕಡೆಯಿಂದ ಭಾಷಿಕರೆನ್ನುವ ಕೂಟ ಕೊಡವರೊಳಗೆ ಪರಕಾಯ ಪ್ರವೇಶ ಮಾಡಲು ಕಿಡಿಗೇಡಿ ಜನಪ್ರತಿನಿಧಿಯೊಬ್ಬರು ಕಾರಣವೆಂದು ನಾಚಪ್ಪ ಆರೋಪಿಸಿದರು.
ಕೇವಲ ಒಂದು ಲಕ್ಷದಷ್ಟಿರುವ ಕೊಡವರು ಸಂವಿಧಾನಿಕವಾಗಿ ಸಿಗಬೇಕಾದ ಬುಡಕಟ್ಟು ಹಕ್ಕು ಕೇಳಿದರೆ ಇವರುಗಳ ದೃಷ್ಟಿಯಲ್ಲಿ ಸಂಕುಚಿತ ಮನಸ್ಥಿತಿ ಮತ್ತು ಮತೀಯವಾದ. ಕರ್ನಾಟಕದ 50 ಶಾಸಕರು ತಾವು ಹೊಂದಿರುವ ಸಮುದಾಯಕ್ಕೆ ಹೆಚ್ಚುವರಿ ಮೀಸಲಾತಿ ಬೇಕೆನ್ನುವ ಹೋರಾಟದಲ್ಲಿ ಕೊಡವ ಹೃದಯ ಭಾಗದಿಂದ ಆಯ್ಕೆಯಾದ ಜನಪ್ರತಿನಿಧಿ ಬಹಿರಂಗವಾಗಿ ಭಾಗವಹಿಸುವುದು ಜಾತ್ಯಾತೀತತೆ ಮತ್ತು ಬಹುತ್ವದ ಸಂಕೇತವೇ ಎಂದು ಪ್ರಶ್ನಿಸಿರುವ ಅವರು ಇವರಿಗಿರುವ ಜನಸಂಖ್ಯಾ ಶಾಸ್ತ್ರದ ತೂಕದ ಆಧಾರದಲ್ಲಿ ಏನು ಬೇಕಾದರೂ ಮಾಡಬಹುದು, ಆದರೆ ಕೊಡವರಂತಹ ಅತೀ ಸೂಕ್ಷ್ಮ ನಗಣ್ಯ ಸಮುದಾಯ ಏನೂ ಕೇಳಬಾರದೆಂಬ ಮನಸ್ಥಿತಿಯೇ ಅತ್ಯಂತ ಅಪಾಯಕಾರಿ ಎಂದರು.
ಸುದ್ದಿಗೋಷ್ಠಿಯಲ್ಲಿ ಕಲಿಯಂಡ ಪ್ರಕಾಶ್, ಚಂಬoಡ ಜನತ್ಕುಮಾರ್, ಅರೆಯಡ ಗಿರೀಶ್, ಅಪ್ಪಾರಂಡ ಪೂವಣ್ಣ ಹಾಗೂ ಬೀಪಡಿಯಂಡ ಬಿದ್ದಪ್ಪ ಉಪಸ್ಥಿತರಿದ್ದರು.








