ಮಡಿಕೇರಿ ಮಾ.18 : ರೈತರ ಸಮಸ್ಯೆಗಳು ಬೆಟ್ಟದಷ್ಟಿದೆ, ಜಿಲ್ಲೆಯ ವಿವಿಧ ಭಾಗಗಳಲ್ಲಿ ವಿವಿಧ ಮಾದರಿಯ ಸಮಸ್ಯೆಗಳಿವೆ. ಸರ್ಕಾರ ಮತ್ತು ಅಧಿಕಾರಿಗಳ ವರ್ಗವು ರೈತ ಪರ ಕಾಳಜಿಯಿಲ್ಲದೆ ಭರವಸೆಗಳೊಂದಿಗೆ ದಿನದೂಡುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಹೇಳಿದರು.
ಕರ್ನಾಟಕ ರಾಜ್ಯ ರೈತ ಸಂಘ ಗ್ರಾಮ ಘಟಕ ಪೆರಾಜೆ ಮಡಿಕೇರಿ ತಾಲೂಕು ವತಿಯಿಂದ ಪೆರಾಜೆಯ ಶ್ರೀ ಅನ್ನಪೂರ್ಣೇಶ್ವರಿ ಕಲಾ ಮಂದಿರ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ವಾರ್ಷಿಕ ಮಾಹಾಸಭೆ ಮತ್ತು ಘಟಕಕ್ಕೆ ನೂತನ ಸದಸ್ಯರ ಸೇರ್ಪಡೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ನೂತನ ಸದಸ್ಯರನ್ನು ಶಾಲು ಹೊದಿಸಿ ಬರಮಾಡಿಕೊಂಡರು.
ನಂತರ ಮಾತನಾಡಿದ ಅವರು, ಜಿಲ್ಲೆಯಲ್ಲಿ ಹಲವಾರು ಜ್ವಲಂತ ಸಮಸ್ಯೆಗಳಿವೆ. ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸಂಘಟನೆ ಪಾತ್ರ ಬಹಳಷ್ಟಿದೆ. ಸಂಘಟನೆಯೊಂದಿಗೆ ಇಲಾಖಾ ಮಟ್ಟದಲ್ಲಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಸ್ವತಂತ್ರ ಬಂದು ಹಲವು ದಶಕಗಳು ಸಂದರು ರೈತನ ಬವಣೆಯನ್ನು ನೀಗಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲವಾಗಿದೆ ಎಂದು ಆರೋಪಿಸಿದರು.
ಈ ಭಾಗದಲ್ಲಿ ಅಡಿಕೆ ಬೆಳೆಗೆ ಹಳದಿ ರೋಗದ ತಗುಲಿ ಬೆಳೆಗಾರರು ಅನುಭವಿಸುತ್ತಿರುವ ಸಮಸ್ಯೆಗಳ ಕುರಿತಾಗಿ ಕೆಲವು ತಿಂಗಳ ಹಿಂದೆ ಜಿಲ್ಲಾಧಿಕಾರಿಗಳೊಂದಿಗೆ ರೈತ ಸಂಘಟನೆ ಸದಸ್ಯರು ಮತ್ತು ಇಲ್ಲಿನ ಅಡಿಕೆ ಬೆಳೆಗಾರರಿಂದ ಚರ್ಚೆಗಳು ನಡೆದಿದೆ.
ವಿಜ್ಞಾನಿಗಳನ್ನು ಕರೆತಂದು ಸ್ಥಳ ಮತ್ತು ಅಡಿಕೆ ಬೆಳೆಗೆ ತಗುಲಿರುವ ರೋಗಕ್ಕೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಯೋಜನೆ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.
ರೈತನು ತಾನು ಎದುರಿಸುವ ಸಮಸ್ಯೆಗಳನ್ನು ಬಹಿರಂಗಪಡಿಸಲು ಸಾಧ್ಯವಾಗುತ್ತಿಲ್ಲ. ಎಲ್ಲಾ ಸಮಸ್ಯೆಗಳಿಗೆ ಹೋರಾಟದಿಂದಲೆ ಪರಿಹಾರ ಪಡೆಯುವ ಅನಿವಾರ್ಯತೆ ಬಂದೊದಗಿದೆ. ರೈತ ದೇಶದ ಬೆನ್ನಲುಬು ಎಂದು ಸಾರಿದರು. ವನ್ಯಮೃಗಗಳ ದಾಳಿಗೆ ಒಳಗಾದ ಕಾರ್ಮಿಕ ಕುಟುಂಬಗಳಿಗೆ ಪರಿಹಾರ ಒದಗಿಸುವಲ್ಲಿ ಸಂಘಟನೆ ಮುಂಚೂಣಿಯಲ್ಲಿದೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ರೈತ ಸಂಘ ಪೆರಾಜೆ ಗ್ರಾಮ ಘಟಕದ ಗೌರವ ಅಧ್ಯಕ್ಷ ಹರಿಶ್ಚಂದ್ರ ಮುಡುಕಜ್ಜೆ ಕಾರ್ಯಕ್ರಮದ ಅಧ್ಯಕ್ಷೆತ ವಹಿಸಿ ಮಾತನಾಡಿ, ಪೆರಾಜೆ ಗ್ರಾಮವು ಎರಡು ಜಿಲ್ಲೆಗಳ ಗಡಿಭಾಗದ ಗ್ರಾಮವಾಗಿದೆ. ಒಂದು ದಶಕಗಳಿಂದ ಈ ಭಾಗದ ಬೆಳೆಗಾರರು ಅಡಿಕೆ ಹಳದಿ ರೋಗದಿಂದ ಸಮಸ್ಯೆ ಎದುರಿಸುತ್ತಿದ್ದಾರೆ. ಆದರೇ ಶಾಶ್ವತ ಪರಿಹಾರ ಕಂಡುಕೊಳ್ಳಲು ಅಸಾದ್ಯವಾಗಿದೆ. ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆಗಳು ನಡೆದರು ಯಾವುದೇ ಪರಿಹಾರ ಕಂಡಿರುವುದಿಲ್ಲಾ. ಬೆಳೆಯನ್ನು ನಂಬಿಕೊಂಡು ಜೀವನ ಸಾಗಿಸುವ ರೈತನು ಸಂಕಷ್ಟದಲ್ಲಿದ್ದು, ಸರ್ವ ಸದಸ್ಯರು ಸಂಘಟಿತರಾಗಿ ಹೋರಾಟದ ಮೂಲಕ ಯಶಸ್ಸನ್ನು ಕಾಣಬೇಕು ಎಂದು ಹೇಳಿದರು.
ಕರ್ನಾಟಕ ರಾಜ್ಯ ರೈತ ಸಂಘ ಪೆರಾಜೆ ಗ್ರಾಮ ಘಟಕದ ಅಧ್ಯಕ್ಷ ಬಾಲಕೃಷ್ಣ ನಿಡ್ಯಮಲೆ ಮಾತನಾಡಿದರು.
ಕರ್ನಾಟಕ ರಾಜ್ಯ ರೈತ ಸಂಘ ಕೊಡಗು ಜಿಲ್ಲಾ ಘಟಕದ ಜಿಲ್ಲಾ ಸಂಚಾಲಕರಾದ ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ, ಮಾಯಮುಡಿ ವಲಯ ಅಧ್ಯಕ್ಷ ಪುಚ್ಚಿಮಾಡ ರಾಯ್, ನೆಲಜಿ ವಲಯ ಅಧ್ಯಕ್ಷರಾದಪಾಳೆಯಡ ಕೃಪ, ಶೈಲೇಶ್ ಬೆಟೋಳಿ ಸೇರಿದಂತೆ ಕರ್ನಾಟಕ ರಾಜ್ಯ ರೈತ ಸಂಘ ಗ್ರಾಮ ಪೆರಾಜೆ ಘಟಕದ ಪದಾಧಿಕಾರಿಗಳು, ನಿರ್ದೇಶಕರು, ಪೆರಾಜೆ ಗ್ರಾಮದ ಬೆಳೆಗಾರರು ಸಭೆಯಲ್ಲಿ ಹಾಜರಿದ್ದರು.
ಕರ್ನಾಟಕ ರಾಜ್ಯ ರೈತ ಸಂಘ ಪೆರಾಜೆ ಗ್ರಾಮ ಘಟಕದ ಉಪಧ್ಯಕ್ಷ ವೇಣು ಗೋಪಾಲ್ ಬಂಗಾರಕೋಡಿ ಸರ್ವರನ್ನು ಸ್ವಾಗತಿಸಿ, ನಿರೂಪಣೆ ಮಾಡಿದರು. ಪ್ರಧಾನ ಕಾರ್ಯದರ್ಶಿ ಬಂಗಾರಕೋಡಿ ಪುರುಶೋತ್ತಮ ವಂದನಾರ್ಪಣೆ ಮಾಡಿದರು.
ಪೆರಾಜೆ ಗ್ರಾಮದ ಸುಮಾರು 23 ಮಂದಿ ನೂತನ ಸದಸ್ಯರು ಸಂಘ ಸದಸ್ಯತ್ವ ಪಡೆದು ಸೇರ್ಪಡೆಗೊಂಡರು. ನೂತನ ಸದಸ್ಯರಿಗೆ ಸಂಘಟನೆ ಪ್ರಮುಖರು ರೈತ ಸಂಘಟನೆಯ ಹಸಿರು ಶಾಲು ಹೊದಿಸಿ ಗೌರವಿಸಿದರು. ಕರ್ನಾಟಕ ರಾಜ್ಯ ರೈತ ಸಂಘ ಕೊಡಗು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜೈ ಬೋಪಯ್ಯ ನೂತನ ಸದಸ್ಯರಿಗೆ ಪ್ರಮಾಣವಚನ ಬೋದಿಸಿದರು. ಕರ್ನಾಟಕ ರಾಜ್ಯ ರೈತ ಸಂಘ ಪೆರಾಜೆ ಗ್ರಾಮ ಘಟಕದ ಕಾರ್ಯದರ್ಶಿ ಅಶೋಕ್ ಪೀಚೆ ವಾರ್ಷಿಕ ವರದಿ ವಾಚಿಸಿದರು. ಕೋಶಾಧಿಕಾರಿ ನೆಕ್ಕಿಲ ಗಂಗಾಧರ್ ಲೆಕ್ಕಪತ್ರ ಮಂಡನೆ ಮಾಡಿದರು.
ಮೃತಪಟ್ಟ ರೈತರಿಗೆ ಕಾರ್ಯಕ್ರಮದ ಮೊದಲಿಗೆ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ವರದಿ : ಕಿಶೋರ್ ಕುಮಾರ್ ಶೆಟ್ಟಿ









