ಸೋಮವಾರಪೇಟೆ ಮಾ.19 : ಜೀವನ ಜಂಜಾಟ, ನಿತ್ಯದ ಸಂಕಷ್ಟದ ನಡುವೆಯೂ ಮಲೆನಾಡಿಗರು ತಮ್ಮ ಮೂಲ ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗುತ್ತಿರುವುದಕ್ಕೆ ಮಹಿಳೆಯರೇ ಮುಖ್ಯ ಕಾರಣ ಎಂದು ಶಾಸಕ ಎಚ್.ಕೆ.ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.
ಸೋಮವಾರಪೇಟೆ ತಾಲೂಕಿನ ಈಚಲಬೀಡು ಗ್ರಾಮದಲ್ಲಿ ಕರ್ನಾಟಕ ಜಾನಪದ ಪರಿಷತ್ತು ಮತ್ತು ಮಲೆನಾಡು ಜಾನಪದ ಉತ್ಸವ ಸಮಿತಿ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಮಲೆನಾಡು ಜಾನಪದ ಉತ್ಸವವನ್ನು ಮೊರದಲ್ಲಿ ಭತ್ತ ಸುರಿದು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಇನ್ನೊಬ್ಬರನ್ನು ತಿದ್ದುವ ಬದಲು ನಾವು ತಿದ್ದಿಕೊಳ್ಳೋಣ ಎಂಬ ಸತ್ಯವನ್ನು ಅರಿತು ಜನಪದ ಕಲೆಗಳನ್ನು ಉಳಿಸುವ ಕೆಲಸ ಮಾಡಬೇಕಿದೆ. ತನ್ನದೇ ಶ್ರೇಷ್ಠತೆ, ಪಾವಿತ್ರ್ಯತೆ ಹೊಂದಿರುವ ಜನಪದ ಕಲೆಗಳಿಗೆ ಸರಿಸಾಟಿ ಇಲ್ಲ. ಅದೇ ನಮ್ಮ ನಾಡಿನ ಮಣ್ಣಿನ ಗುಣ. ನುಡಿ, ನಡೆ ಮಾತ್ರವಲ್ಲದೇ ಕಲಾ ಪ್ರಾವಿಣ್ಯತೆಯಲ್ಲಿ ಜಾನಪದ ಸದಾ ಕಾಲ ಹಸಿರಾಗಿರುತ್ತದೆ. ಆದರೆ ಅವುಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಪ್ರಯತ್ನಗಳು ಹೆಚ್ಚಾಗಬೇಕು ಎಂದರು.
ಕರ್ನಾಟಕ ಜಾನಪದ ಪರಿಷತ್ತು ರಾಜ್ಯಾಧ್ಯಕ್ಷ ಹಿ.ಶಿ.ರಾಮಚಂದೇಗೌಡ ಮಾತನಾಡಿ, ಭದ್ರತೆ ನೀಡದ ನಾಗರಿಕತೆಗಿಂತ ಶತಮಾನಗಳಿಂದ ನಡೆದು ಬಂದಿರುವ ಜಾನಪದ ಸಂಸ್ಕೃತಿ ವಿಭಿನ್ನವಾಗಿದ್ದು ಮಹಿಳೆಯರಿಂದ ಅದು ಇನ್ನೂ ಉಳಿದಿದೆ. ಶಾಮತಿ, ಸೌಹಾರ್ದತೆ ಅವರಲ್ಲಿ ನೆಲೆಯಾಗಿರುವುದೇ ಅದಕ್ಕೆ ಕಾರಣ. ಇದರ ಜತೆಗೆ ಜಗತ್ತನ್ನೇ ಆವರಿಸಿರುವ ಕಾರ್ಪೋರೇಟ್ ಸಂಸ್ಥೆಗಳು ಮುಮದಿನ ದಿನಗಳಲ್ಲಿ ಕೃಷಿ ರಂಗಕ್ಕೂ ಕಾಲಿಟ್ಟರೆ ರೈತರ ಸ್ಥಿತಿ ಇನ್ನೆಲ್ಲಿಗೆ ಹೋಗಿ ನಿಲ್ಲುತ್ತದೆ ಎಂಬುದನ್ನು ಈಗಿನಿಂದಲೇ ಆಲೋಷಿಸಬೇಕು ಎಂದು ತಿಳಿಸಿದರು.
ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ಮಾತನಾಡಿ, ಭತ್ತ ಬೆಳೆಯುವ ಪ್ರಮಾಣ ಕಡಿಮೆಯಾಗುತ್ತಿದೆ. ಇದೇ ಪರಿಸ್ಥಿತಿ ಮುಮದುವರಿದರೆ ದೇಶದಲ್ಲಿ ಆಹಾರದ ಕೊರತೆ ಎದುರಿಸಬೇಕಾಗುತ್ತದೆ. ಈಗಾಗಲೇ ಚೀನಾದಿಂದ ಪ್ಲಾಸ್ಟಿಕ್ ಅಕ್ಕಿ ಲಗ್ಗೆ ಇಡುತ್ತಿದ್ದು ಮತ್ತಷ್ಟು ಆತಂಕ ಎದುರಿಸಬೇಕಾಗುತ್ತದೆ. ರೈತರು ತಾವು ಮಾಡುವ ಕೆಲಸಗಳ ಬಗ್ಗೆ ಕೀಳರಿಮೆ ಪಡಬಾರದು. ಅದು ಅತ್ಯಂತ ಶ್ರೇಷ್ಠ ಕಾಯಕ ಎಂಬುದನ್ನು ನಂಬಿ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಶ್ರದ್ಧೆಯಿಂದ ಕೃಷಿ ಕೈಗೊಂಡರೆ ಯಶಸ್ಸು ಖಂಡಿತ ಸಿಕ್ಕೇ ಸಿಗುತ್ತದೆ ಎಂಬುದನ್ನು ಮರೆಯಬಾರದು ಎಂದು ಹೇಳಿದರು.
ಸಂಸ್ಕೃತಿ ಕಲಿಸುವ ಜಾನಪದವನ್ನು ಉಳಿಸಿದರೆ ಮಾತ್ರ ನಮ್ಮ ಮಣ್ಣಿನ ಸೊಗಡನ್ನು ಉಳಿಸಲು ಸಾಧ್ಯ. ಜನಪದ ಕಲೆ, ಸಂಸ್ಕೃತಿ ಉಳಿಸುವ ಕೆಲಸಗಳನ್ನು ಸರ್ಕಾರ ಮಾಡಬೇಕು. ಆ ಕೆಲಸವನ್ನು ಎಚ್.ಎಲ್.ನಾಗೇಗೌಡರು ಮಾಡಲು ಮುಂದಾಗಿ, ಸ್ನೇಹಿತರು ಕೊಟ್ಟ ಧನ ಸಹಾಯ ಬಳಸಿ 1979ರಲ್ಲಿ ಜಾನಪದ ಪರಿಷತ್ತು ಸ್ಥಾಪಿಸಿದ್ದರು. ಇಂತಹ ಮನಸ್ಥಿತಿ ಹಳ್ಳಿ ಹಳ್ಳಿಗಳಲ್ಲೂ ಮೂಡಬೇಕು. ಶಿಸ್ತು, ಜೀವನ ಮೌಲ್ಯ, ಸಂಸ್ಕೃತಿ ಸೇರಿ ಎಲ್ಲವನ್ನೂ ಕಲಿಸುವ ನಮ್ಮ ಜನಪದ ಅಳಿವಿಲ್ಲದಂತೆ ಮುನ್ನಡೆಯಬೇಕು ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ಜಾನಪದ ಪರಿಷ್ತ ಜಿಲ್ಲಾಧ್ಯಕ್ಷ ಡಾ. ಹಂಪನಹಳ್ಳಿ ತಿಮ್ಮೇಗೌಡ ಅವರು, ಮಲೆನಾಡಿನ ಉಡುಗೆ, ಆಹಾರ ಪದ್ದತಿ ಕಣ್ಮರೆಯಾಗಿದೆ. ಸುಗ್ಗಿ ಕುಣಿತ, ಕುಣಿಮಿಣಿ ವಾದ್ಯ ಹಿನ್ನೆಡೆಯಾಗಿದೆ. ಅವರುಗಳ ಮರು ನೆನಪಿಗಾಗಿ ಆಯೋಜಿಸಿದ ಮಲೆನಾಡು ಜಾನಪದ ಉತ್ಸವಕ್ಕೆ ಈ ಭಾಗದ ನೀಡಿದ ಉತ್ಸಾವ ಅತೀವ್ರ ಸಂತಸ ಮೂಡಿಸಿದೆ. ರಾಜ್ಯ ಮಟ್ಟದ ಸಮಾರಂಭಕ್ಕೆ ಯಾವುದೇ ಕೊಡತೆ ಇಲ್ಲದಂತೆ ಏರ್ಪಾಡಾಗಿದೆ. ಮಹಿಳೆಯರು, ಯುವಕರು, ಗ್ರಾಮದ ಹಿಡಿಯರು ಆಸಕ್ತಿಯಿಂದ ಹಬ್ಬದ ಸಂಭ್ರಮ ಸೃಷ್ಟಿಸಿದ್ದಾರೆ. ಇದು ಈ ಮಣ್ಣಿನ ಸೊಗಡು ಎಂಬುದನ್ನು ನಾವು ಕಂಡಿದ್ದೇವೆ ಎಂದರು.
ಮನೆಹಳ್ಳಿ ಮಠದ ಶ್ರೀ ಮಹಾಂತ ಶಿವಯೋಗಿ ಸ್ವಾಮೀಜಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ.ಸಂದೇಶ್, ಕಲಾವಿದ ಮೇಟಿಕೆರೆ ಹಿರಿಯಣ್ಣ, ಮಲೆನಾಡು ಜಾನಪದ ಉತ್ಸವ ಸಮಿತಿ ಅಧ್ಯಕ್ಷ ಆರ್.ಪಿ.ಲಕ್ಷ್ಮಣ, ಈಚಲಬೀಡು ಗ್ರಾಮಾಭಿವೃದ್ಧಿ ಸಂಘದ ಅಧ್ಯಕ್ಷ ದೊಡ್ಡೇಗೌಡ, ಹಿರಿಯ ವಾರ್ತಾಧಿಕಾರಿ ವಿನೋದ್ ಚಂದ್ರ, ನ್ಯಾ.ಮೂ.ಪ್ರತಿಭಾ, ಜಯಪ್ರಕಾಶ್, ಹೊಸೂರು ಗ್ರಾಪಂ ಅಧ್ಯಕ್ಷೆ ಪೂರ್ಣಿಮಾ ಮಂಜುನಾಥ್, ನಿವೃತ್ತ ಪ್ರಧ್ಯಾಪಕ ಪುಟ್ಟೇಗೌಡ, ಜಿಪಂ ಮಾಜಿ ಸದಸ್ಯೆ ಉಜ್ಮಾರಿಜ್ವಿ ಸುದರ್ಶನ್, ಬೆಳ್ಳಿಗೌಡ, ಮಧುಸೂಧನ್ ಚಿನ್ನಹಳ್ಳಿ ಇತರರಿದ್ದರು. ಸನ್ನಿಧಿ, ದವಳಾ, ಗಾನಶ್ರೀ ತಂಡದಿಂದ ಪ್ರಾರ್ಥಿಸಿದರು. ನಾಡಗೀತೆ ಕುಮಾರ್ ಕಟ್ಟೆಬೆಳಗುಲಿ ತಂಡದವರು ನಾಡಗೀತೆ ಹಾಡಿದರು. ಕರ್ನಾಟಕ ಜಾನಪದ ಪರಿಷತ್ಯ ತಾಲೂಕು ಅಧ್ಯಕ್ಷ ಆನಚಿದ್ ಸ್ವಾಗತಿಸಿದರು.
::: ಮೆರವಣಿಗೆಯಲ್ಲಿ ಮೇಳೈಸಿದ ದೇಸಿ ಸೊಗಡು :::
ಮಲೆನಾಡು ಜಾನಪದ ಉತ್ಸವದ ಅಂಗವಾಗಿ ಆಯೋಜಿಸಿದ್ದ ಜಾನಪದ ಕಲಾ ತಂಡಗಳ ಮೆರವಣಿಗೆಗೆ ಗ್ರಾಮದ ಬಸವೇಶ್ವರ ಸ್ವಾಮಿ ದೇವಸಥಾನ ಆವರಣದಲ್ಲಿ ಗಣ್ಯರು ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿದರು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ 18 ಕಲಾ ತಂಡಗಳು ಮೆರವಣಿಗೆಗೆ ಮೆರುಗು ತಂದುಕೊಟ್ಟವು. ಮಾರ್ಗದುದ್ದಕ್ಕೂ ಮಹಿಳೆಯರು ದೊಡ್ಡ ರಂಗೋಲಿಗಳನ್ನಿರಿಸಿದ್ದರು. ಹಿರಿಯರು, ಕಿರಿಯರೆನ್ನದೇ ಜನರು ಕುಣಿದು ಕುಪ್ಪಳಿಸಿದರು. ಮೆರವಣಿಗೆಯು ವೃತ್ತದ ಬಳಿ ಆಗಮಿಸುತ್ತಿದ್ದಂತೆ ಯುವ ಸಮೂಹ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಅಂತ್ಯದಲ್ಲಿ ಮಹಿಳೆಯರು ಶಾಸಕ ಎಚ್.ಕೆ.ಕುಮಾರಸ್ವಾಮಿ ಹಾಗೂ ಇತರ ಗಣ್ಯರಿಗೆ ಆರತಿ ಬೆಳಗಿದರು. ವೇದಿಕೆ, ಊಟದ ವ್ಯವಸ್ಥೆ, ಪಾರ್ಕಿಂಗ್ ಎಲ್ಲವೂ ಅಚ್ಚುಕಟ್ಟಾಗಿತ್ತು.
::: ಮೆಚ್ಚುಗೆ ಗಳಿಸಿದ ಕಲಾ ಪ್ರದರ್ಶನಗಳು :::
ರಾಜ್ಯದ ಹಲವು ಭಾಗಗಳಿಂದ ಆಗಮಿಸಿದ ಜಾನಪದ ಕಲಾ ತಂಡಗಳು ಕಲಾ ಪ್ರದರ್ಶನ ನೀಡಿ ಮೆಚ್ಚುಗೆ ಗಳಿಸಿದರು. ಅತ್ತಿಗನಹಳ್ಳಿ ಸುರೇಶ್ ತಂಡದ ಸುಗ್ಗಿ ಕುಣಿತ, ಚಿಕ್ಕಲ್ಲೂರು ಕೊಮಾರಯ್ಯ ತಂಡದ ಕುಣಿಮಿಣಿ ವಾದ್ಯ, ಕೊಡಗಿನ ಉಮ್ಮತ್ತಾಟ್, ಹಾಸನದ ಟಿ.ಎಸ್.ಲಕ್ಷ್ಮಣ್ ತಂಡದ ಡೊಳ್ಳು ಕುಣಿತ, ಅರಕಲಗೂಡು ಪ್ರದೀಪ್ ವೃಂದದವರ ಕಂಸಾಳೆ ನೃತ್ಯ, ಬೀಕನಹಳ್ಳಿ ಕೆಂಪೇಗೌಡ ತಂಡದ ಕೋಲಾಟ, ಯಡಕೆರೆ ದೇವರಾಜ್ ಅವರ ತಂಬೂರಿ ಪದ, ಪನ್ನಸಮುದ್ರ ಕೊಮಾರಯ್ಯ ತಂಡದ ಚಿಟ್ಟಿಮೇಳ, ರಾಜಗೆರೆ ಶಿವಣ್ಣ ತಂಡದವರ ಕರಗ ನೃತ್ಯ, ರಾಜಗೆರೆ ಶಿವಮ್ಮ ತಂಡದ ಸೋಮನ ಕುಣಿತ, ನವೀನ್ ತಂಡದ ವೀರಗಾಸೆ, ದಾವಣಗೆರೆ ಶ್ರುತಿ ತಂಡದ ಲಂಬಾಣಿ ನೃತ್ಯ, ಪೂಜಾ ಯುವತಿ ಮಂಡಳಿಯ ಕೋಲಾಟ, ಗಂಧರ್ವ ಯುವಕ ಸಂಘದ ಗೀಗೀ ಪದ ಹಾಗೂ ಗೌಡಳ್ಳಿ ಚಂದ್ರಕಲಾ ತಂಡದವರಿಂದ ರಾಗಿ ಬೀಸುವ ಪದ ಪ್ರದರ್ಶನಗೊಂಡವು. ಪ್ರತಿಭಾನ್ವಿತ ಕಲಾವಿದರು ಜನಪದ ಗೀತೆಗಳನ್ನು ಹಾಡಿದರು.
ಸಾಧಕರಿಗೆ ಸನ್ಮಾನ: ನ್ಯಾಯಾಧೀಶೆ ಪ್ರತಿಭಾ ರೈ, ಹಿರಿಯ ನಾಗರಿಕ, ಈ.ಸಿ.ಕೃಷ್ಣೇಗೌಡ, ಉದ್ಯಮಿಗಳಾದ ಮಧುಸೂಧನ್, ಎಂ.ಟಿ.ಪ್ರದೀಪ್, ಸಾಹಿತಿ ಲಾವಣ್ಯಾ ಮೋಹನ್, ಸುಗ್ಗಿ ಕುಣಿತ ಕಲಾವಿದ ಸಿ.ಕೆ.ಸುಬ್ಬೇಗೌಡ, ವೈದ್ಯ ಡಾ. ಎಂ.ಎಸ್.ರಾಮಚoದ್ರ, ಮಾದರಿ ಕೃಷಿಕ ಕೆ.ಜಿ.ರಾಮಚಂದ್ರ, ಎಸ್.ಆರ್.ಕುಮಾರ್, ಮಾಜಿ ಸೈನಿಕ ಕಾಮನಹಳ್ಳಿ ಬೆಳ್ಳಿಗೌಡ, ರೈತ ಮುಖಂಡ ಎಚ್.ಬಿ.ರಾಮೇಗೌಡ ಅವರನ್ನು ಸನ್ಮಾನಿಸಲಾಯಿತು.











