ಮಡಿಕೇರಿ ಮಾ.19 : ತೊಟ್ಟಿಲ್ಲ ತೂಗುವ ಕೈಗಳು ದೇಶವನ್ನು ಆಳಬಲ್ಲವು ಎಂಬುವುದನ್ನು ಮಹಿಳೆಯರು ಈಗಾಗಲೇ ಸಾಬೀತುಪಡಿಸಿದ್ದು, ಉತ್ತಮ ನಾಗರಿಕ ಸಮಾಜದ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ದೊಡ್ಡದಿದೆ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಹೇಳಿದ್ದಾರೆ.
ಸೋಮವಾರಪೇಟೆ ತಾಲ್ಲೂಕು ಪ್ರಾಥಮಿಕ ಹಾಗೂ ಪೌಢಶಾಲಾ ಶಿಕ್ಷಕರ ಸಂಘದ ವತಿಯಿಂದ ಮಾನಸ ಹಾಲ್ ನಲ್ಲಿ ಆಯೋಜಿಸಿದ್ದ ‘ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ’ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಿತ್ತೂರುರಾಣಿ ಚನ್ನಮ್ಮ, ಝಾನ್ಸಿರಾಣಿ ಲಕ್ಷ್ಮೀಬಾಯಿ, ಬೆಳವಡಿ ಮಲ್ಲಮ್ಮ, ಒನಕೆ ಒಬವ್ವ ಇಂತಹ ವೀರವನಿತೆಯರ ಹೋರಾಟದ ಬಗ್ಗೆ ನಾವೆಲ್ಲ ಓದಿದ್ದೇವೆ. ದಿ.ಇಂದಿರಾಗಾಂಧಿಯವರು ಪ್ರಧಾನಿ ಸ್ಥಾನವನ್ನು ನಿಭಾಯಿಸಿದ್ದಾರೆ. ಬಾಹ್ಯಕಾಶದಲ್ಲೂ ಅನೇಕ ಮಹಿಳೆಯರು ಸಾಧನೆ ಮಾಡಿದ್ದಾರೆ. ಈಗ ಐಎಎಸ್, ಐಪಿಎಸ್, ಐಎಫ್ಎಸ್, ಐಆರ್ಎಸ್ ಪರೀಕ್ಷೆಯನ್ನು ಅತೀ ಹೆಚ್ಚು ಮಹಿಳೆಯರು ಉತ್ತೀರ್ಣರಾಗಿ ಉನ್ನತಹುದ್ದೆ ಅಲಂಕರಿಸಿದ್ದಾರೆ. ನಮ್ಮ ದೇಶದಲ್ಲಿ ಮಹಿಳೆಯರು ಮತ್ತು ಪುರುಷರಿಗೆ ಸಮಾನವಾದ ಹಕ್ಕುಗಳಿದ್ದು, ಪ್ರತಿಯೊಬ್ಬರು ಮಹಿಳೆಯರ ಬಗ್ಗೆ ಗೌರವ ಇಟ್ಟುಕೊಳ್ಳಬೇಕು ಎಂದು ಹೇಳಿದರು. ಮಹಿಳೆಯರು ತಮಗೆ ಸಿಗುತ್ತಿರುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುತ್ತಿರುವುದು ಶ್ಲಾಘನೀಯ ಎಂದು ಹೇಳಿದರು. ಭಾರತದಲ್ಲಿ ಮಹಿಳಾ ಸ್ವಾತಂತ್ರ್ಯಕ್ಕೆ ನಮ್ಮ ಸಂವಿಧಾನದಲ್ಲಿ ಅವಕಾಶವಿದ್ದು, ಈಗಲೂ ಮಹಿಳೆಯರಿಗೆ ಅತೀ ಗೌರವ ಸಿಗುತ್ತಿದೆ ಎಂದು ಅಭಿಪ್ರಾಯಿಸಿದರು.
ಅಧುನಿಕ ಕುಟುಂಬದಲ್ಲಿ ಸಂಸ್ಕೃತಿ ಉಳಿದಿದೆ ಎಂದರೆ ಅದರಲ್ಲಿ ಮಹಿಳೆಯ ಕೊಡುಗೆ ಇದೆ. ತಾಯಿ ಮತ್ತು ತಾಯಿನಾಡು ಸ್ವರ್ಗಕ್ಕೆ ಸಮಾನವಾದುದು. ನಾಗರಿಕ ಪುನರುತ್ಥಾನಕ್ಕೆ ಸದಾ ಮಹಿಳೆಯರು ಸೇವೆ ಸಲ್ಲಿಸುತ್ತಿದ್ದು, ಅವರಿಗೆ ಗೌರವ ಕೊಡಬೇಕಾದದ್ದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಮುಖ್ಯ ಅತಿಥಿಗಳಾಗಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ.ಸುರೇಶ್ ಹೇಳಿದರು.
ಬಾಲಪ್ರತಿಭೆ ಸುಂಠಿಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಶ್ರೀಶಾ ಮಹಿಳಾ ಸದಿನಾಚರಣೆ ಬಗ್ಗೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷೆ ಎಲ್.ಎಂ. ಪ್ರೇಮಾ, ತಾಲ್ಲೂಕು ಅಧ್ಯಕ್ಷ ಬಸವರಾಜು, ರಾಜ್ಯ ಪ್ರತಿನಿಧಿ ಶಿವಕುಮಾರ್, ಲೇಖಕಿ ಕೆ.ಕೆ.ಸುನಿತಾ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಪ್ರದೀಪ್, ಬಿ.ಆರ್.ಸಿ. ಹೇಮಂತ್, ಸಂಘದ ನಿರ್ದೇಶಕರಾದ ಕವಿತ ಇದ್ದರು. ಕ್ಲಸ್ಟರ್ನ ಬಿ.ಆರ್.ಸಿಗಳನ್ನು ಸಂಘದ ವತಿಯಿಂದ ಗುರುಸೇವಾರತ್ನ ಬಿರುದು ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಿಕ್ಷಕಿಯರನ್ನು ಶಾಸಕರು ವೈಯುಕ್ತಿಕವಾಗಿ ಶಾಲುಹೊದಿಸಿ ಸನ್ಮಾನಿಸಿದರು.









