ಮಡಿಕೇರಿ ಮಾ.19 : ನಗರದ ಜನರಲ್ ತಿಮ್ಮಯ್ಯ ಸ್ಮಾರಕ ಭವನಕ್ಕೆ ಭಾರತೀಯ ಸೇನಾ ದಕ್ಷಿಣ ವಲಯದ (ಸದರನ್ ಆರ್ಮಿ ಕಮಾಂಡ್) ಮುಖ್ಯಸ್ಥರಾದ ಲೆಫ್ಟಿನೆಂಟ್ ಜನರಲ್ ಎ.ಕೆ. ಸಿಂಗ್ ಅವರು ಭಾನುವಾರ ಭೇಟಿ ನೀಡಿ, ವೀಕ್ಷಿಸಿದರು. ಜನರಲ್ ತಿಮ್ಮಯ್ಯ ಅವರ ಬಾಲ್ಯದ ಜೀವನ, ಶಿಕ್ಷಣ, ರಾಷ್ಟ್ರ ಮತ್ತು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಸೇನಾ ಕ್ಷೇತ್ರದಲ್ಲಿನ ಸಾಧನೆ ಮತ್ತಿತರ ಬಗ್ಗೆ ಮಾಹಿತಿ ಪಡೆದರು. ಜನರಲ್ ತಿಮ್ಮಯ್ಯ ಅವರು ಭಾರತೀಯ ಸೇನಾ ಕ್ಷೇತ್ರದಲ್ಲಿ ಅದ್ಭುತ ಸಾಧನೆ ಮಾಡಿದ್ದು, ಜನರಲ್ ತಿಮ್ಮಯ್ಯ ಅವರನ್ನು ಸದಾ ಸ್ಮರಿಸಬೇಕಿದೆ ಎಂದರು. ಮೇಜರ್ ಜನರಲ್ ಪ್ರೀತ್ ಪಾಲ್ ಸಿಂಗ್ ಇತರರು ಇದ್ದರು. ಮೇಜರ್ (ನಿವೃತ್ತ) ಬಿದ್ದಂಡ ನಂಜಪ್ಪ ಅವರು ಜನರಲ್ ಕೆ.ಎಸ್.ತಿಮ್ಮಯ್ಯ ಅವರ ಬಾಲ್ಯ ಜೀವನ, ರಾಷ್ಟ್ರ ಮತ್ತು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಜನರಲ್ ತಿಮ್ಮಯ್ಯ ಅವರ ಸೇನಾ ಕ್ಷೇತ್ರದಲ್ಲಿನ ಸಾಧನೆ ಮತ್ತಿತರ ಮಾಹಿತಿಯನ್ನು ಸವಿವರವಾಗಿ ವಿವರಿಸಿದರು. ಸೈನಿಕ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಮೇಜರ್ (ನಿವೃತ್ತ) ಡಾ.ಬಾಲಸುಬ್ರಮಣ್ಯಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ, ಜನರಲ್ ತಿಮ್ಮಯ್ಯ ಸ್ಮಾರಕ ಭವನದ ಗೈಡ್ ಸುಬೇದಾರ್ ಗೌಡಂಡ ತಿಮ್ಮಯ್ಯ, ನಿರ್ಮಿತಿ ಕೇಂದ್ರದ ಎಂಜಿನಿಯರ್ ರಾಘವೇಂದ್ರ ಇತರರು ಇದ್ದರು.









