ಮಡಿಕೇರಿ ಮಾ.24 : ಮುಸಲ್ಮಾನರ ಧಾರ್ಮಿಕ ಭಾವನೆಗೆ ದಕ್ಕೆ ತಂದಿರುವ ಶಾಸಕ ಕೆ.ಎಸ್.ಈಶ್ವರಪ್ಪ ಅವರ ವಿರುದ್ಧ ಸರ್ಕಾರ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮಡಿಕೇರಿಯ ಬದ್ರಿಯಾ ಜಮಾಅತ್ ಒತ್ತಾಯಿಸಿದೆ.
ಪತ್ರಿಕಾ ಪ್ರಕಟಣೆ ನೀಡಿರುವ ಜಮಾಅತ್ ಕಾರ್ಯದರ್ಶಿ ಎಂ.ಉಮ್ಮರ್, ಕೊಡಗಿನ ಗೋಣಿಕೊಪ್ಪಲು ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಪಕ್ಷದ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಶಾಸಕ ಈಶ್ವರಪ್ಪ ಅವರು ಮಸೀದಿಯಲ್ಲಿ ಕರೆಕೊಡುವ “ಅಝಾನ್” ಮತ್ತು ಅಲ್ಲಾಹುವಿನ ಬಗ್ಗೆ ಅಸಂವಿಧಾನಿಕವಾಗಿ ನೀಡಿರುವ ಹೇಳಿಕೆ ಖಂಡನೀಯ ಎಂದು ತಿಳಿಸಿದ್ದಾರೆ.
ಮಸೀದಿಯಿಂದ ನಮಾಜಿಗೆ ಕರೆಕೊಡುವ “ಅಝಾನ್” ಮತ್ತು ಅಲ್ಲಾಹುವಿನ ಬಗ್ಗೆ ಮಾತನಾಡಿ ಇಸ್ಲಾಂ ಧರ್ಮವನ್ನು ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಇತ್ತೀಚೆಗೆ ನಡೆದ ಬದ್ರಿಯಾ ಜಮಾಅತ್ ನ ವಾರ್ಷಿಕ ಮಹಾಸಭೆಯಲ್ಲಿ ಈಶ್ವರಪ್ಪ ಅವರ ಹೇಳಿಕೆಯನ್ನು ಖಂಡಿಸಲಾಗಿದೆ. ಈ ರೀತಿಯ ಸಂವಿಧಾನ ವಿರೋಧಿ ಹೇಳಿಕೆಯಿಂದ ಸಮಾಜದಲ್ಲಿ ಅಶಾಂತಿ ಮೂಡುವುದರಿಂದ ಸರ್ಕಾರ ತಕ್ಷಣ ಈಶ್ವರಪ್ಪ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಉಮ್ಮರ್ ಒತ್ತಾಯಿಸಿದ್ದಾರೆ.










