ವಿರಾಜಪೇಟೆ ಮಾ.27 : ದಂತ ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳನ್ನು ಹುಟ್ಟುಹಾಕಬೇಕು. ಜಗತ್ತು ಎದುರು ನೋಡುವಂತೆ ವೈದ್ಯಕೀಯ ಕ್ಷೇತ್ರದಲ್ಲಿ ಸಂಶೋಧನೆಗೆ ವೈದ್ಯಕೀಯ ಸ್ನೇಹಿತರು ಮುಂದಾಗುವಂತೆ ಅಂತರ್ರಾಷ್ಟ್ರೀಯ ದಂತ ವೈದ್ಯಕೀಯ ಕಾರ್ಯಾಗಾರದ ಸಹ ಕಾರ್ಯಕಾರಿ ಮಂಡಳಿಯ ಉಪಾಧ್ಯಕ್ಷರು ಮತ್ತು ಯುರೇಷೀಯನ್ ಅಸೋಶಿಯೆಷನ್ ಆಫ್ ಓರ್ತೋಡೋಂಟಿಕ್ಸನ ಅಧ್ಯಕ್ಷ ಪ್ರೊ. ಡಾ.ರಾಲ್ಫ್ ಜೋಹನ್ಸ್ ರೇಡಾಲಸ್ಕಿ ಅಭಿಪ್ರಾಯ ವ್ಯಕ್ತಪಡಿಸಿದರು.
ಕೊಡಗು ದಂತ ವೈದ್ಯಕೀಯ ಮಹಾವಿದ್ಯಾಲಯ ವಿರಾಜಪೇಟೆ ಇವರ ಆಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿರುವ ದೇಶದ ಪ್ರಥಮ ಭಾರತ-ಅಂತರ್ ರಾಷ್ಟ್ರೀಯ ದಂತ ವೈದ್ಯಕೀಯ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಸಮಾವೇಶದಲ್ಲಿ ದಂತ ವೈದ್ಯಕೀಯ ಕ್ಷೇತ್ರದಲ್ಲಿ ಆತ್ಯಾಧುನಿಕವಾಗಿ ಹೊರಹೊಮ್ಮುತ್ತಿರುವ ಓರ್ತೋಡೋಂಟಿಕ್ಸ್ ತಂತ್ರಜ್ಞಾನಗಳ ಬಗ್ಗೆ ಚರ್ಚೆ ಮಾಡಲಾಗುತ್ತದೆ. ವೈದ್ಯಕೀಯ ಚಿಕಿತ್ಸಾ ಪದ್ದತಿಯಲ್ಲಿ ನೂತನ ತಂತ್ರಜ್ಞಾನ ಅಳವಡಿಕೆ ಬಗ್ಗೆ ಕಾರ್ಯಾಗಾರಕ್ಕೆ ಆಗಮಿಸಿರುವ ವಿವಿಧ ದೇಶಗಳಿಂದ ಆಗಮಿಸಿರುವ ಪ್ರತಿನಿಧಿಗಳಿಂದ ಚಿಕಿತ್ಸಾ ಪದ್ದತಿಗಳ ಉಪನ್ಯಾಸ ಕಾರ್ಯಕ್ರಮಗಳು ನಡೆಯಲಿದೆ ಎಂದರು.
ಇಂದು ಜಗತ್ತು ಏನನ್ನು ಬಯಸುತ್ತದೆ, ಅದರೊಂದಿಗೆ ನಾವುಗಳು ವೈದ್ಯಕೀಯ ಸಂಶೋಧಕರು ವಿವಿಧ ರೀತಿಯ ಸಂಶೋಧನೆಗೆ ಮುಂದಾಗಬೇಕು. ದಂತಗಳ ಬಗ್ಗೆ ಕಾಳಜಿ ಮತ್ತು ವೈದ್ಯಕೀಯ ಉಪಯುಕ್ತತೆಯನ್ನು ಕಂಡುಕೊಳ್ಳಲು ಕಾರ್ಯಾಗಾರದ ಪ್ರತಿನಿಧಿಗಳು ಮುಂದಾಗುವಂತೆ ಕರೆ ನೀಡಿದರು.
ಕೊಡಗು ದಂತ ವೈದ್ಯಕೀಯ ವಿದ್ಯಾಲಯವು ಅದ್ಬುತ ಕಾರ್ಯಾಗಾರವನ್ನು ಆಯೋಜಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೊಡಗು ದಂತ ವೈದ್ಯಕೀಯ ವಿದ್ಯಾಲಯದ ಡೀನ್ ಮತ್ತು ಅಂತರ್ರಾಷ್ಟ್ರೀಯ ಕಾರ್ಯಗಾರದ ಆಯೋಜಕರಾಗಿರುವ ಡಾ.ಸುನೀಲ್ ಮುದ್ದಯ್ಯ ಮಾತನಾಡಿ, ದೇಶದಲ್ಲಿ ಪ್ರಥಮ ಬಾರಿಗೆ ಅಂತರ್ ರಾಷ್ಟ್ರೀಯ ಮಟ್ಟದ ಕಾರ್ಯಗಾರವನ್ನು ಏರ್ಪಡಿಸಲು ಅವಕಾಶ ಕಲ್ಪಿಸಿರುವುದು ಕೊಡಗು ಜಿಲ್ಲೆಗೆ ಮತ್ತು ಸಂಸ್ಥೆಯ ಸೌಭಾಗ್ಯವಾಗಿದೆ ಎಂದರು.
ದಂತ ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಚಿಕಿತ್ಸಾ ಪದ್ದತಿಗಳು ಜಗತ್ತಿಗೆ ತಿಳಿಯಪಡಿಸುವುದು ಕಾರ್ಯಗಾರದ ಮುಖ್ಯ ಉದ್ದೇಶವಾಗಿದೆ. ಈ ಹಿಂದೆ ಉಪಯೋಗವಾಗುತ್ತಿದ್ದ ಚಿಕಿತ್ಸಾ ಪದ್ದತಿಗೆ ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಚಿಕಿತ್ಸಾ ಕ್ರಮಗಳನ್ನು ಉತ್ತಮ ರೀತಿಯಲ್ಲಿ ಜನತೆಗೆ ವಿತರಿಸಬೇಕು ಎನ್ನುವುದು ಮುಖ್ಯವಾಗಿದೆ.
ಅಂತರರಾಷ್ಟ್ರೀಯ ಮಟ್ಟದ ಕಾರ್ಯಾಗಾರ ದೇಶದಲ್ಲಿ ಆಯೋಜಿಸಲು ಮತ್ತು ನಮ್ಮ ಸಂಸ್ಥೆಯಲ್ಲಿ ಏರ್ಪಡಿಸಲು ಸಹಕರಿಸಿದ ಸರ್ವ ದೇಶದ ಪ್ರತಿನಿಧಿಗಳಿಗೆ ಧನ್ಯವಾದ ಅರ್ಪಿಸಿದರು.
ದಂತ ವೈದ್ಯಕೀಯ ಕ್ಷೇತ್ರದಲ್ಲಿ ಭವಿಷ್ಯದ ಪ್ರವೃತ್ತಿಗಳ ಕುರಿತು ಆರಂಭಿಕ ಟಿಪ್ಪಣೆಗಳ ಬಗ್ಗೆ ಮಾತನಾಡಿದ ವೈಜ್ಞಾನಿಕ ಸಮಿತಿಯ ಸದಸ್ಯರಾದ ಡಾ. ಅನ್ಮೋಲ್ ಕಲ್ಹಾ ಅವರು ದೇಶ ಮತ್ತು ವಿಶ್ವದಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಆಕ್ರಮಿಸಿ ಮಾರಕ ರೋಗ ಕೊರೋನಾದಿಂದಾಗಿ ಹಲವು ರಾಷ್ಟøಗಳಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಸಂಶೋಧನೆಗೆ ಹಿಂದೇಟು ಹಾಕಲಾಗಿತ್ತು. ಇದೀಗ ಸಂಶೋಧನೆಗೆ ಹೊಸ ಆಯಾಮಕ್ಕೆ ಚಾಲನೆ ಲಭಿಸಿದಂತಾಗಿದೆ. ಭವಿಷ್ಯದಲ್ಲಿ ಚಿಕಿತ್ಸಾ ಪದ್ಧತಿಗೆ ಹೊಸ ದಿಕ್ಕು ತೋರಲು ಡಿಜಿಟಲ್ಲ್ಯಾಜ್ ಪದ್ದತಿಯನ್ನು ಅನುಸರಿಸಲಾಗುತ್ತಿದೆ. ಇಂದಿನ ಪ್ರಸ್ತುತ ಜಗತ್ತು ವೈದ್ಯಕೀಯ ಕ್ಷೇತ್ರದ ಸಂಶೋಧಕರಿಂದ ಬಹಳಷ್ಟು ಹೊಸ ಆವಿಷ್ಕಾರದ ಬಗ್ಗೆ ತಿಳಿದುಕೊಳ್ಳಲು ಆಸಕ್ತವಾಗಿದೆ. ಕಾರ್ಯಾಗಾರವು ಸದ್ಬಳಕೆಯಾಗಿ ವಿಶ್ವಕ್ಕೆ ಮಾದರಿಯಾಗಬೇಕು ಎಂದು ಹೇಳಿದರು.
ಕೊಡಗು ದಂತ ವೈದ್ಯಕೀಯ ವಿದ್ಯಾಲಯದ ಆವರಣದಲ್ಲಿ ನಡೆಯುತ್ತಿರುವ ಮೂರು ದಿನಗಳ ಕಾರ್ಯಾಗಾರವು ದೇಶಕ್ಕಾಗಿ ತಮ್ಮ ಜೀವನವನ್ನು ಅರ್ಪಣೆ ಮಾಡಿದ ಕೊಡಗಿನ ವೀರಾ ಸೇನಾನಿಗಳಾದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ, ಜನರಲ್ ಕೆ.ಎಸ್. ತಿಮ್ಮಯ್ಯ, ಮತ್ತು ಸ್ವಾಡ್ರನ್ ಲೀಡರ್ ಎ.ಬಿ. ದೇವಯ್ಯ ಅವರು ಸ್ಮರಣಾರ್ಥ ಗೌರವ ಸೂಚಕವಾಗಿ ಕಾರ್ಯಗಾರ ನಡೆಯಲಿದೆ ಎಂದರು.
ಕಾರ್ಯಕ್ರಮದಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ ಪುತ್ರ ಏರ್ ಮಾರ್ಷಲ್ ನಂದಾ ಕಾರ್ಯಪ್ಪ, ಕೊಡಗು ದಂತ ವೈದ್ಯಕೀಯ ಮಹಾವಿದ್ಯಾಲಯದ ಚೇರ್ಮ್ಯಾನ್ ಕೆ.ಕೆ.ಅಯ್ಯಪ್ಪ, ಯುರೇಷೀಯನ್ ಅಸೋಸಿಯೇಷನ್ ಆಫ್ ಓರ್ತೋಡೋಂಟಿಕ್ಸ್ನ ಉಪಾಧ್ಯಕ್ಷ ಡಾ.ಯಾನ್ ರೈಮನ್, ಡಾ.ಅಲದೀನ್ ಸಬ್ಬಾಗ್, ವೈಜ್ಞಾನಿಕ ಸಮಿತಿಯ ಉಪಾಧ್ಯಕ್ಷ ಡಾ.ಗೌತಮ್, ಡಾ.ಸಂಜು ಸೋಮಯ್ಯ ಸೇರಿದಂತೆ ಯು.ಕೆ.ಯು.ಎಸ್.ಎ. ಜೋರ್ಡಾನ್, ಇಸ್ರೇಯಲ್, ಜರ್ಮನಿ, ಸೌತ್ ಆಫ್ರಿಕಾ, ಬಾಟ್ಸವಾನ, ಪೋರ್ಚುಗಲ್ ದೇಶಗಳ ಪ್ರತಿನಿಧಿಗಳು ಹಾಗೂ ಸುಮಾರು 120 ಮಂದಿ ದೇಶ ವಿದೇಶದ ಪ್ರತಿನಿಧಿಗಳು ಹಾಜರಿದ್ದರು.






